ಗಣರಾಜ್ಯೋತ್ಸವದ ಅತಿಥಿ ಶೇಖ್ ಜಾಯೇದ್ ರಿಂದ 75 ಬಿಲಿಯನ್ ಡಾಲರ್ ಹೂಡಿಕೆ
ನವದೆಹಲಿ, ಜನವರಿ 25: ಈ ಬಾರಿಯ ಗಣರಾಜ್ಯೋತ್ಸವದ ಅತಿಥಿಯಾಗಿ ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಈಗಾಗಲೇ ಭಾರತಕ್ಕೆ ಬಂದಿದ್ದಾರೆ. ಗುರುವಾರ ಗಣರಾಜ್ಯೋತ್ಸವ ಪಥಸಂಚಲನದ ಮುಖ್ಯಅತಿಥಿ ಅವರು. ಅಂದಹಾಗೆ ಶೇಖ್ ಜಾಯೆದ್ ಶ್ರೀಮಂತ ಅತಿಥಿ.
ಅದಕ್ಕೆ ಕಾರಣ ಏನೆಂದರೆ ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ 75 ಬಿಲಿಯನ್ ಅಮೆರಿಕನ್ ಡಾಲರ್ ನೀಡುವ ಮಾತನ್ನು ಕೊಟ್ಟಿದ್ದಾರೆ ಶೇಖ್ ಜಾಯೆದ್. ಮುಂದಿನ ಹತ್ತು ವರ್ಷಗಳಲ್ಲಿ ಮೂಲಸೌಕರ್ಯಕ್ಕಾಗಿ ಭಾರತಕ್ಕೆ 1.5 ಟ್ರಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಅಗತ್ಯವಿದೆ. 2019ರೊಳಗೆ ಏಳು ಲಕ್ಷ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ ಕೇಂದ್ರ ಸರಕಾರ.
ಕಳೆದ ವರ್ಷ ಬೀಜಿಂಗ್ ನಲ್ಲಿ ವಿತ್ತಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದ ಮಾತನ್ನು ನೆನಪಿಸಿಕೊಳ್ಳುವುದಾದರೆ, ಭಾರತದಲ್ಲಿ ರೈಲು, ರಸ್ತೆ, ಬಂದರು, ವಿಮಾನ ನಿಲ್ದಾಣ ಅಗತ್ಯವಾದಷ್ಟಿಲ್ಲ. ಈಗ ಅಭಿವೃದ್ಧಿ ವೇಗದಲ್ಲಿ ಅವು ಹೊರೆಯಾಗಿವೆ ಎಂದು ಅವರು ಹೇಳಿದ್ದರು.
ಬ್ಯಾಂಕ್ ವೊಂದರಿಂದಲೇ ಮೂಲಸೌಕರ್ಯ ಕೊರತೆ ನೀಗಿಸಲು ಸಾಧ್ಯವಿಲ್ಲ. ಪರ್ಯಾಯವಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮತ್ತು ವಿದೇಶಿ ಬಂಡವಾಳ ಕೂಡ ಹಣಕಾಸಿನ ಪ್ರಮುಖ ಮೂಲವಾಗುತ್ತದೆ. ನ್ಯಾಷನಲ್ ಇನ್ವೆಸ್ಟ್ ಮೆಂಟ್ ಮತ್ತು ಇನ್ಫ್ರಾಸ್ಟ್ರಕ್ಚರ್ ಫಂಡ್ ನಲ್ಲಿ 75 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ದೀರ್ಘಾವಧಿವರೆಗೆ ಹೂಡಲು ಮಾರ್ಚ್ 2016ರಲ್ಲಿ ಭಾರತ-ಯುಎಇ ಮಧ್ಯೆ ಒಪ್ಪಂದವಾಗಿತ್ತು.
"ಮುಂದಿನ ಐವತ್ತು ವರ್ಷದಲ್ಲಿ ನಮ್ಮ ಬಳಿ ಕೊನೆ ಬ್ಯಾರಲ್ ತೈಲ ಇದ್ದಾಗ, ಅದು ಬೇರೆ ದೇಶಕ್ಕೆ ರಫ್ತು ಮಾಡಿದ ನಂತರ, ನಾವು ದುಃಖ ಪಡಬೇಕಾ?" ಎಂದು ಕಳೆದ ವರ್ಷ ಸರಕಾರದ ಸಮಾವೇಶ ನಡೆದಾಗ ಪ್ರಶ್ನಿಸಿದ್ದರು ಶೇಖ್. "ನಾವಿಂದು ಸರಿಯಾದ ವಲಯದಲ್ಲಿ ಬಂಡವಾಳ ಹೂಡಿದರೆ, ಮುಂದೊಂದು ದಿನ ತೈಲ ಮುಗಿದುಹೋದರೂ ನಾವು ಸಂತೋಷದಿಂದ ಇರಬಹುದು" ಎಂದು ಅದಕ್ಕೆ ಉತ್ತರವನ್ನೂ ಅವರೇ ಹೇಳಿದ್ದರು.
ಈಗ ಭಾರತದಲ್ಲಿ ಹಣ ಹೂಡಿಕೆ ಮಾಡುತ್ತಿದೆ ಯುಎಇ. ಅಂದಹಾಗೆ, ವ್ಯಾಪಾರ-ಬಂಡವಾಳ ಹೂಡಿಕೆ ಹೊರತಾಗಿ ರಕ್ಷಣೆ ವಿಚಾರದಲ್ಲೂ ಎರಡು ದೇಶಗಳ ಮಧ್ಯೆ ಬಾಂಧವ್ಯ ಬೆಸೆಯುತ್ತಿದೆ. ಭಯೋತ್ಪಾದನೆ ನಿಗ್ರಹದಲ್ಲೂ ಭಾರತ ಹಾಗೂ ಯುಎಇ ಮಧ್ಯೆ ಸಹಕಾರ ವೃದ್ಧಿಸಿದೆ.