2019 ರ ಲೋಕಸಭಾ ಚುನಾವಣೆ: ಯೋಗಿಗೆ ಆರೆಸ್ಸೆಸ್ ಸಲಹೆ ಏನು?
ಲಕ್ನೋ, ಜೂನ್ 27: 2019 ರ ಲೋಕಸಭಾ ಚುನಾವಣೆಗೆ ಈಗಾಗಲೇ ಬಿಜೆಪಿ ರಣತಂತ್ರ ರೂಪಿಸುತ್ತಿದೆ. 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 2014 ರಲ್ಲಿ ತೋರಿದ ಅಮೋಘ ಸಾಧನೆಯನ್ನೇ ಈ ಬಾರಿಯೂ ತೋರುವ ಉತ್ಸುಕತೆಯಲ್ಲಿ ಬಿಜೆಪಿ ಇದೆ.
ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೆರವು ಕೇಳಿದ್ದು, ಈ ಸಂಬಂಧ ಆರೆಸ್ಸೆಸ್ ಹಿರಿಯರಾದ ಭಯ್ಯಾಜಿ ಜೋಷಿ ಮತ್ತು ಮೋಹನ್ ಭಾಗವತ್ ಅವರನ್ನು ಭೇಟಿಯಾಗಿದ್ದಾರೆ.
ಪ್ರಣವ್ ಭೇಟಿ ಬಳಿಕ ಆರ್ಎಸ್ಎಸ್ ಸೇರುವವರ ಸಂಖ್ಯೆ 5 ಪಟ್ಟು ಹೆಚ್ಚಳ
ಈ ಸಂದರ್ಭದಲ್ಲಿ ಕೆಲವು ಸಲಹೆಗಳನ್ನು ಆರೆಸ್ಸೆಸ್ ನಾಯಕರು ನೀಡಿದ್ದು, ಯೋಗಿ ಆದಿತ್ಯನಾಥ್ ಸಂಪುಟಕ್ಕೆ ಸದ್ಯದಲ್ಲೇ ಕತ್ತರಿ ಬೀಳುವ ಸಾಧ್ಯತೆ ಇದೆ. 'ಕನಿಷ್ಠ ಖಾತೆ, ಗರಿಷ್ಠ ಆಡಳಿತ' ಎಂಬ ಮೋದಿಯವರ ತತ್ತತ್ವವನ್ನೇ ಪುನರುಚ್ಛರಿಸಿರುವ ಆರೆಸ್ಸೆಸ್ ನಾಯಕರು, ಕೆಲವೇ ಮಂತ್ರಿಸ್ಥಾನಗಳನ್ನು ಉಳಿಸಿಕೊಂಡು ಆಡಳಿತ ನಡೆಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಇದರಿಂದಾಗಿ ಲೋಕಸಭಾ ಚುನಾವಣೆಗೂ ಮುನ್ನ, ಉತ್ತರ ಪ್ರದೇಶ ರಾಜಕೀಯದಲ್ಲಿ ಕೆಲವು ಮಹತ್ವದ ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಸಚಿವ ಸಂಪುಟ ಪುನಾರಚನೆಯಾಗಿ ಕೆಲವು ಮಂತ್ರಿಗಳು ಖಾತೆ ಕಳೆದುಕೊಳ್ಳುವ ಸಂಭವವಿದೆ.