''ಒಬ್ಬ ಉಗ್ರರನ್ನು ಕೊಂದರೆ, 10 ಉಗ್ರರು ಹುಟ್ಟುತ್ತಾರೆ''
ಕಾಶ್ಮೀರದಲ್ಲಿ ಒಬ್ಬ ಉಗ್ರರನ್ನು ಕೊಂದರೆ 10 ಉಗ್ರರು ಹುಟ್ಟಿಕೊಳ್ಳುತ್ತಾರೆ. ಹುರಿಯತ್ ಕಾನ್ಫರೆನ್ಸ್ ಸಂಘಟನೆಯ ನಾಯಕ ಮೀರ್ವಾಜ್ ತಿಳಿಸಿದ್ದಾರೆ.
ಶ್ರೀನಗರ, ಆಗಸ್ಟ್ 18: 'ಭಾರತೀಯ ಸೇನೆಯು ಒಬ್ಬ ಉಗ್ರನನ್ನು ಕೊಂದರೆ, ಹತ್ತು ಉಗ್ರರು ಹುಟ್ಟಿಕೊಳ್ಳುತ್ತಾರೆ'' - ಇದು ಕಾಶ್ಮೀರದ ಪ್ರತ್ಯೇಕತಾವಾದಿ ಹಾಗೂ ಹುರಿಯತ್ ಕಾನ್ಫರೆನ್ಸ್ ನ ನಾಯಕ ಮೀರ್ವಾಯಿಜ್ ಫಾರೂಕ್ ಮಾತು.
ಕಾಶ್ಮೀರದಲ್ಲಿ ಇತ್ತೀಚೆಗೆ ಭಾರತೀಯ ಸೇನೆಯು ಕೈಗೊಂಡ ಕೆಲವಾರು ಕಾರ್ಯಾಚರಣೆಗಳಲ್ಲಿ ಅತ್ಯಂತ ಕುಖ್ಯಾತ ಉಗ್ರರೇ ಬಲಿಯಾಗಿರುವ ಹಿನ್ನೆಲೆಯಲ್ಲಿ ಅವರು ಹೀಗೆ ಹೇಳಿದ್ದಾರೆ.
''ಕಾಶ್ಮೀರದಲ್ಲಿ ಸೇನೆಯು ಹಲವಾರು ಉಗ್ರರನ್ನು ಕೊಂದಿರಬಹುದು. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುವ ಜನರನ್ನು ಮಟ್ಟ ಹಾಕಬಹುದು. ಆದರೆ, ಭಾರತೀಯ ಸೇನೆಯು ಒಬ್ಬ ಉಗ್ರನನ್ನು ಕೊಂದರೆ, 10 ಉಗ್ರರು ನಿಲ್ಲುವರು. ಉಗ್ರರನ್ನು ಕೊಲ್ಲುವುದರಿಂದ ಮಾತ್ರ ಕಾಶ್ಮೀರದಲ್ಲಿ ಶಾಂತಿ ತರುತ್ತೇವೆ ಎಂಬ ಭಾರತೀಯ ಸೇನೆಯ ಅನಿಸಿಕೆ ಕೇವಲ ಭ್ರಮೆಯಷ್ಟೇ'' ಎಂದು ತಿಳಿಸಿದರು.
ದಕ್ಷಿಣ ಕಾಶ್ಮೀರವನ್ನು ಭಾರತೀಯ ಸೇನೆಯು ಹತ್ಯಾಕಾಂಡದ ತಾಣವನ್ನಾಗಿಸಿದೆ ಎಂದು ಆರೋಪಿಸಿದ ಅವರು, ಕಾಶ್ಮೀರದ ಯುವಕರನ್ನು ಇಲ್ಲಿ ಅನಾಮತ್ತಾಗಿ ಕೊಲ್ಲಲಾಗುತ್ತಿದೆ ಎಂದರು.