ವಿಶ್ವ ಪರಿಸರ ದಿನ ಇಂದು: ವಿಶ್ವಸಂಸ್ಥೆ ಘೋಷ ವಾಕ್ಯ ಏನು?
ಬೆಂಗಳೂರು, ಜೂನ್ 05: ಇಂದು ಜಗತ್ತಿನಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಪರಿಸರವನ್ನು ಉಳಿಸುವುದು ಆ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣವನ್ನು ನಿರ್ಮಾಣ ಮಾಡುವುದು ಈ ಸದ್ಯದ ತುರ್ತು ಎಂದೇ ಹೇಳಲಾಗುತ್ತಿದೆ.
ಈ ಬಾರಿಯ ವಿಶ್ವ ಪರಿಸರ ದಿನಕ್ಕೆ ವಿಶ್ವಸಂಸ್ಥೆಯು ಬೀಟ್ ದಿ ಏರ್ ಪೊಲ್ಯೂಶನ್ (ವಾಯುಮಾಲಿನ್ಯವನ್ನು ಸೋಲಿಸಿ) #beatairpollution ಘೋಷ ವಾಕ್ಯವನ್ನು ನೀಡಿದೆ.
ವಿಶ್ವ ಪರಿಸರ ದಿನದಂದು ಕನ್ನಡ ಕವಿಗಳ 'ಹಸಿರು ಸಿರಿಯ' ಹಾಡುಗಳು
ವಾಯುಮಾಲಿನ್ಯವನ್ನು ತಡೆಯುವುದು ಪ್ರಸ್ತುತದ ತುರ್ತು ಎಂದು ವಿಶ್ವಸಂಸ್ಥೆ ಹೇಳುತ್ತಿದ್ದು. ವಾಯುಮಾಲಿನ್ಯ ತಡೆಯದಿದ್ದರೆ ಕರಾಳ ದಿನಗಳನ್ನು ನೋಡಬೇಕಾಗುತ್ತದೆ. ವಾಯುಮಾಲಿನ್ಯದಿಂದ ಮಾನವ ಎದುರಿಸಬೇಕಾದ ಸಂಕಷ್ಟಗಳೇನು? ವೈಯಕ್ತಿಕ ಮಟ್ಟದಲ್ಲಿ ವ್ಯಕ್ತಿಗೆ ಆಗುವ ತೊಂದರೆಗಳೇನು? ವಾತಾವರಣದ ಮೇಲೆ ಅದರ ಪ್ರಭಾವಗಳೇನು? ಎಂಬಿತ್ಯಾದಿ ವಿಷಯಗಳ ಬಗ್ಗೆ ವಿಶ್ವಸಂಸ್ಥೆಯು ಜಾಗೃತಿ ಮೂಡಿಸುತ್ತಿದೆ.
ಪರಿಸರ ದಿನಾಚರಣೆ ಪ್ರಯುಕ್ತ ಭಾರತದಲ್ಲೂ ಬಹುತೇಕ ಎಲ್ಲ ನಗರಗಳಲ್ಲೂ ಒಂದಲ್ಲಾ ಒಂದು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರಿನಲ್ಲೂ ಹಲವು ವರ್ಷಗಳಿಂದ ಹಲವು ಪರಿಸರ ಪರ ಸಂಘಟನೆಗಳು ಪರಿಸರ ದಿನಾಚರಣೆಯನ್ನು ಜವಾಬ್ದಾರಿಯುತವಾಗಿ ಆಚರಿಸುತ್ತಾ ಬಂದಿವೆ.
ಸಾಮಾಜಿಕ ಜಾಲತಾಣದಲ್ಲಿ ಸಹ ಪರಿಸರ ದಿನಾಚರಣೆ ಕುರಿತು ಕೋಟ್ಯಂತರ ಮಂದಿ ತಮ್ಮ ಸಂದೇಶಗಳನ್ನು, ಒರಿಸರವನ್ನು ಉಳಿಸಿಕೊಳ್ಳಲೇಬೇಕಾದ ತುರ್ತಿನ ಬಗ್ಗೆ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ತಂತ್ರಜ್ಞಾನ ಯುಗದ ಸಾಮಾಜಿಕ ಜಾಲತಾಣ ವೀರರು ತಮ್ಮ ಫ್ರೊಫೈಲ್ ಪಿಕ್ಚರ್ ಅನ್ನು ಹಸಿರು ಮಾಡಿಕೊಳ್ಳುವ ಬದಲಿಗೆ ಒಂದು ಗಿಡ ನೆಟ್ಟು ಅದರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ ಎಂದು ಹಲವರು ಸಂದೇಶವನ್ನು ನೀಡಿದ್ದಾರೆ.