ಗಲ್ವಾನ್ ಕಣಿವೆ: ಸೈನಿಕರ ಸಂಖ್ಯೆ ಹೆಚ್ಚಿಸಿದ ಭಾರತ
ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ನಡುವೆ ಘರ್ಷಣೆ ನಡೆದು ಒಂದು ವರ್ಷ ಕಳೆದಿದೆ.
ಆದರೆ ಚೀನಾ ಪೂರ್ವ ಲಡಾಖ್ ಸುತ್ತ ತನ್ನ ಕಾಯಂ ನೆಲೆಯನ್ನು ಸೃಷ್ಟಿಸುತ್ತಿದೆ, ಸೈನಿಕರ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದೆ. ಅಹಿತಕರ ಘಟನೆ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಾರತವು ಕೂಡ ಹೆಚ್ಚು ಸೈನಿಕರನ್ನು ನಿಯೋಜನೆಗೊಳಿಸಿದೆ.
ಗಾಲ್ವಾನ್ ಕಣಿವೆಯಲ್ಲಿ ಕಾಯಂ ನೆಲೆಯೂರುತ್ತಿರುವ ಚೀನಾ ಸೈನಿಕರು
ಪಿಎಲ್ಎ ಪಡೆಗಳು ಶಾಶ್ವತ ಹಾಗೂ ತಾತ್ಕಾಲಿಕ ವಸತಿ ಸೌಕರ್ಯಗಳನ್ನು ನಿರ್ಮಿಸಿವೆ ಮತ್ತು ಹೆಚ್ಚುವರಿ ವಾಹನಗಳನ್ನು ಖರೀದಿಸಿವೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹೆಚ್ಚೆಚ್ಚು ಚೀನಾ ಸೈನಿಕರು ಪ್ಯಾಂಗಾಂಗ್ ಸರೋವರದ ಬಳಿ ಓಡಾಡುತ್ತಿದ್ದಾರೆ, ಗುಪ್ತಚರ ಮಾಹಿತಿ ಪ್ರಕಾರ ಚೀನಿಯರು ದೀರ್ಘಾವಧಿವರೆಗೆ ಅಲ್ಲಿಯೇ ಬೀಡುಬಿಡುವ ತಯಾರಿಯಲ್ಲಿದ್ದಾರೆ ಹಾಗೆಯೇ ಮತ್ತೆ ಭಾರತ ಚೀನಾ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ ಹಾಗೂ ಚೀನಾ ನಡುವೆ ಗಡಿ ವಿಚಾರವಾಗಿ ಹಾಗೂ ಸೈನಿಕರನ್ನು ಆ ಸ್ಥಳದಿಂ ಹಿಂಪಡೆಯುವ ವಿಚಾರವಾಗಿ ಈವರೆಗೆ 11 ಸುತ್ತುಗಳಲ್ಲಿ ಮಾತುಕತೆ ನಡೆದಿದೆ. ಆದರೆ ಚೀನಾ ಆ ಸಂದರ್ಭದಲ್ಲಿ ಒಪ್ಪಿಕೊಂಡಂತೆ ನಾಟಕವಾಗಿ ಮತ್ತೆ ತನ್ನ ವರಸೆ ತೋರಿಸುತ್ತಿದೆ.
ಉಭಯ ದೇಶಗಳ ನಡುವೆ ಮೊದಲ ಮಿಲಿಟರಿ ಉನ್ನತ ಮಟ್ಟದ ಸಭೆ ಜೂನ್ 6 ರಂದು ನಡೆಯಿತು, ಇದರಲ್ಲಿ ಸೇನೆಯನ್ನು ಹಿಂದೆ ಕರೆಸಿಕೊಳ್ಳುವ ಬಗ್ಗೆ ಮಾತುಕತೆ ನಡೆಯಿತು, ಇದರಂತೆ ಗಲ್ವಾನ್ ಕಣಿವೆಯಲ್ಲಿ ಎಂಗೇಜ್ಮೆಂಟ್ ಪ್ರಕ್ರಿಯೆ ನಡೆಯುತ್ತಿತ್ತು.
ಇದನ್ನು ನೋಡಿಕೊಳ್ಳುವ ಹೊಣೆ ಕರ್ನಲ್ ಸಂತೋಷ್ ಬಾಬು ಅವರಿಗೆ ವಹಿಸಲಾಗಿತ್ತು. ಕರ್ನಲ್ ಬಾಬು ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಆದರೆ, ಚೀನಾ ಸೈನಿಕರು ಶಸ್ತ್ರಾಸ್ತ್ರಗಳೊಂದಿಗೆ ಮಾರಕ ದಾಳಿ ಮಾಡಿದರು.
ಕಲ್ಲೆಸೆತ ಸಂಘರ್ಷಕ್ಕೂ ಮುಂದಾದರು. ದಾಳಿಗೆ ಕುಗ್ಗದ ಭಾರತೀಯ ಸೇನೆ ಈ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಕಳೆದ ಒಂದು ವರ್ಷದಿಂದ 50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜನೆ ಮಾಡಲಾಗಿದೆ. ಚಳಿಗಾಲದಲ್ಲಿ ಅಲ್ಲಿ ಮೈನಸ್ 40 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗುತ್ತದೆ.
ಕಳೆದ ತಿಂಗಳು ಭಾರತೀಯ ಸೇನೆಯ ಮುಖ್ಯಸ್ಥ ಎಂಎಂ ನರವಾಣೆ ಮಾತನಾಡಿ, ''ಲಡಾಖ್ನಲ್ಲಿ ಸೇನೆ ಸನ್ನದ್ಧವಾಗಬೇಕು, ಅಲ್ಲಿ ಚೀನಿಯರು ಓಡಾಟ ಅನುಮಾನ ಹುಟ್ಟಿಸುತ್ತಿದೆ'' ಎಂದು ಹೇಳಿದ್ದರು.
ಚೀನಾವು ಲಡಾಖ್, ಉತ್ತರಾಖಂಡ, ಹಿಮಾಚಲ, ಸಿಕ್ಕಿಂ, ಅರುಣಾಚಲ ಗಡಿಯಲ್ಲೂ ಕಾಣಿಸಿಕೊಂಡಿದೆ, ಭಾರತವು ಚೀನಾ ಸೇನೆಯ ಮೇಲೆ ಕಣ್ಣಿರಿಸಿದೆ.