'ಪುಷ್ಪಕ ವಿಮಾನ'ದ ಭಿಕ್ಷುಕ ಕಣ್ಮುಂದೆ ಹಾದುಹೋದಾಗ
ವಾಸ್ತವದಲ್ಲಿ ಅಂತಹ ಘಟನೆಯೊಂದು ನಿಜಜೀವನದಲ್ಲೂ ನಡೆದಿದೆ. ಶ್ರೀಮಂತರೇ ಹೆಚ್ಚಾಗಿರುವ ಸೌದಿ ಅರೇಬಿಯಾ ಗೊತ್ತಲ್ಲಾ. ಅಲ್ಲಿ ಇಂತಹ (ಶ್ರೀಮಂತ) ಭಿಕ್ಷುಕಿಯೊಬ್ಬಳು ಮೊನ್ನೆ ಮೃತಪಟ್ಟಿದ್ದಾಳೆ. ಅದೂ ನೂರು ವರ್ಷದ ಹಣ್ಣು ಹಣ್ಣು ಮುದುಕಿ. ದಶಕಗಳ ಕಾಲ ಬೀದಿಬದಿಗಳಲ್ಲಿ ಭಿಕ್ಷೆ ಎತ್ತುತ್ತಾ ಜೀವನ ದೂಡಿದ ಈ ಮಹಿಳೆ ಮೃತಪಟ್ಟಾಗ ಆಯಮ್ಮ ಹತ್ತು ಲಕ್ಷಕ್ಕೂ ಹೆಚ್ಚು ಡಾಲರ್ ಹಣ ಸಂಪಾದಿಸಿದ್ದು ಬಹಿರಂಗವಾಗಿದೆ! [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಅನಾಥ ಮಹಿಳೆ ಅನಾಥವಾಗಿ ಬಿಟ್ಟು ಹೋಗಿದ್ದು ... ಚಿನ್ನದ ನಾಣ್ಯಗಳು, ಚಿನ್ನಾಭರಣ, ನಾಲ್ಕು ಬಂಗಲೆಗಳು, ಆಸ್ತಿಪಾಸ್ತಿ ದಾಖಲೆಗಳು ಸೇರಿದಂತೆ ಅನಾಥವಾಗಿ ಬದುಕಿದ ಈ ಮಹಿಳೆ ಇದೀಗ ಅನಾಥವಾಗಿ ಬಿಟ್ಟು ಹೋಗಿರುವ ಹಣ ಸರಿಯಾಗಿ USD 10,66,580. ಜೆಡ್ಡಾದ ಬೀದಿಬೀದಿಗಳಲ್ಲಿ ಅರ್ಧ ಶತಮಾನ ಕಾಲ ಭಿಕ್ಷೆ ಎತ್ತಿ ಸಂಪಾದಿಸಿರುವ ಹಣವಿದು. ಅಂದಹಾಗೆ, ಐಶಾ ಹೆಸರಿನ ಈ ಭಿಕ್ಷುಕಿಗೆ ಕಣ್ಣು ಕಾಣುತ್ತಿರಲಿಲ್ಲ.
ಭಿಕ್ಷುಕಿ ಐಶಾಗೆ ಅಮ್ಮ ಮತ್ತು ಸೋದರಿ ಬಿಟ್ಟರೆ ತನ್ನವರು ಅಂತ ಯಾರೂ ಇರಲಿಲ್ಲ ಎಂದು ಐಶಾ ಜತೆ ಬೆಳೆದ ಅಹಮದ್ ಅಲ್ ಸಯೀದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕುತೂಹಲದ ಸಂಗತಿಯೆಂದರೆ ಭಿಕ್ಷುಕಿ ಐಶಾ ಉಯಿಲು ಬರೆದಿಟ್ಟುಹೋಗಿದ್ದಾಳೆ. ಆ ಉಯಿಲನ್ನು ಅಹಮದ್ ಅಲ್ ಸಯೀದ್ ಕೈಗೆ ಭದ್ರವಾಗಿ ನೀಡಿದ್ದು, ತನ್ನಾಸ್ತಿಯನ್ನೆಲ್ಲಾ ಬಡಬಗ್ಗರಿಗೆ ದಾನ ಮಾಡಿಬಿಡು ಎಂದಿದ್ದಾಳೆ.
ತನ್ನ ಅಮ್ಮ ಮತ್ತು ಸೋದರಿ ಸತ್ತು ಹೋದ ಮೇಲೆ ಈ ಭಿಕ್ಷುಕಿ ಐಶಾಳ ಆಸ್ತಿಪಾಸ್ತಿ ಮತ್ತಷ್ಟು ಹೆಚ್ಚಾಯಿತಂತೆ. ಹೇಗೆಂದರೆ ಅಮ್ಮ ಮತ್ತು ಸೋದರಿಯ ಆಸ್ತಿಯೂ ಇದೇ ಐಶಾಳ ಕೈಸೇರಿತಂತೆ.
'ಆಯ್ತು ಇಷ್ಟೆಲ್ಲಾ ದುಡ್ಡಿದೆ. ಇನ್ನೂ ಏಕೆ ಭಿಕ್ಷೆ ಎತ್ತುವೆ. ಬಿಟ್ಬಿಡು' ಎಂದು ಅದೊಮ್ಮೆ ಅವಳಿಗೆ ಬುದ್ದಿ ಹೇಳಿದ್ದೆ. ಆದರೆ ಅವಳೋ... 'ಮುಂದೆ ಎಂತಹ ದುರ್ಭರ ದಿನಗಳು ಬರುತ್ತವೆಯೋ ಯಾರಿಗ್ಗೊತ್ತು, ಮಗಾ? ಅದಕ್ಕೆ ನಾನಂತೂ ಭಿಕ್ಷೆ ಎತ್ತೋದು ಬಿಡೋಲ್ಲ' ಎಂದು ಹೇಳಿದ್ದಾಗಿ ಅಹಮದ್ ಅಲ್ ಸಯೀದ್ ಮಾರ್ಮಿಕವಾಗಿ ನುಡಿದಿದ್ದಳಂತೆ!