ಅಪ್ಪ ಪ್ರಕಾಶ್ ಪತ್ರ ನೋಡಿ ಕಣ್ಣೀರಿಟ್ಟ ದೀಪಿಕಾ: ಅಂಚೆ ದಿನದ ವಿಶೇಷ
"ಟ್ರಿಣ್... ಟ್ರಿಣ್..." ಅಂಚೆಯಣ್ಣನ ಆಗಮನದ ಸೂಚನೆ ಅದು! ಕಾಕಿ ಬಣ್ಣದ ಶರ್ಟ್ ತೊಟ್ಟು, ಹಳೆಯ ಸೈಕಲ್ ವೊಂದನ್ನು ಏರಿ ಅಂಚೆಯಣ್ಣ ಬರುತ್ತಿದ್ದರೆ ಆತನ ಜೋಳಿಗೆಯ ಮೇಲೇ ಎಲ್ಲರ ಕಣ್ಣು!
ಸ್ವಲ್ಪ ಕಹಿ, ಒಂದಷ್ಟು ಸಿಹಿ ಹೊತ್ತು ತರುತ್ತಿದ್ದ ಆತನ ಜೋಳಿಗೆಯ ಪತ್ರಗಳು ಒಂದು ಕಾಲದಲ್ಲಿ ಸಂವಹನದ ಏಕೈಕ ಮಾರ್ಗವಾಗಿತ್ತು ಎಂದರೆ ಈ ತಲೆಮಾರಿನ ಮಕ್ಕಳು ನಕ್ಕಾರು!
ಬೆಳಗೆರೆ ಅವರ 'ಸಮಾಧಾನ'ದ ಒಂದು ಪತ್ರ: ದುರುಳ ತಂದೆಗೆ ಮರುಳಾದ ಮಕ್ಕಳು
ಸಂವಹನಕ್ಕಾಗಿ ಪಾರಿವಾಳದ ಕಾಲಿಗೆ ಪತ್ರ ಕಟ್ಟಿ ಹಾರಿಬಿಡುವ ಕಾಲವೊಂದಿತ್ತು ಎಂದರೆ ಇಂದಿನ ಜಿಪಿಎಸ್ ಯುಗದಲ್ಲಿ ನಂಬುವವರ್ಯಾರು?! ತುರ್ತು ಸುದ್ದಿಯೊಂದನ್ನು ಸಂಬಂಧಪಟ್ಟವರಿಗೆ ಮುಟ್ಟಿಸುವುದಕ್ಕೆ ವಾರಗಟ್ಟಲೇ ಹರಸಾಹಸ ಪಡುತ್ತಿದ್ದ ಕಾಲದಿಂದ, ಒಂದೇ ಒಂದು ಸೆಕೆಂಡ್ ನಲ್ಲಿ ಹೊರ ದೇಶಕ್ಕೂ ಸುದ್ದಿ ಕಳಿಸುವ ಮಟ್ಟಿನ ತಾಂತ್ರಿಕ ವೇಗದ ಯುಗಕ್ಕೆ ಪ್ರತಿವ್ಯಕ್ತಿಯೂ ಸಾಕ್ಷಿಯಾಗಿದ್ದಾನೆ.
ಈ ಲೇಖನ ಓದಿದ ಕೂಡಲೆ ಪತ್ರ ಬರೆಯಿರಿ
ಆದರೆ ಅಂಚೆಯಣ್ಣನಿಗಾಗಿ ಕಾಯುತ್ತ, ಆತ ತಂದಿಡುತ್ತಿದ್ದ ಅಕ್ಕರೆ ತುಂಬಿತ ಪತ್ರಗಳು ನೀಡುತ್ತಿದ್ದ ಖುಷಿ, ಆ ಕಾಯುವಿಕೆಯಲ್ಲೂ ಇರುತ್ತಿದ್ದ ಆನಂದ, ಮುದ್ದು ಮುದ್ದು ಅಕ್ಷರಗಳನ್ನು ಓದುವಾಗ ಸಿಗುತ್ತಿದ್ದ ಸಮಾಧಾನ ಇಂದಿನ ಇ ಮೇಲ್ ಯುಗದಲ್ಲಿ ಸಿಕ್ಕೀತಾ?
ಕೊನೆ ದಿನಗಳಲ್ಲಾದರೂ ಅವರು ಒಟ್ಟಿಗೆ ಇರಲಿ...
ಇಂದು ವಿಶ್ವ ಅಂಚೆ ದಿನ(ಅ.9)! 1874 ರ ಇದೇ ದಿನ ಯುನಿವರ್ಸಲ್ ಪೋಸ್ಟಲ್ ಯೂನಿಯನ್ ಸ್ಥಾಪನೆಯಾದ ನೆನಪಿಗೆ ಈ ಆಚರಣೆ. ಟೆಲಿಗ್ರಾಂ ನಂತೆ ಪತ್ರಗಳೂ ನೇಪಥ್ಯಕ್ಕೆ ಸರಿಯುತ್ತಿರುವ ಈ ಕಾಲದಲ್ಲಿ ವಿಶ್ವ ಅಂಚೆ ದಿನದ ಮಹತ್ವವನ್ನು ನೆನಪಿಸಿಕೊಳ್ಳುವುದು ಅತ್ಯಗತ್ಯ. ಜಗತ್ತಿಗೆ ಅಂಚೆ ವ್ಯವಸ್ಥೆ ನೀಡಿದ ಕೊಡುಗೆಯನ್ನು ನೆನೆಯುವ ಸಲುವಾಗಿ ವಿಶ್ವದ ನಾನಾ ದೇಶಗಳು ಪ್ರತಿವರ್ಷ ಅಕ್ಟೋಬರ್ 9 ಅನ್ನು ಅಂಚೆ ದಿನವನ್ನಾಗಿ ಆಚರಿಸುತ್ತವೆ.
ಈ ಹಿನ್ನೆಲೆಯಲ್ಲಿ 4 ಗಣ್ಯ ವ್ಯಕ್ತಿಗಳು ತಮ್ಮ ಮಕ್ಕಳಿಗೆ ಬರೆದ ಪತ್ರದ ಸಾರಾಂಶ ಇಲ್ಲಿದೆ. ಇದು ವಿಶ್ವ ಅಂಚೆ ದಿನದ ನಿಮಿತ್ತ, ಬದುಕಿನಲ್ಲಿ ಪತ್ರಗಳ ಮಹತ್ವವನ್ನು ಅರಿಯುವ ಕಿರುಪ್ರಯತ್ನ.
ದೀಪಿಕಾ ಪಡುಕೋಣೆಗೆ ಪ್ರಕಾಶ್ ಪಡುಕೋಣೆ ಪತ್ರ
ತಮ್ಮ ಮನೋಜ್ಞ ಅಭಿನಯದಿಂದ ಸದ್ಯಕ್ಕೆ ಬಾಲಿವುಡ್ ಅಂಗಳದ ಮಾತ್ರವಲ್ಲದೆ ಹಾಲಿವುಡ್ ನಲ್ಲೂ ಮಿಂಚುತ್ತಿರುವ ನಟಿ ದೀಪಿಕಾ ಪಡುಕೋಣೆ ಅವರ ಎಲ್ಲ ಗೆಲುವಿಗೆ ಕಾರಣ ಅವರ ತಂದೆ, ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆಯವರು ತಮ್ಮ ಮುದ್ದುಮಗಳಿಗೆ ಬರೆದ ಪತ್ರ. ಪಿಕು ಚಿತ್ರಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಆನಂದಭಾಷ್ಪ ಸುರಿಸುತ್ತ ದೀಪಿಕಾ ಓದಿದ ಆ ಪತ್ರದ ಸಾರಾಂಶ ಇಲ್ಲಿದೆ.
ಈ ಸಾಲು ಓದಿ ದೀಪಿಕಾ ಕಣ್ಣಲ್ಲಿ ನೀರು
"ನಾನು ಬದುಕಿನಲ್ಲಿ ಕಲಿತ ದೊಡ್ಡ ಪಾಠವೆಂದರೆ ಪ್ರತಿ ಬಾರಿ ನಾವೇ ಗೆಲ್ಲುವುದಕ್ಕಾಗುವುದಿಲ್ಲ. ಹಾಗೆಯೇ ನೀನು ಬಯಸಿದ್ದೆಲ್ಲವೂ ಬದುಕಿನಲ್ಲಿ ಸಿಕ್ಕದೆ ಇರಬಹುದು. ಗೆಲ್ಲಬೇಕಾದರೆ ನೀನು ಸೋಲಲೇಬೇಕು. ಜೀವನದ ಏರಿಳಿತಗಳಲ್ಲೂ ನೀನು ದಾಪುಗಾಲಿಟ್ಟು ಮುನ್ನಡೆಯಬೇಕು. ನಾನು ಮೊದಲ ಪಂದ್ಯದಲ್ಲಿ ಎಷ್ಟು ಪರಿಶ್ರಮಪಟ್ಟು ಬ್ಯಾಂಡ್ಮಿಂಟನ್ ಆಡಿದೆನೋ, ಈಗಲೂ ಅದೇ ಉತ್ಸಾಹ ಮತ್ತು ಶ್ರಮಪಟ್ಟು ಆಡುತ್ತೇವೆ. ಯಾವತ್ತೂ ಹಾಗೆಯೇ, ನಮ್ಮ ಒಂದು ಗೆಲುವು, ನಮ್ಮ ಪ್ರಯತ್ನ ಮತ್ತು ಮುಂದಿನ ಹೆಜ್ಜೆಯನ್ನು ತಡೆಯಬಾರದು "
ಇಂದಿರಾ ಗಾಂಧಿಗೆ ಜವಹರಲಾಲ್ ನೆಹರೂ ಪತ್ರ
ಬೇಸಿಗೆ ರಜೆ ಕಳೆಯುವುದಕ್ಕೆಂದು ಹತ್ತು ವರ್ಷದ ಇಂದಿರಾ ಪ್ರಿದರ್ಶಿನಿ ಉತ್ತರಾಖಂಡದ ಮುಸ್ಸೂರಿಗೆ ತೆರಳಿದ್ದಾಗ ಜವಹರಲಾಲ್ ನೆಹರೂ ಅವರು ತಮ್ಮ ಮಗಳಿಗೆ ವಿಕಾಸವಾದ, ನೈಸರ್ಗಿಕ ಇತಿಹಾಸ ಮತ್ತು ನಾಗರಿಕತೆಯ ಕತೆಗಳ ಬಗ್ಗೆ ಸರಣಿ ಪತ್ರಗಳನ್ನು ಬರೆದಿದ್ದರು. ಅವುಗಳಲ್ಲಿ ಒಂದು ಪತಗ್ರದಲ್ಲಿ ಅವರು ಬರೆದ ಕೆಲವು ಸಾಲಿಗಳು ಒಬ್ಬ ತಂದೆ ಮಗಳಿಗೆ ನೀಡಬಹುದಾದ ಅತ್ಯುತ್ತಮ ಸಲಹೆ ಅನ್ನಿಸಿದೆ.
ಇಂದಿರಾ ಗಾಂಧಿಯ ಬದುಕು ಬದಲಿಸಿದ ಸಾಲುಗಳು
"ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿಯುವುದಕ್ಕೆ ನಾನು ಕಂಡುಕೊಂಡ ದಾರಿ ಎಂದರೆ ಚರ್ಚಿಸುವುದು. ಬೇರೆ ಬೇರೆ ವ್ಯಕ್ತಿಗಳೊಂದಿಗೆ ಚರ್ಚಿಸುವ ಮೂಲಕ ಸತ್ಯ ತಿಳಿಯಬಹುದು. ಪೂರ್ತಿ ಸತ್ಯ ತಿಳಿಯದಿದ್ದರೂ, ಸತ್ಯದ ಯಾವುದಾದರೂ ಹೊಳಹು ಸಿಗಬಹುದು. ಜಗತ್ತು ತುಂಬಾ ವಿಶಾಲವಾಗಿದೆ. ನಾವು ತಿಳಿದಿದ್ದಷ್ಟೇ ಜಗತ್ತಲ್ಲದಿರಬಹುದು. ನಮ್ಮ ಊಹೆಗೂ ಮೀರಿದ ನಿಗೂಢ, ಅದ್ಭುತ ಜಗತ್ತಿರಬಹುದು. ನಾವು ತಿಳಿಯಲು ಸಾಧ್ಯವಿರುವ ಪ್ರತಿಯೊಂದನ್ನೂ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಆಗ ಎಂದಿಗೂ ಬೇಸರವಾಗುವುದಿಲ್ಲ"
ಪುತ್ರಿ ಅಕ್ಷತಾ ಅವರಿಗೆ ನಾರಾಯಣ ಮೂರ್ತಿ ಪತ್ರ
ಮುದ್ದು ಮಗಳು ಅಕ್ಷತಾ ಜನಿಸಿದ ನಂತರ ತಾವು ಅಸಾಧ್ಯ ಎಂದುಕೊಂಡಿದ್ದ ಕೆಲಸಗಳೆಲ್ಲವೂ ಅರಿವಿಲ್ಲದೆ ಸಾಧ್ಯವಾದವು ಎನ್ನುವ ಇನ್ ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಮಗಳನ್ನು ಮದುವೆ ಮಾಡಿ ಕಳಿಸುವಾಗ ಬರೆದ ಪತ್ರ, ಒಬ್ಬ ಶ್ರೀಮಂತ ವ್ಯಕ್ತಿ ತನ್ನ ಮಗಳಿಗೆ ನೀಡಬಹುದಾದ ಅನರ್ಘ್ಯ ಕಾಣಿಕೆಯೇ ಸರಿ.
ಸರಳ ಬದುಕಿನ ಪಾಠ
"ಒಮ್ಮೆ ನಮಗೆ ಹಣದ ಸಮಸ್ಯೆ ಇದ್ದಾಗ ನಿನ್ನನ್ನು ಮತ್ತು ರೋಹನ್ ನನ್ನು ಶಾಲೆಗೆ ಕಾರಿನಲ್ಲಿ ಕಳಿಸುವುದು ಕಷ್ಟ ಎಂಬ ಬಗ್ಗೆ ನಾನು ಮತ್ತು ನಿಮ್ಮಮ್ಮ ಚರ್ಚೆ ನಡೆಸುತ್ತಿದ್ದೆವು. ಆಗ ನಿಮ್ಮನ್ನು ನಿಮ್ಮ ಉಳಿದೆಲ್ಲ ಸಹಪಾಠಿಗಳಂತೆ ಆಟೋದಲ್ಲೇ ಕಳಿಸೋಣ ಎಂದು ನಿಮ್ಮಮ್ಮ ಹೇಳಿದರು. ಆದರೆ ನಿಮಗೆ ಇದು ಒಪ್ಪಿಗೆಯಾಗುತ್ತದೋ ಇಲ್ಲವೋ ಎಂದುಕೊಂಡಿದ್ದೆ. ಒಂದೆರಡು ದಿನದಲ್ಲೇ ನೀವಿಬ್ಬರೂ ಆಟೋದಲ್ಲಿರುವವರನ್ನೂ, ಆಟೋ ಡ್ರೈವರ್ ನನ್ನೂ ಸ್ನೇಹಿತರನ್ನಾಗಿ ಮಾಡಿಕೊಂಡಿರಿ. ಆಟೋದಲ್ಲಿ ಓಡಾಡುವುದರಲ್ಲೇ ನೀವು ಅತ್ಯಂತ ಹೆಚ್ಚು ಖುಷಿ ಕಾಣುತ್ತಿದ್ದಿರಿ. ಇವೆಲ್ಲ ಬದುಕಿನ ಅತ್ಯಂತ ಚಿಕ್ಕ ಮತ್ತು ಬೆಲೆ ಕಟ್ಟಲಾರದ ಸಂತೋಷಗಳು"
ಪುತ್ರಿ ಆರತಿಗೆ ಚಂದಾ ಕೊಚ್ಚಾರ್ ಪತ್ರ
ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್ ತಮ್ಮ ಮಗಳು ಆರತಿಗೆ ಬರೆದ ಪತ್ರ, ಮಗಳಿಗೆ ಒಬ್ಬ ಜವಾಬ್ದಾರಿಯುತ ತಾಯಿ ನೀಡಬಹುದಾದ ಅತ್ಯಂತ ಮಹತ್ವದ ಸಲಹೆ ಎನ್ನಬಹುದು. ತಮ್ಮ ವೃತ್ತಿ ಬದುಕಿನ ಆರಂಭದಲ್ಲಿ ಆರತಿ ಅವರಿಗೆ, ವೃತ್ತಿಯೊಂದಿಗೆ ಪ್ರೀತಿ, ಕುಟುಂಬ ಮತ್ತು ವಿಶ್ರಾಂತಿ ಎಲ್ಲ್ವೂ ಅಷ್ಟೇ ಮುಖ್ಯ ಎಂದು ಚಂದಾ ನೀಡಿದ ಸಲಹೆಯ ಸಾಲುಗಳು ಇಲ್ಲಿವೆ.
ನಿನ್ನ ಗುರಿ ನೀನೇ ಬರೆಯಬೇಕು!
"ನಾನು ಹಣೆಬರಹವನ್ನು ನಂಬುತ್ತೇನೆ. ಜೊತೆಗೆ ನಮ್ಮ ಕಠಿಣ ಪರಿಶ್ರಮವನ್ನೂ ಅಷ್ಟೇ ನಂಬುತ್ತೇನೆ. ಇನ್ನೂ ಸ್ಪಷ್ಟ ಶಬ್ದದಲ್ಲಿ ಹೇಳಬೇಕೆಂದರೆ ನಮ್ಮ ಗುರಿಯನ್ನು ನಾವೇ ಬರೆದುಕೊಳ್ಳಬೇಕು. ಆಕಾಶವನ್ನು ಏರುವ ಗುರಿಯನ್ನಿಟ್ಟುಕೋ. ಆದರೆ ಆ ಗುರಿಯನ್ನು ನಿಧಾನವಾಗಿ ತಲುಪು. ಒಂದೊಂದು ಹೆಜ್ಜೆಯನ್ನೂ ಸಂಭ್ರಮದಿಂದ ಇಡು. ಗುರಿ ತಲುಪಿದ ನಂತರ ಈ ಪುಟ್ಟ ಪುಟ್ಟ ಹೆಜ್ಜೆಗಳೇ ಅತ್ಯಂತ ಮಹತ್ವದ್ದೆನಿಸುತ್ತವೆ. ಇದರೊಟ್ಟಿಗೆ ನಿನ್ನ ವೈಯಕ್ತಿಕ ಬದುಕು, ಕುಟುಂಬವನ್ನೂ ಅಷ್ಟೇ ಅಕ್ಕರೆಯಿಂದ ಪ್ರೀತಿಸು"