ರಾಜೀನಾಮೆಗೆ ಸಿದ್ಧವಿರುವ ರಾಹುಲ್ ಗೆ ಗೋಲ್ಡನ್ ಸಲಹೆ ನೀಡಿದ ಯಶವಂತ್ ಸಿನ್ಹಾ
ನವದೆಹಲಿ, ಮೇ 30 : ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನಂತರ, ನನ್ನಿಂದ ಸಾಧ್ಯವಿಲ್ಲವೆಂದು ರಾಜೀನಾಮೆ ಪತ್ರ ಹಿಡಿದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅತ್ಯಮೂಲ್ಯವಾದ ಸಲಹೆಯನ್ನು, ಬಿಜೆಪಿ ತೊರೆದಿರುವ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರು ನೀಡಿದ್ದಾರೆ.
ರಾಹುಲ್ ಗಾಂಧಿ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು ಎಂದು ಕಟ್ಟಾ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿರುವ ಸಂದರ್ಭದಲ್ಲಿ, 'ರಾಹುಲ್ ಗಾಂಧಿ ಅವರು (ರಾಜೀನಾಮೆಯ) ತಮ್ಮ ನಿರ್ಧಾರಕ್ಕೆ ಬದ್ಧರಾಗಿರಬೇಕು, ಇಲ್ಲದಿದ್ದರೆ ಸಾರ್ವಜನಿಕರ ದೃಷ್ಟಿಯಲ್ಲಿ ಗೌರವ ಇನ್ನಷ್ಟು ಮಣ್ಣು ಪಾಲಾಗುತ್ತದೆ' ಎಂಬ ಸಲಹೆಯನ್ನು ಯಶವಂತ್ ಸಿನ್ಹಾ ಅವರು ನೀಡಿದ್ದಾರೆ.
ವಾಜಪೇಯಿ ಕೋಪದಿಂದ ಮೋದಿಯನ್ನು ಉಳಿಸಿದ್ದು ಅಡ್ವಾಣಿ: ಸಿನ್ಹಾ
ಈ ಬಗ್ಗೆ ಅವರು ಟ್ವಿಟ್ಟರ್ ನಲ್ಲಿ ಹಾಕಿರುವ ಸಂದೇಶ ಹೀಗಿದೆ, "ಒಂದು ವೇಳೆ ರಾಹುಲ್ ಅವರು ತಮ್ಮ ನಿರ್ಧಾರಕ್ಕೆ ಬದ್ಧವಾಗಿ ನಿಲ್ಲದಿದ್ದರೆ, ಸಾರ್ವಜನಿಕರ ದೃಷ್ಟಿಯಲ್ಲಿ ಇನ್ನೂ ಕೆಳಗಿಳಿಯುತ್ತಾರೆ. ಪಕ್ಷವನ್ನು ಎಕ್ಸಿಕ್ಯೂಟಿವ್ ಸಮಿತಿಯೇ ಮುನ್ನಡೆಸಲಿ ಅಥವಾ ಸದ್ಯದ ಮಟ್ಟಿಗೆ ಅಂತಹ ವ್ಯವಸ್ಥೆ ಜಾರಿಗೆ ಬರಲಿ" ಎಂದು ಇನ್ನಷ್ಟು ಗೊಂದಲ ಸೃಷ್ಟಿಸುವಂಥ ಹೇಳಿಕೆ ನೀಡಿದ್ದಾರೆ.
If Rahul Gandhi does not stand firm on his resignation, he will lose further in public estimation. Let the party be run by a presidium or any other arrangement at least for some time.
— Yashwant Sinha (@YashwantSinha) May 30, 2019
542 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕೇವಲ 52 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಯಶಸ್ವಿಯಾಗಿರುವ ರಾಹುಲ್ ಗಾಂಧಿ ಅವರು ಸದ್ಯಕ್ಕೆ ಎಲ್ಲರ ಸಲಹೆಯನ್ನು ಸ್ವೀಕರಿಸುತ್ತಿದ್ದಾರಾದರೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ, ಕಾಂಗ್ರೆಸ್ ಸೋಲಿನ ಪರಾಮರ್ಶೆಯನ್ನು ನಡೆಸಿ, ಹಲವಾರು ಹಿರಿಯ ನಾಯಕರನ್ನು ತರಾಟೆಗೆ ತೆಗೆದುಕೊಂಡ ನಂತರ, ರಾಜೀನಾಮೆಯ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು.
ಇದಾದ ನಂತರ, ಡಾ. ಮನಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್ ರಂಥ ಹಿರಿಯ ನಾಯಕರು, ನೀವಿಲ್ಲದಿದ್ದರೆ ಪಕ್ಷವನ್ನು ಮುನ್ನಡೆಸುವವರು ಯಾರು ಎಂದು ರಾಹುಲ್ ಅವರೇ ಮುಂದುವರಿಯಬೇಕೆಂದು ಹೇಳಿದ್ದಾರೆ. ಅಲ್ಲದೆ, ಇತರ ನಾಯಕರು ಕೂಡ ಅವರ ಮನವೊಲಿಸುವ ಕಾಯಕದಲ್ಲಿ ತೊಡಗಿದ್ದಾರೆ. ಒಂದು ವೇಳೆ ರಾಹುಲ್ ರಾಜೀನಾಮೆ ನೀಡಿದರೆ, ಬಿಜೆಪಿಯ ಖೆಡ್ಡಾದಲ್ಲಿ ಬಿದ್ದಂತೆ ಎಂದು ಪ್ರಿಯಾಂಕಾ, ಲಾಲೂ ಪ್ರಸಾದ್ ಯಾದವ್ ರಂಥವರು ಎಚ್ಚರಿಸಿದ್ದಾರೆ.
ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷ, CWC ಸಭೆ ಇಲ್ಲ
ರಾಜೀನಾಮೆಯ ಪ್ರಸ್ತಾವನೆ ಮುಂದಿಟ್ಟ ನಂತರವೂ ಹಲವಾರು ನಾಯಕರು ಅವರನ್ನು ಭೇಟಿ ಮಾಡಲು ಯತ್ನಿಸಿದರೂ, ಪ್ರಿಯಾಂಕಾ ವಾದ್ರಾ ಅವರೇ ಎಲ್ಲರ ಮನವಿಗಳನ್ನು ಸ್ವೀಕರಿಸುತ್ತಿದ್ದಾರೆ ಮತ್ತು ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಮೌನಕ್ಕೆ ಶರಣಾಗಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಯಾವುದೇ ನಾಯಕರು, ವಕ್ತಾರರು ಯಾವುದೇ ಟಿವಿ ಚಾನಲ್ಲುಗಳ ಪ್ಯಾನಲ್ ಡಿಸ್ಕಷನ್ ಗಳಲ್ಲಿ ಪಾಲ್ಗೊಳ್ಳಬಾರದು ಎಂದೂ ಕಟ್ಟಪ್ಪಣೆ ಮಾಡಲಾಗಿದೆ.
ಈ ನಡುವೆ, ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಕರ್ನಾಟಕದ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ವಿಚಾರ ವಿನಿಮಯ ಮಾಡಿಕೊಂಡರು. ಸದ್ಯಕ್ಕೆ ಮೈತ್ರಿ ಪಕ್ಷಗಳ ನಡುವೆ ಯಾವುದೇ ತೊಂದರೆಯಿಲ್ಲ, ಎಲ್ಲವೂ ಸುಗಮವಾಗಿ ಸಾಗಿದೆ ಎಂದು ಅವರು ರಾಹುಲ್ ಅವರಿಗೆ ತಿಳಿಸಿದ್ದಾರೆ. ರಾಜೀನಾಮೆಯ ಜೊತೆಗೆ ಮೈತ್ರಿ ಪಕ್ಷಗಳಲ್ಲಿನ ಕಾದಾಟವೂ ರಾಹುಲ್ ಅವರಿಗೆ ಭಾರೀ ತಲೆನೋವು ತಂದಿದೆ. ಭೇಟಿಯ ಕೊನೆಯಲ್ಲಿ, ನಿಮ್ಮಂಥವರ ನಾಯಕತ್ವ ಪಕ್ಷಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಬೇಕಾಗಿದೆ ಎಂದು ಕುಮಾರಸ್ವಾಮಿ ಅವರು ರಾಹುಲ್ ಅವರಿಗೆ ಹೇಳಿದ್ದಾರೆ.