ನಿಮಗೆ ನಾಚಿಕೆಯಾಗಬೇಕು, ಕ್ಷಮೆಯಾಚಿಸಿ : ಸ್ಯಾಮ್ ವಿರುದ್ಧ ಹರಿಹಾಯ್ದ ರಾಹುಲ್
ಫತೇಹ್ ಘರ್ ಸಾಹಿಬ್, ಮೇ 13 : ಸಿಖ್ ಹತ್ಯಾಕಾಂಡದ ಬಗ್ಗೆ ಸ್ಯಾಮ್ ಪಿತ್ರೋಡಾ ಆಡಿರುವ ಬೇಜವಾಬ್ದಾರಿ ಮಾತುಗಳ ವಿರುದ್ಧ ಕಾಂಗ್ರೆಸ್ ವಿರುದ್ಧ ಮತ್ತೆ ಕೆಂಡ ಕಾರಿದ್ದು, 'ನಿಮ್ಮ ಮಾತು ಸಂಪೂರ್ಣ ತಪ್ಪು, ನಿಮಗೆ ನಾಚಿಕೆಯಾಗಬೇಕು, ನೀವು ಇಡೀ ದೇಶದ ಕ್ಷಮೆ ಯಾಚಿಸಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ನ ಫತೇಹ್ ಘರ್ ಸಾಹಿಬ್ ನಲ್ಲಿ ಸೋಮವಾರ ಪ್ರಚಾರ ಮಾಡುತ್ತಿದ್ದ ಅವರು, 1984ರ ಸಿಖ್ ವಿರೋಧಿ ದಂಗೆಯ ಬಗ್ಗೆ ಸ್ಯಾಮ್ ಪಿತ್ರೋಡಾ ಅವರು ಹೇಳಿದ್ದು ಸಂಪೂರ್ಣ ತಪ್ಪು. ಇದಕ್ಕಾಗಿ ದೇಶದ ಕ್ಷಮೆ ಕೇಳಬೇಕೆಂದು ಫೋನಿನಲ್ಲಿ ಹೇಳಿದ್ದೇನೆ. ಇಂಥ ಹೇಳಿಕೆ ನೀಡಲು ನಿಮಗೆ ನಾಚಿಕೆಯಾಗಬೇಕು, ಸಾರ್ವಜನಿಕವಾಗಿ ದೇಶದ ಕ್ಷಮೆ ಕೇಳಿ ಎಂದು ಹೇಳಿದ್ದೇನೆ ಎಂದು ಬಹಿರಂಗ ಸಭೆಯಲ್ಲಿ ರಾಹುಲ್ ಹೇಳಿದರು.
ಫೇಸ್ ಬುಕ್ ನಲ್ಲಿ ಸ್ಯಾಮ್ ಪಿತ್ರೋಡಾಗೆ ರಾಹುಲ್ ಗಾಂಧಿ ತಪರಾಕಿ
ಕೆಲ ದಿನಗಳ ಹಿಂದೆ, ಪತ್ರಿಕಾಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ 77 ವರ್ಷದ ಹಿರಿಯ ನಾಯಕ, ಟೆಲಿಕಾಂ ಕ್ರಾಂತಿಯ ಹರಿಕಾರ, ಉದ್ಯಮಿ ಸ್ಯಾಮ್ ಪಿತ್ರೋಡಾ ಅವರು, 1984ರ ಸಿಖ್ ಹತ್ಯಾಕಾಂಡದ ಬಗ್ಗೆ ಪ್ರಸ್ತಾಪಿಸುತ್ತ 'ಹುವಾ ಸೋ ಹುವಾ' (ಆದಿದ್ದಾಗಿ ಹೋಯಿತು) ಎಂದು ಹೇಳಿದ್ದರು. ಇದನ್ನು ಸಿಖ್ ಹತ್ಯಾಕಾಂಡಕ್ಕೆ ಅಂದಿನ ಕಾಂಗ್ರೆಸ್ ನಾಯಕರೇ ಒಪ್ಪಿಗೆ ನೀಡಿದ್ದಾರೆ ಎಂಬಂತೆ ಬಿಂಬಿಸಲಾಗುತ್ತಿದೆ.
ಈ ಹೇಳಿಕೆಗೆ ಭಾರತೀಯ ಜನತಾ ಪಕ್ಷದಿಂದ ಭಾರೀ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆ ಮತ್ತು ಚುನಾವಣೆಗೆ ಬಳಸಲು ಆರಂಭವಾಗುತ್ತಿದ್ದಂತೆ, ಆ ಹೇಳಿಕೆಗೂ ಕಾಂಗ್ರೆಸ್ಸಿಗೂ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಅಂತರ ಕಾಪಾಡಿಕೊಂಡಿತು. ಈ ಹೇಳಿಕೆ ಕಾಂಗ್ರೆಸ್ಸಿಗೆ ತಿರುಗುಬಾಣವಾಗಿದ್ದು, ಲೋಕಸಭೆ ಚುನಾವಣೆಗೆ ಇನ್ನು ಒಂದೇ ಹಂತದ ಮತದಾನವಿರುವಾಗ ಭಾರೀ ಮುಜುಗರ ತಂದಿದೆ. ಈ ಕಾರಣಕ್ಕಾಗಿಯೇ ರಾಹುಲ್ ಅವರು ಕೆಂಡಾಮಂಡಲರಾಗಿದ್ದಾರೆ.
ಸ್ಯಾಮ್ ಪಿತ್ರೋಡಾ ಕಾಂಗ್ರೆಸ್ನ ಮಣಿ ಶಂಕರ್ ಅಯ್ಯರ್ ಆಗುತ್ತಿದ್ದಾರಾ?
ಸ್ಯಾಮ್ ಪಿತ್ರೋಡಾ ಅವರು ನನಗೆ ಹಿಂದಿ ಸರಿಯಾಗಿ ಮಾತಾಡಲು ಬರುವುದಿಲ್ಲ. ಆ ಮಾತು ಹೇಳಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದರು. ನನ್ನ ಮಾತಿನ ಅರ್ಥವೇನೆಂದರೆ, ನಮಗೆ ಚರ್ಚಿಸಲು ಇನ್ನೂ ಬೇಕಾದಷ್ಟು ವಿಷಯಗಳಿವೆ, ಸಿಖ್ ದಂಗೆಯಿಂದ ನಾವು ಮುಂದೆ ಹೋಗಬೇಕು ಎಂದಷ್ಟೇ ಆಗಿತ್ತು ಎಂದು ಅವರು ಸ್ಪಷ್ಟೀಕರಣ ನೀಡಿದ್ದರು. ನನ್ನ ಹೇಳಿಕೆಗೆ ತಪ್ಪಾರ್ಥ ಕಲ್ಪಿಸಲಾಗಿದೆ, ಆದರೂ ಕ್ಷಮೆ ಯಾಚಿಸುತ್ತೇನೆ ಎಂದು ಸುದ್ದಿ ಸಂಸ್ಥೆಯೊಂದಿಗೆ ಸ್ಯಾಮ್ ಹೇಳಿದ್ದರು. ಆದರೆ ಬಹಿರಂಗವಾಗಿ ಕ್ಷಮೆ ಯಾಚಿಸಿಲ್ಲ.
ಸಿಖ್ ಹತ್ಯಾಕಾಂಡ ಕುರಿತ ಹೇಳಿಕೆ: ಸ್ಯಾಮ್ ಪಿತ್ರೋಡಾ ಕ್ಷಮೆ ಯಾಚನೆ
ಕಾಂಗ್ರೆಸ್ ಪಕ್ಷದ ವಿದೇಶಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಸ್ಯಾಮ್ ಪಿತ್ರೋಡಾ ಅವರನ್ನು ರಾಹುಲ್ ಗಾಂಧಿ ಅವರ ಮಾರ್ಗದರ್ಶಿಯೆಂದೇ ಬಿಂಬಿಸಲಾಗಿದೆ. ದುಬೈ, ಅಮೆರಿಕ, ಸಿಂಗಪುರ ಸೇರಿದಂತೆ ವಿದೇಶಗಳಲ್ಲಿ ನಡೆಸಲಾದ ಹಲವಾರು ಸಭೆಗಳನ್ನು ರಾಹುಲ್ ಗಾಂಧಿಗಾಗಿ ಸ್ಯಾಮ್ ಪಿತ್ರೋಡಾ ಅವರು ಆಯೋಜಿಸಿದ್ದರು. ಆದರೆ, ಆಡಾಡುತ್ತಲೇ ಸ್ಯಾಮ್ ಪಿತ್ರೋಡಾ ಅವರು ಎಡವಟ್ಟು ಮಾಡಿಕೊಂಡಿದ್ದಾರೆ.