ಹಾವಿಗೆ ಕಿಸ್ ನೀಡಲು ಹೋಗಿ ಸಾವು ತಂದುಕೊಂಡ
ಮುಂಬೈ, ಫೆಬ್ರವರಿ 7: ಹಾವಿಗೆ ಕಿಸ್ ಕೊಡಲು ಹೋಗಿ, ಹಾವು ಕಚ್ಚಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನವಿ ಮುಂಬೈ ಸಮೀಪದ ಬೇಲಾಪುರ್ ನಲ್ಲಿ ನಡೆದಿದೆ. ಬೇಲಾಪುರ್ ಸಿಬಿಡಿ ನಿವಾಸ್ ಸೋಮನಾಥ್ ಮಾತ್ರೆ (21) ಹಾವಿನಿಂದ ಕಚ್ಚಿಸಿಕೊಂಡ ಯುವಕನಾಗಿದ್ದಾನೆ.
ಮುಂಬೈ ಬೇಲಾಪುರ್ ನಿವಾಸಿಯಾದ ಸೋಮನಾಥ್ ಮಾತ್ರೆ ಫೆಬ್ರವರಿ 2 ರಂದು ಸಮೀಪದ ಮನೆ ಪಕ್ಕ ಹಾವು ಹಿಡಿಯಲು ಹೋಗಿದ್ದ. ಎಂದಿನಂತೆ ಹಾವು ಹಿಡಿದು ಅದಕ್ಕೆ ಮತ್ತು ಕೊಡಲು ಹೋಗಿದ್ದಾನೆ. ಆದರೆ ಯಾವತ್ತೂ ಹಾವಿಗೆ ಆರಾಮವಾಗಿ ಕಿಸ್ ನೀಡುತ್ತಿದ್ದ ಮಾತ್ರೆ ಈ ಬಾರಿ ಮಾತ್ರ ಕಚ್ಚಿಸಿಕೊಂಡಿದ್ದ.[ತಮಿಳುನಾಡಲ್ಲಿ ಹಾವು ಹಿಡೀತಿದ್ದವರಿಗೆ 'ಪುಂಗಿ' ಊದಿದ ಅಮೆರಿಕ]
ಹಾವು ಕಚ್ಚಿಸಿಕೊಂಡು ಪ್ರಜ್ಞೆ ತಪ್ಪಿದ ಸೋಮನಾಥ್ ನನ್ನು ನಂತರ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಮೂರು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 6 ರಂದು ಮಾತ್ರೆ ಅಸುನೀಗಿದ್ದಾನೆ.[ಕಾರ್ಕಳ : ಹಾವು ಹಿಡಿಯಲು ಹೋಗಿ ಸಾವು ತಂದುಕೊಂಡ]
ಸೋಮನಾಥ್ ಸಾವಿನ ಬೆನ್ನಿಗೆ ಪ್ರಾಣಿ ಕಾರ್ಯಕರ್ತರು ಹಾವು ಹಿಡಿಯಲು ನಿಯಮಾವಳಿಗಳನ್ನು ಜಾರಿಗೆ ತರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದಾರೆ. ಮಾತ್ರವಲ್ಲ ಹಾವಿಗೆ ಕಿಸ್ ನೀಡುವಂತ ಅಪಾಯಕಾರಿ ಸ್ಟಂಟ್ ಗಳನ್ನು ಬ್ಯಾನ್ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
(ಚಿತ್ರ ಕೃಪೆ: ಪ್ರಿಯಾಂಕಾ ಕದಮ್, ಫೇಸ್ ಬುಕ್)