ಇಂಡೋನೇಷ್ಯಾದಲ್ಲಿ ಸಂಚಾರ ನಿರ್ಬಂಧಕ್ಕೆ 1,75,000 ಭದ್ರತಾ ಸಿಬ್ಬಂದಿ!
ಜಕರ್ತಾ, ಏಪ್ರಿಲ್.23: ಕೊರೊನಾ ವೈರಸ್ ಸೋಂಕು ಹರಡುವಿಕೆ ನಡುವೆ ಜನರನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ. ಪವಿತ್ರ ರಂಜಾನ್ ಆಚರಣೆ ಹಿನ್ನೆಲ ಜನರ ಸಂಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಂಡೋನೆಷ್ಯಾ ಸರ್ಕಾರವು ತೀವ್ರ ಕಟ್ಟೆಚ್ಚರ ವಹಿಸಿದೆ.
ರಂಜಾನ್ ಹಬ್ಬದ ರಜೆ ಹಿನ್ನೆಲೆಯಲ್ಲಿ ಜನರ ಸಂಚಾರ ಹೆಚ್ಚಾಗುವ ಸಾಧ್ಯತೆಗಳಿದ್ದು, ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ರಕ್ಷಣೆಗೆ 1,75,000ಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕು ತಪಾಸಣೆಗೆ ಬ್ರಹ್ಮಾಸ್ತ್ರ!
ಇಂಡೋನೇಷ್ಯಾ ಲಾಕ್ ಡೌನ್ ಹೊರತಾಗಿಯೂ ಜನರು ರಂಜಾನ್ ಹಿನ್ನೆಲೆ ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ. ಇದರಿಂದ ಸೋಂಕು ಹರಡುವಿಕೆ ಅಪಾಯ ಹೆಚ್ಚಾಗಿದ್ದು, ಏಪ್ರಿಲ್.24ರಿಂದ ಮೇ.31ರವರೆಗೂ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇಂಡೋನೇಷ್ಯಾದಲ್ಲಿ 7,000 ಗಡಿ ದಾಟಿದ ಸೋಂಕಿತರ ಸಂಖ್ಯೆ:
ಇಂಡೋನೇಷ್ಯಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು 7,000ದ ಗಡಿ ದಾಟಿದ ಹಿನ್ನೆಲೆ ರಂಜಾನ್ ಹಬ್ಬದ ಸಾರ್ವತ್ರಿಕ ಆಚರಣೆ ಮತ್ತು ಪ್ರಾರ್ಥನೆಗೆ ನಿರ್ಬಂಧ ವಿಧಿಸಲಾಗಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಭೆಯಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಹಿರಿಯ ಪೊಲೀಸ್ ಆಯುಕ್ತ ಅಸೆಪ್ ಆದಿ ಸಪುತ್ರಾ ತಿಳಿಸಿದ್ದಾರೆ.
ಇನ್ನು, ದೇಶದಲ್ಲಿ ಇದುವರೆಗೂ ಕೊರೊನಾ ವೈರಸ್ ನಿಂದ 647ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದರೆ ಸೋಂಕಿತರ ಸಂಖ್ಯೆಯು 7,775ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 12 ಮಂದಿ ಸೋಂಕಿಗೆ ಬಲಿಯಾಗಿದ್ದರೆ, 357 ಜನರಿಗೆ ಸೋಂಕು ತಗಲಿರುವುದು ವರದಿಯಾಗಿದೆ. ದೇಶದಲ್ಲಿ ಈವರೆಗೂ 960 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.