ಯೋಗದ ಬಗ್ಗೆ ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?
ತಮಿಳುನಾಡಿನ ಕೊಯಮತ್ತೂರಿನಲ್ಲಿ 112 ಅಡಿ ಎತ್ತರದ ಶಿವನ ಮೂರ್ತಿಯನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಯೋಗದ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಯೋಗದ ಅಗ್ಗಳಿಕೆ, ಅದರ ಪ್ರಯೋಜನದ ಬಗ್ಗೆ ಮೋದಿ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ
ಕೊಯಮತ್ತೂರು, ಫೆಬ್ರವರಿ 24: ಜಗತ್ತಿನಾದ್ಯಂತ ಜನರು ನೆಮ್ಮದಿಗಾಗಿ ಹಪಹಪಿಸುತ್ತಿದ್ದಾರೆ ಮತ್ತು ಎಲ್ಲ ಒತ್ತಡದಿಂದ ಸುಲಭವಾಗಿ ಹೊರಬರುವ ಮಾರ್ಗ ಯೋಗ. ದೇಹವನ್ನು ದೇವಾಲಯ ಅನ್ನೋದಾದರೆ, ಯೋಗವು ಸುಂದರ ದೇವಾಲಯ ನಿರ್ಮಾಣಕ್ಕೆ ಸಹಕಾರಿ. ಅದಕ್ಕೆ ನಾನು ಯೋಗವನ್ನು ಉತ್ತಮ ಆರೋಗ್ಯಕ್ಕೆ ಪಾಸ್ ಪೋರ್ಟ್ ಇದ್ದಹಾಗೆ ಅಂತೀನಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಆಧ್ಯಾತ್ಮ ಗುರು ಜಗ್ಗಿ ವಾಸುದೇವ್ ತಮಿಳುನಾಡಿನ ಕೊಯಮುತ್ತೂರಿನಲ್ಲಿ ಸ್ಥಾಪಿಸಿರುವ 112 ಎತ್ತರದ ಶಿವನ ಮುಖವನ್ನು ಉದ್ಘಾಟಿಸಿ, ಮಾತನಾಡಿ, ಯೋಗ ಅಂದರೆ ರೋಗ ಮುಕ್ತಿ ಮತ್ತು ಭೋಗ ಮುಕ್ತಿ. ಒಬ್ಬ ವ್ಯಕ್ತಿಯನ್ನು ಮತ್ತಷ್ಟು ಉತ್ತಮವಾಗಿ ಮಾಡುವುದು ಯೋಗ. ದೈಹಿಕ ವ್ಯಾಯಾಮಗಳೆಲ್ಲವನ್ನೂ ಮೀರಿದ್ದು ಯೋಗ ಎಂದು ಹೇಳಿದರು.[ವಿಶ್ವದ ಅತೀ ದೊಡ್ಡ 'ಆದಿಯೋಗಿ' ಪ್ರತಿಮೆ ಅನಾವರಣ ಮಾಡಿದ ಮೋದಿ]
ಇಡೀ ಜಗತ್ತಿಗೆ ಯೋಗವನ್ನು ಕೊಡುಗೆ ನೀಡಿದೆ ಭಾರತ. ಯೋಗದ ಅಭ್ಯಾಸದಿಂದ ನಾವೆಲ್ಲ ಒಂದೇ ಎಂಬ ಭಾವ ಸೃಷ್ಟಿಯಾಗುತ್ತದೆ. ಹಳೆಯದು ಎಂಬ ಕಾರಣಕ್ಕೆ ಯಾವುದೇ ಆಲೋಚನೆಯನ್ನು ತಿರಸ್ಕರಿಸುವುದು ತುಂಬ ಅಪಾಯಕಾರಿ. ನಮ್ಮ ಮನಸ್ಸು ಸದಾ ಹೊಸ ಆಲೋಚನೆಗಳಿಗೆ ತೆರೆದುಕೊಂಡಿರಬೇಕು ಎಂದು ಹೇಳಿದರು.[ಕಾನ್ಪುರ ರೈಲು ದುರಂತದಲ್ಲಿ ಗಡಿಯಾಚೆಗಿನವರ ಕೈವಾಡ: ಮೋದಿ]
ನಮ್ಮದು ಮಹಿಳಾ ಪ್ರಧಾನವಾದ ಸಮಾಜವನ್ನು ಪ್ರತಿಪಾದಿಸುವ ಸಂಸ್ಕೃತಿ. ಆದ್ದರಿಂದಲೇ ಹಲವು ದೇವತೆಗಳನ್ನು ನಾವು ಪೂಜಿಸುತ್ತೇವೆ. ಹಲವು ಮಹಿಳೆಯರು ಸಮಾಜದಲ್ಲಿ ಸುಧಾರಣೆ ತಂದಿದ್ದಾರೆ ಎಂದು ಹೇಳಿದರು. ಕಾಶಿಯಿಂದ ಕೊಯಮತ್ತೂರಿನ ತನಕ ಶಿವ ಎಲ್ಲ ಕಡೆ ಇದ್ದಾನೆ. ಅದು ಹೇಗೆಂದರೆ ಕೋಟ್ಯಂತರ ಭಾರತೀಯರ ಥರ. ಈ ಶಿವರಾತ್ರಿ ಆಚರಣೆಯ ಭಾಗವಾಗಿ ನಾನಿರುವುದಕ್ಕೆ ಸಂತೋಷ ಆಗುತ್ತಿದೆ ಎಂದರು.