ವಿಶ್ವಸಂಸ್ಥೆಯಲ್ಲಿ ಮೋದಿ ಮಾಡಿದ ಭಾಷಣದ 10 ಅತ್ಯುತ್ತಮ ಉಲ್ಲೇಖ
ನ್ಯೂಯಾರ್ಕ್, ಸೆಪ್ಟೆಂಬರ್ 26 : ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ಶನಿವಾರ 150 ವಿಶ್ವ ನಾಯಕರನ್ನು ಉದ್ದೇಶಿಸಿ ಭಾಷಣ ಮಾಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಸುಧಾರಣೆ ತಂದು ಇನ್ನಷ್ಟು ಬಲಿಷ್ಠವಾಗಿಸಬೇಕು ಮತ್ತು ಬಡತನದ ವಿರುದ್ಧ ಯುದ್ಧ ಸಾರಬೇಕು ಎಂದು ಕರೆ ನೀಡಿದ್ದಾರೆ.
"ನಾವು ಕಂಡಿರದ ಭವಿಷ್ಯತ್ತಿನ ಜಗತ್ತಿನ ಬಗ್ಗೆ ನಾವು ಚಿಂತಿಸಬೇಕು" ಎಂಬ ರಾಷ್ಟ್ರಪಿತ 'ಮಾಡರ್ನ್ ಹೀರೋ' ಮಹಾತ್ಮಾ ಗಾಂಧಿ ಅವರ ಹೇಳಿಕೆಯನ್ನು ಉದ್ಧರಿಸಿ ನರೇಂದ್ರ ಮೋದಿ ಅವರು ಭಾಷಣ ಆರಂಭಿಸಿದರು. ಭಾಷಣದ ಕೊನೆಗೆ ಶ್ಲೋಕಗಳನ್ನೂ ಪಠಿಸಿದ ಅವರು, ಸ್ವಚ್ಛ ಇಂಧನ, ಅರಣ್ಯ ಸಂರಕ್ಷಣೆ, ಇಂಧನ ಸದ್ಬಳಕೆ, ನದಿಗಳ ಸ್ವಚ್ಛೀಕರಣದ ಬಗ್ಗೆ ತಮ್ಮ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಹೇಳಿದರು.[ಸಿಲಿಕಾನ್ ವ್ಯಾಲಿಯಲ್ಲಿ ಮೋದಿ ಮಾಡಿದ ಸಿಡಿಲಿನಂಥ ಭಾಷಣ ಕೇಳಿ]
ಜಾಗತಿಕ ಅಭಿವೃದ್ಧಿಗಾಗಿ 150 ರಾಷ್ಟ್ರಗಳ ನಾಯಕರು, ಮುಂದಿನ 15 ವರ್ಷಗಳ ಕಾಲ ಸಾಧಿಸಬೇಕಾಗಿರುವ ಗುರಿಗಳ ಬಗ್ಗೆ ಪ್ರಮಾಣ ಸ್ವೀಕರಿಸಿದರು. ಏಳು ದಿನಗಳ ಅಮೆರಿಕ ಪ್ರವಾಸದಲ್ಲಿರುವ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದ 10 ಅತ್ಯುತ್ತಮ ಹೇಳಿಕೆಗಳು ಕೆಳಗಿನಂತಿವೆ. [ನರೇಂದ್ರ ಮೋದಿಯ ಅಮೆರಿಕಾ ಪ್ರವಾಸದ 8 ಚಿತ್ರಗಳು]
ಆಶಾಭಾವನೆ ತುಂಬಿದ ವಿಶ್ವಸಂಸ್ಥೆ
70 ವರ್ಷಗಳ ಹಿಂದೆ ಭಯಾನಕ ಎರಡನೇ ಮಹಾಯುದ್ಧ ಸಮಾಪ್ತಿಯಾದಾಗ ಹುಟ್ಟಿಕೊಂಡಿದ್ದು ವಿಶ್ವಸಂಸ್ಥೆ. ಈ ಸಂಸ್ಥೆ ವಿಶ್ವದಾದ್ಯಂತ ಜನರಲ್ಲಿ ಆಶಾಭಾವನೆಯನ್ನು ತುಂಬಿದೆ. ಇಂದು ಈ ಸಂಸ್ಥೆಗೆ ಹೊಸದಿಕ್ಕನ್ನು ತೋರಿಸಲು ನಾವಿಲ್ಲಿ ಸೇರಿದ್ದೇವೆ.
ಭದ್ರತಾ ಸಮಿತಿಯಲ್ಲಿ ತರಬೇಕು ಸುಧಾರಣೆ
ಭದ್ರತಾ ಸಮಿತಿ ಸೇರಿದಂತೆ ವಿಶ್ವಸಂಸ್ಥೆಯಲ್ಲಿ ನಾವು ಸಾಕಷ್ಟು ಸುಧಾರಣೆಗಳನ್ನು ತರಬೇಕು. ಸಂಸ್ಥೆಗೆ ಹೆಚ್ಚಿನ ನಂಬಿಕಾರ್ಹತೆ ಮತ್ತು ಬದ್ಧರೆ ಬರಬೇಕಾದರೆ ನಾವು ಇದನ್ನು ಸಾಧಿಸಲೇಬೇಕು.
ಎಂಥ ಜಗತ್ತನ್ನು ನಿರ್ಮಿಸಬೇಕೆಂದರೆ
ನಾವು ಎಂಥ ಜಗತ್ತನ್ನು ನಿರ್ಮಿಸಬೇಕೆಂದರೆ, ಈ ಜಗತ್ತಿನಲ್ಲಿ ಎಲ್ಲರಿಗೂ ತಾವು ಸುರಕ್ಷಿತವಾಗಿದ್ದೇವೆ ಮತ್ತು ಗೌರವದಿಂದಿದ್ದೇವೆ ಎಂಬ ಭಾವನೆ ಬರಬೇಕು. ಮುಂದಿನ ಪೀಳಿಗೆಗಾಗಿ ನಮ್ಮ ಭವಿಷ್ಯತ್ತನ್ನು ತ್ಯಾಗ ಮಾಡಬೇಕು, ಎಲ್ಲರಿಗೂ ಜೀವಿಸಲು ಅವಕಾಶ ಸಿಗಬೇಕು.
ಬಡತನ ನಿವಾರಣೆ ನಮ್ಮ ಪ್ರಥಮ ಆದ್ಯತೆ
ಬಡತನ ನಿವಾರಣೆ ನಮ್ಮ ಪ್ರಥಮ ಆದ್ಯತೆ ಆಗಬೇಕು. ಜಗತ್ತಿನಾದ್ಯಂತ 1.3 ಬಿಲಿಯನ್ ಜನರು ಬಡತನ ರೇಖೆಯ ಕೆಳಗೆ ಜೀವನ ನಡೆಸುತ್ತಿದ್ದಾರೆ. ಅವರಿಗೆ ಶಿಕ್ಷಣ ಮತ್ತು ನೈಪುಣ್ಯತೆ ನೀಡುವುದು ನಮ್ಮ ಆದ್ಯತೆಯಾಗಬೇಕು.
ಭಾರತ ಮತ್ತು ವಿಶ್ವಸಂಸ್ಥೆಯಲ್ಲಿ ಸಾಮ್ಯ
ಸುಸ್ಥಿರ ಅಭಿವೃದ್ಧಿಗಾಗಿ ಭಾರತ ಕಂಡುಕೊಂಡಿರುವ ಅಭಿವೃದ್ಧಿ ಮಂತ್ರ ಮತ್ತು ವಿಶ್ವಸಂಸ್ಥೆಯ ಗುರಿಯಲ್ಲಿ ಸಮಾನತೆ ಇರುವುದು ಭಾರತೀಯರಿಗೆ ತೃಪ್ತಿ ತರುವ ಸಂಗತಿ.
ಕೃಷಿ ಉದ್ಯಮ ಫಲಪ್ರದವಾಗಬೇಕು
ವಿಶ್ವದಲ್ಲಿ ಇಂದು ಕೃಷಿ ಉದ್ಯಮ ಫಲಪ್ರದ ಮಾಡಲು ಸಾಕಷ್ಟು ಕೆಲಸ ಮಾಡುತ್ತಿದ್ದೇವೆ ಮತ್ತು ಸಹಜ ಪ್ರಕೋಪಗಳಿಂದ ರೈತರಿಗೆ ತೊಂದರೆಯಾಗದಂತೆ ಸಹಕಾರ ನೀಡುತ್ತಿದ್ದೇವೆ.
ಎಲ್ಲರೂ ಒಬ್ಬರಿಗೊಬ್ಬರು ಅವಲಂಬಿತವಾಗಿದ್ದೇವೆ
ಈ ಜಗತ್ತು ಸಾಕಷ್ಟು ಸಂಪರ್ಕ ಸಾಧಿಸಿದೆ ಮತ್ತು ಎಲ್ಲರೂ ಒಬ್ಬರಿಗೊಬ್ಬರು ಅವಲಂಬಿತವಾಗಿದ್ದೇವೆ. ಮಾನವೀಯತೆಯ ಆಧಾರದ ಮೇಲೆ ಅಂತಾರಾಷ್ಟ್ರೀಯ ಒಡಂಬಡಿಕೆಗಳು ಕಾರ್ಯ ನಿರ್ವಹಿಸಬೇಕು.
ಇಡೀ ವಿಶ್ವವೇ ಒಂದು ಕುಟುಂಬ
ಭೂಮಿಯನ್ನು ಮಾತೆಗೆ ಹೋಲಿಸುವ ಸಂಸ್ಕೃತಿಯನ್ನು ನಾನು ಪ್ರತಿನಿಧಿಸುತ್ತೇನೆ. ಮತ್ತು ಇಡೀ ವಿಶ್ವವನ್ನು ಒಂದು ಕುಟುಂಬದಂತೆ ನಾವು ನೋಡುತ್ತೇವೆ.
ಸುಸ್ಥಿರ ಅಭಿವೃದ್ಧಿ ಎಲ್ಲ ರಾಷ್ಟ್ರಗಳ ಜವಾಬ್ದಾರಿ
ಸುಸ್ಥಿರ ಅಭಿವೃದ್ಧಿ ಎಲ್ಲ ರಾಷ್ಟ್ರಗಳ ಜವಾಬ್ದಾರಿ. ವಾತಾವರಣ ಬದಲಾವಣೆಯ ಸವಾಲನ್ನು ಎದುರಿಸಬೇಕಾದರೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ತಾಂತ್ರಿಕತೆ, ನೈಪುಣ್ಯತೆ ಮತ್ತು ಹಣಕಾಸಿನ ಸಹಾಯವನ್ನು ಯಾವುದೇ 'ಸ್ವಾರ್ಥವಿಲ್ಲದೆ' ಹಂಚಿಕೊಳ್ಳಬೇಕು.
ನಾನು 'ನೀಲಿ ಕ್ರಾಂತಿ'ಯ ಸ್ವಯಂಸೇವಕ
ನಾನು 'ನೀಲಿ ಕ್ರಾಂತಿ'ಯ ಸ್ವಯಂಸೇವಕ. ಸಮುದ್ರಗಳ ನಡುವೆ ಇರುವ ದ್ವೀಪಗಳ ಸಂರಕ್ಷಣೆ ಮತ್ತು ಅಭಿವದ್ಧಿಯಾಗಬೇಕು ಮತ್ತು ಜಲಸಂಪತ್ತಿನ ಸದ್ಬಳಕೆಯಾಗಬೇಕು.