ಅಮರ್ ಸಿಂಗ್ ಗೆ 24 ಕಮ್ಯಾಂಡೋಗಳ ಕಾವಲು!
ನವದೆಹಲಿ, ಜ. 8: ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಭುಗಿಲೆದ್ದಿರುವ ಭಿನ್ನಮತದ ಹಿನ್ನೆಲೆಯಲ್ಲಿ ಆ ಪಕ್ಷದ ರಾಜ್ಯಸಭಾ ಸದಸ್ಯರಾದ ಅಮರ್ ಸಿಂಗ್ ಅವರಿಗೆ 'ಝಡ್' ಶ್ರೇಣಿಯ ಭದ್ರತೆ ನೀಡಲಾಗಿದೆ.
ಹೀಗಾಗಿ, ಅಮರ್ ಸಿಂಗ್ ಅವರನ್ನು ನಿತ್ಯವೂ 24 ಅರೆಸೇನಾ ಸಿಬ್ಬಂದಿಯ ಕಮ್ಯಾಂಡೋಗಳು ಸುತ್ತುವರೆದು ಕಾವಲು ಕಾಯಲಿದ್ದಾರೆ.
ಸಮಾಜವಾದಿ ಪಕ್ಷದಲ್ಲಿ ಇತ್ತೀಚೆಗೆ ನಡೆದಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ಸನ್ನಿಹಿತವಾಗಿರುವುದರಿಂದ ಅಮರ್ ಸಿಂಗ್ ಅವರಿಗೆ ತೊಂದರೆಯಾಗಬಹುದಾದ ಲಕ್ಷಣಗಳು ಗೋಚರಿಸಿವೆ ಎನ್ನಲಾಗಿದೆ.
ಸಮಾಜವಾದಿ ಪಕ್ಷದ ಧುರೀಣ ಮುಲಾಯಂ ಸಿಂಗ್ ಅವರ ಆಪ್ತರಾಗಿರುವ ಕಾರಣಕ್ಕೆ ಅಮರ್ ಸಿಂಗ್ ಅವರ ಮೇಲೆ ದಾಳಿ ನಡೆಸಬಹುದೆಂಬ ಸಂಶಯವನ್ನು ಕೇಂದ್ರ ಗುಪ್ತಚರ ಇಲಾಖೆಯು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿ, ಅವರಿಗೆ ಅತಿ ಗಣ್ಯರಿಗೆ ನೀಡಲಾಗುವ ಭದ್ರತೆಯನ್ನು ನೀಡಬೇಕೆಂದು ತಿಳಿಸಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಮರ್ ಅವರಿಗೆ ಝಡ್ ಶ್ರೇಣಿಯ ಭದ್ರತೆ ನೀಡಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಗುಪ್ತದಳ ಇಲಾಖೆಯ ಮಾಹಿತಿ ಬಂದ ಕೂಡಲೇ ಕ್ರಮ ಕೈಗೊಂಡಿರುವ ಕೇಂದ್ರ ಗೃಹ ಸಚಿವಾಲಯ, ಕೇಂದ್ರೀಯ ಔದ್ಯೋಗಿಕಾ ವಲಯದ ಭದ್ರತಾ ಪಡೆಗೆ (ಸಿಐಎಸ್ಎಫ್) ಸೂಚನೆ ನೀಡಿ, ಅಮರ್ ಸಿಂಗ್ ಅವರ ಬಿಗಿ ಭದ್ರತೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಹೇಳಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರೀಯ ಅರೆಸೇನಾ ಸಿಬ್ಬಂದಿಯನ್ನು ಅಮರ್ ಸಿಂಗ್ ಅವರ ರಕ್ಷಣೆಗೆ ನಿಯೋಜಿಸಲಾಗಿದೆ.
2008ರಲ್ಲಿ ಅಮರ್ ಸಿಂಗ್ ಅವರಿಗೆ ಸಿಐಎಸ್ಎಫ್ ವತಿಯಿಂದ ಭದ್ರತೆ ನೀಡಲಾಗಿತ್ತು. ಆನಂತರ, ಅವರ ಭದ್ರತೆಯ ಜವಾಬ್ದಾರಿಯನ್ನು ಉತ್ತರ ಪ್ರದೇಶ ಪೊಲೀಸ್ ಇಲಾಖೆ ವಹಿಸಿಕೊಂಡಿತ್ತು.