ನಾಯಕತ್ವ ಪ್ರಶ್ನಿಸಿದ ಯಾದವ್, ಭೂಷಣ್ ಗೆ ಉಚ್ಚಾಟನೆ ಶಿಕ್ಷೆ
ನವದೆಹಲಿ, ಮಾ, 28 : ಕಳೆದ ಕೆಲ ದಿನಗಳಿಂದ ಆಮ್ ಆದ್ಮಿ ಪಕ್ಷದಲ್ಲಿ ಹೊಗೆಯಾಡುತ್ತಿದ್ದ ಭಿನ್ನಮತ ಶನಿವಾರ ತಾರಕ್ಕೇರಿದ್ದು, ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾತನಾಡಿದ ಸಂಸ್ಥಾಪಕ ಸದಸ್ಯರು ಸ್ಥಾನ ಕಳೆದುಕೊಂಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ನಾಯಕತ್ವವನ್ನು ಪ್ರಶ್ನಿಸಿದ್ದಕ್ಕೆ ಪಕ್ಷದ ಸಂಸ್ಥಾಪಕ ಸದಸ್ಯರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಉಚ್ಛಾಟಿಸಲಾಗಿದೆ.[ಎಎಪಿ ಹಿರಿಯ ನಾಯಕರಿಗೆ ಉಚ್ಚಾಟನೆ ಭೀತಿ]
ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮೊದಲು ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಯಕರ ಉಚ್ಚಾಟನೆಗೂ ಮುನ್ನ ಸಭೆಯಿಂದ ಹೊರನಡೆದರು.
ನಂತರ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಉಚ್ಚಾಟನೆ ಪ್ರಸ್ತಾವನೆಯನ್ನು ಸಭೆಯ ಮುಂದಿಟ್ಟಾಗ ಬಹುಮತದಲ್ಲಿ ಅಂಗೀಕಾರವಾಯಿತು. 300 ಜನ ಸದಸ್ಯರಲ್ಲಿ 200 ಜನ ಉಚ್ಚಾಟನೆ ಪರ ಮತ ಹಾಕಿದರು.[ಆಮ್ ಆದ್ಮಿ ಪಕ್ಷದೊಳಗಿನ ಭಿನ್ನಮತಕ್ಕೆ ಕಾರಣವೇನು?]
ಸಭೆ ಆರಂಭಕ್ಕೂ ಮುನ್ನ ಯೋಗೆಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಧರಣಿ ಕುಳಿತಿದ್ದರು. ಈ ವೇಳೆ ಘರ್ಷಣೆ ನಡೆದಿದ್ದು ಕೇಜ್ರಿವಾಲ್ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರಶಾಂತ್ ಭೂಷಣ್ ಆರೋಪ ಮಾಡಿದ್ದಾರೆ. ಜತೆಗೆ ಯೋಗೇಂದ್ರ ಯಾದವ್ ಬೆಂಬಲಿಗರಾದ ಆನಂದ್ ಕುಮಾರ್ ಮತ್ತು ಅಜಿತ್ ಝಾ ಅವರನ್ನು ಸಹ ರಾಷ್ಟೀಯ ಕಾರ್ಯಕಾರಿಣಿ ಸಮಿತಿಯಿಂದ ಉಚ್ಚಾಟಿಸಲಾಗಿದೆ. ಆದರೆ ಯಾದವ್ ಅವರ ಬಹುತೇಕ ಬೆಂಬಲಿಗರು ಸಭೆಗೆ ಗೈರಾಗಿದ್ದರು.