ಗಂಭೀರ ಆರೋಗ್ಯ ಸಮಸ್ಯೆಗೆ ಇಪಿಎಫ್ ಹಣ ವಿಥ್ ಡ್ರಾ ನಿಯಮ ಸಡಿಲ
ಇಪಿಎಫ್ ಒ (ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟ) ಸದಸ್ಯರು ತೀರಾ ಗಂಭೀರ ಆರೋಗ್ಯ ಸಮಸ್ಯೆ ಇರುವ ಸನ್ನಿವೇಶದಲ್ಲಿ ಸ್ವಯಂಘೋಷಣಾ ಪತ್ರ ನೀಡಿ, ಹಣ ವಿಥ್ ಡ್ರಾ ಮಾಡಬಹುದು ಎಂದು ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ
ನವದೆಹಲಿ, ಏಪ್ರಿಲ್ 27: ಗಂಭೀರವಾದ ಕಾಯಿಲೆಗಳಿಗೆ ತುರ್ತು ಚಿಕಿತ್ಸೆ ತೆಗೆದುಕೊಳ್ಳಬೇಕಾದ ಸನ್ನಿವೇಶದಲ್ಲಿ ಭವಿಷ್ಯನಿಧಿಯ ಹಣ ತೆಗೆದುಕೊಳ್ಳುವುದಕ್ಕೆ ಉದ್ಯೋಗದಾತರ ಅನುಮತಿಯೋ ಅಥವಾ ವೈದ್ಯರ ಪ್ರಮಾಣಪತ್ರವೋ ಕಡ್ಡಾಯವಲ್ಲ ಎಂದು ಕಾರ್ಮಿಕ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.
ತೀರಾ ಗಂಭೀರ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಅಗತ್ಯವಿದ್ದಲ್ಲಿ ಸ್ವಯಂ ಘೋಷಣಾ ಅರ್ಜಿಯನ್ನು ಸಲ್ಲಿಸಿ, ಭವಿಷ್ಯನಿಧಿಯಿಂದ ಹಣ ತೆಗೆದುಕೊಳ್ಳಬಹುದಾಗಿದೆ. ಹೊಸ ನಿಯಮಾವಳಿ ಪ್ರಕಾರ ಉದ್ಯೋಗಿಗಳು ಕಾಂಪೋಸಿಟ್ ಅರ್ಜಿಯನ್ನು ತುಂಬಿ, ಸಲ್ಲಿಸಬೇಕಾಗುತ್ತದೆ.[ಪಿಎಫ್ ಖಾತೆದಾರರಿಗೆ ಇಲ್ಲಿದೆ ಸಿಹಿ ಸುದ್ದಿ]
ಒಂದು ವೇಳೆ ಉದ್ಯೋಗಿಯು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿರಬೇಕಾದ ಸನ್ನಿವೇಶ ಸೃಷ್ಟಿಯಾದರೆ, ಪ್ರಮುಖ ಶಸ್ತ್ರಚಿಕಿತ್ಸೆ ವೇಳೆ 6 ತಿಂಗಳ ಸಂಬಳದಷ್ಟು ಹಣವನ್ನು ಇಪಿಎಫ್ ನಿಂದ ತೆಗೆಯಬಹುದು. ಟಿಬಿ, ಲೆಪ್ರಸಿ, ಪಾರ್ಶ್ವವಾಯು, ಹೃದಯ ಸಂಬಂಧಿ ಸಮಸ್ಯೆ ಹಾಗೂ ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ಈ ನಿಯಮ ಅನ್ವಯವಾಗುತ್ತದೆ.
ಇನ್ನು ಅಂಗವೈಕಲ್ಯ ಇರುವವರು ವೈದ್ಯರಿಂದ ಪ್ರಮಾಣ ಪತ್ರ ಪಡೆದು, ಅದನ್ನು ಸಲ್ಲಿಸಿದರೆ ಅಗತ್ಯ ಸಲಕರಣೆಗಳನ್ನು ಖರೀದಿಸುವುದಕ್ಕೆ, ಚಿಕಿತ್ಸೆಗಾಗಿ ಹಣ ವಿಥ್ ಡ್ರಾ ಮಾಡಬಹುದಾಗಿದೆ. ಈ ನಿಯಮ ಜಾರಿಗೆ ಬರುವುದಕ್ಕೂ ಮುನ್ನ ಉದ್ಯೋಗಿಗಳು ಉದ್ಯೋಗದಾತರಿಂದ ಪ್ರಮಾಣಪತ್ರ ಪಡೆಯಬೇಕಿತ್ತು.[ಮನೆ ಕಟ್ಟಲು, ಖರೀದಿಸಲು ಕಾರ್ಮಿಕ ಭವಿಷ್ಯ ನಿಧಿ ಯೋಜನೆ]
ಉದ್ಯೋಗಿಗೆ ಇಎಸ್ ಐ ಸೌಲಭ್ಯವಿಲ್ಲ ಎಂದು ತಿಳಿಸುವ ಉದ್ಯೋಗದಾತರ ಪ್ರಮಾಣ ಪತ್ರ ಹಾಗೂ ಗಂಭೀರ ಆರೋಗ್ಯ ಸಮಸ್ಯೆ ಇರುವ ಬಗ್ಗೆ ವೈದ್ಯರ ಪ್ರಮಾಣ ಪತ್ರವನ್ನು ಈ ಹಿಂದೆ ಸಲ್ಲಿಸಬೇಕಿತ್ತು.