ರಾಜಕೀಯ ಇನ್ನು ಸಾಕು ಎಂದ 80ರ ಯಶವಂತ್ ಸಿನ್ಹಾ, ಬಿಜೆಪಿಗೂ ಗುಡ್ ಬೈ
ಪಟ್ನಾ, ಏಪ್ರಿಲ್ 21 : ತಮ್ಮನ್ನು ಮೂಲೆಗುಂಪು ಮಾಡಿದಾಗಿನಿಂದ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರ ಮೇಲೆ ಕೆಂಡ ಕಾರುತ್ತಲೇ ಇದ್ದ ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹಾ ಅವರು ಕಡೆಗೂ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
"ನಾನು ಸಕ್ರೀಯ ರಾಜಕಾರಣದಿಂದ ಸನ್ಯಾಸ ತೆಗೆದುಕೊಳ್ಳುತ್ತಿದ್ದೇನೆ. ಇಂದು ನಾನು ಬಿಜೆಪಿಯೊಂದಿಗೆ ಎಲ್ಲ ಸಂಬಂಧಗಳಿಂದ ಕಳಚಿಕೊಳ್ಳುತ್ತಿದ್ದೇನೆ" ಎಂದು ಪಟ್ನಾದಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದಾರೆ.
ಎನ್ಡಿಎ ಆಡಳಿತದಲ್ಲಿ ಪ್ರಜಾತಾಂತ್ರಿಕ ಸಂಸ್ಥೆಗಳಿಗೆ ಭಾರೀ ಹೊಡೆತ ಬಿದ್ದಿದ್ದು, ಭಾರತದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಶ್ರಮಿಸುತ್ತೇನೆ ಎಂದು 80 ವರ್ಷದ ಹಿರಿಯ ರಾಜಕಾರಣಿ ಯಶವಂತ್ ಸಿನ್ಹಾ ಅವರು ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಕೇಂದ್ರ ಸರಕಾರದ ನೀತಿಗಳ ವಿರುದ್ಧ ಹೋರಾಟ ಮಾಡುತ್ತಿರುವ ಅವರು ಇದೇ ವರ್ಷದ ಜನವರಿ 30ರಂದು 'ರಾಷ್ಟ್ರ ಮಂಚ್' ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಅದು ರಾಜಕೀಯೇತರ ಸಂಸ್ಥೆಯಾಗಿದ್ದು, ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.