ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಪ್ರಧಾನಿ ಮೋದಿ 'ಕೌಶಲ್ಯ' ಮಂತ್ರ
ನವದೆಹಲಿ, ಜುಲೈ.15: ವಿಶ್ವ ಯುವ ಕೌಶಲ್ಯ ದಿನಾಚರಣೆ ಹಿನ್ನೆಲೆ ದೇಶದ ಯುವಕರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭಾಷಯ ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಸ್ಕಿಲ್ ಇಂಡಿಯಾ ಮಿಷನ್ 5ನೇ ವಾರ್ಷಿಕೋತ್ಸವದ ಅಂಗವಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಆಯೋಜಿಸಿದ್ದ ಡಿಜಿಟಲ್ ವೇದಿಕೆಯಲ್ಲಿ ಪ್ರಧಾನಿ ಮಾತನಾಡಿದರು.
ಭಾರತವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೊರೊನಾವೈರಸ್ ದೇಶದಲ್ಲಿ ಜನರ ಕಾರ್ಯವೈಖರಿಯನ್ನೇ ಸಂಪೂರ್ಣವಾಗಿ ಬದಲಿಸಿದೆ ಎಂದರು. ಕೊರೊನಾವೈರಸ್ ಸೋಂಕು ನಾವು ಕೆಲಸ ಮಾಡುವ ರೀತಿಯನ್ನೇ ಬದಲಿಸಿದೆ.
Live Updates: ಕೊರೊನಾವೈರಸ್ ಕೆಲಸದ ಕೌಶಲ್ಯವನ್ನೇ ಬದಲಿಸಿದೆ ಎಂದ ಪ್ರಧಾನಿ
ಕೌಶಲ್ಯಭರಿತ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೌಶಲ್ಯಭರಿತ ಕೆಲಸದ ಅವಶ್ಯಕತೆ ಹೆಚ್ಚಾಗಿದೆ. ಐದು ವರ್ಷಗಳ ಹಿಂದೆ ಇದೇ ಕೌಶಲ್ಯಗಳನ್ನು ವೃದ್ಧಿಪಡಿಸುವ ಉದ್ದೇಶದಿಂದ ಸ್ಕಿಲ್ ಇಂಡಿಯಾ ಜಾರಿಗೊಳಿಸಲಾಯಿತು ಎಂದು ಮೋದಿ ತಿಳಿಸಿದರು.
ಯುವಕರ ಕೌಶಲ್ಯವೃದ್ಧಿಗೆ ಪ್ರಧಾನಿ ಮೋದಿ ಮಂತ್ರ:
ಕೊರೊನಾವೈರಸ್ ಸೋಂಕು ಹರಡುವಿಕೆಯಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಯುವಕರ ಕೌಶಲ್ಯ ವೃದ್ಧಿ ಪ್ರಧಾನಿ ಮೋದಿ ಹೊಸ ಮಂತ್ರವನ್ನು ಜಪಿಸಿದ್ದಾರೆ. ಸ್ಕಿಲ್, ರೀ ಸ್ಕಿಲ್ ಮತ್ತು ಅಪ್ ಸ್ಕಿಲ್ ಮೂಲದ ಜೀವನವನ್ನು ರೂಪಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಹೊಸತನ್ನು ಕಲಿಯುತ್ತಿರುವ ಸಂದರ್ಭದಲ್ಲಿ ಜೀವನದ ಉತ್ಸಾಹವು ಯಾವುದೇ ಕಾರಣಕ್ಕೂ ಕಡಿಮೆ ಆಗುವುದಿಲ್ಲ. ಜ್ಞಾನ ಮತ್ತು ಕೌಶಲ್ಯಗಳ ಮೂಲಕ ದೇಶದಲ್ಲಿ ಯುವಕರು ವಿವಿಧ ರಂಗಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅದೇ ರೀತಿ ಕೌಶಲ್ಯಗಳನ್ನು ಕಲಿಯುವುದರಲ್ಲಿ ಜನರು ನಿರತರಾಗಬೇಕು. ಕೌಶಲ್ಯ ವೃದ್ಧಿಯು ನಿರಂತರ ಪ್ರಕ್ರಿಯೆ ಆಗಿರಬೇಕು. ಹೊಸತನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಕಲಿಯುವುದಕ್ಕೂ ಮೊದಲು ಜನರಲ್ಲಿ ಸೈಕಲ್ ಚಲಾಯಿಸುವ ಬಗ್ಗೆ ಆತ್ಮವಿಶ್ವಾಸವೇ ಇರುವುದಿಲ್ಲ. ಆದರೆ ಅದನ್ನು ಒಂದು ಬಾರಿ ಕಲಿತ ನಂತರದಲ್ಲಿ ಸೈಕಲ್ ಚಲಾಯಿಸುವುದು ಹೇಗೆ, ಬ್ರೇಕ್ ಹಿಡಿಯುವುದರಿಂದ ಹಿಡಿದು ಬ್ಯಾಲೆನ್ಸ್ ಮಾಡುವುದನ್ನು ಕಲಿತುಕೊಳ್ಳುತ್ತಾರೆ. ಇಂಥ ಸ್ಕಿಲ್ ಗಳು ಬದುಕಿಗೆ ಉತ್ಸಾಹವನ್ನು ನೀಡುತ್ತವೆ ಎಂದು ಪ್ರಧಾನಿ ತಿಳಿಸಿದ್ದಾರೆ.