ವಿಶ್ವ ಛಾಯಾಚಿತ್ರ ದಿನ: ಮನಸೆಳೆವ ಆ 10 ಚಿತ್ರಗಳು
"ಸಾವಿರ ಪದಗಳು ಹೇಳಲಾಗದ್ದನ್ನು ಒಂದು ಚಿತ್ರ ಹೇಳಬಲ್ಲದು" ಎಂಬುದು ಅಕ್ಷರಶಃ ಸತ್ಯ. ಅಕ್ಷರಗಳಲ್ಲಿ ವ್ಯಕ್ತಪಡಿಸಲಾಗದ್ದನ್ನೂ ಕೆಲವೊಮ್ಮೆ ಚಿತ್ರಗಳು ಹೇಳುತ್ತವೆ. ಅದು ಫೋಟೋಗ್ರಫಿಯ ಹೆಗ್ಗಳಿಕೆಯೂ ಹೌದು.
ಆಗಸ್ಟ್ 19 ಅನ್ನು ವಿಶ್ವ ಛಾಯಾಚಿತ್ರ ದಿನವನ್ನಾಗಿ ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ಈ ದಿನವನ್ನು ಛಾಯಾಚಿತ್ರಕಾರರು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. 1837 ರ ಇದೇ ದಿನ ಮೊಟ್ಟ ಮೊದಲ ಬಾರಿಗೆ ಫೋಟೋಗ್ರಫಿ ತಂತ್ರಜ್ಞಾನವನ್ನು ಪರಿಚಯಿಸಿದ್ದರಿಂದ ಈ ದಿನವನ್ನು ಫೋಟೋಗ್ರಫಿ ದಿನವನ್ನಾಗಿ ಆಚರಿಸಲಾಗುತ್ತದೆ.
ತೇಜಸ್ವಿ ಜನ್ಮದಿನಕ್ಕೆ ಫೋಟೋಗ್ರಾಫರ್ ಹಂಚಿಕೊಂಡ ಅನುಭವ
ನೋಡಿದೊಡನೆ, ವ್ಹಾವ್ ಎಂದು ಉದ್ಗಾರ ಹೊರಡುವ, ಪ್ರತಿ ಚಿತ್ರದ ಹಿಂದೂ ಸಾವಿರಾರು ರೋಚಕ ಕತೆಗಳಿರುತ್ತವೆ. ದಟ್ಟಾರಣ್ಯದಲ್ಲಿ ಒಂದೇ ಒಂದು ಫೋಟೋಕ್ಕಾಗಿ ಹುಚ್ಚು ಹಿಡಿದಂತೆ ಅಲೆದ ಕತೆ, ಬಾನಾಡಿಯೊಂದು ತನ್ನ ಮರಿಗೆ ಗುಟುಕು ತರುವುದನ್ನೇ ಕಾಯುತ್ತ ದಿನಗಟ್ಟಲೆ ತಾಳ್ಮೆಯಿಂದ ಕಾದ ಕತೆ, ಯಾವುದೋ ಗಲಭೆಯ ಚಿತ್ರಕ್ಕಾಗಿ ಮೈತುಂಬ ಗಾಯಮಾಡಿಕೊಂಡ ಕತೆ, ಹತ್ತಾರು ದಿನ ಮನೆಬಿಟ್ಟು ಗೊತ್ತು ಗುರಿ ಇಲ್ಲದೆ ಸುತ್ತಾಡಿದ ಕತೆ... ಹೀಗೇ ಲೆಕ್ಕವಿಲ್ಲದಷ್ಟು ಕತೆಗಳು ಹುಟ್ಟಿಕೊಳ್ಳುತ್ತವೆ.
ವಿಶೇಷ ಲೇಖನ: ಸ್ವಲ್ಪ ಈ ಕಡೆ ನೋಡಿ... ಸ್ಮೈಲ್ ಪ್ಲೀಸ್...
ಬೆನ್ನಿಗೇರಿಸಿಕೊಂಡು ಹೊರಟ ಕ್ಯಾಮೆರಾ ಮೊದ ಮೊದಲು ಆಸಕ್ತಿಯಾಗಿ, ನಂತರ ಹವ್ಯಾಸವಾಗಿ, ಕೊನೆಗೊಮ್ಮೆ ಚಟವಾಗಿ... ಬಿಟ್ಟರೂ ಬಿಡದೆಂಬಂತೆ ಕಾಡುತ್ತದೆ. ಪ್ರಕೃತಿಯ ಅನನ್ಯ ಸೌಂದರ್ಯವನ್ನೆಲ್ಲ ಒಂದು ಪುಟ್ಟ ಪೆಟ್ಟಿಗೆಯಲ್ಲಿ ಸೆರೆ ಹಿಡಿದು ಬೀಗುವ ಫೋಟೋಗ್ರಾಫರ್ ಗಳಿಗೆ ಸಾಟಿ ಯಾರು? ನೋಡಿದೊಡನೆ ಕಣ್ಮನ ಸೆಳೆಯ 10 ಚಿತ್ರಗಳನ್ನು ವಿಶ್ವ ಫೋಟೋಗ್ರಫಿ ದಿನದ ಸಲುವಾಗಿ ನಿಮ್ಮ ಮುಂದಿಡಲಾಗಿದೆ. ಇವು ಪ್ರಕೃತಿ ವಿಸ್ಮಯದ ಮಹೋನ್ನತಿಯನ್ನು ಪದಗಳಿಗಿಂತ ಪರಿಣಾಮಕಾರಿಯಾಗಿ ವ್ಯಕ್ತಪಡಿಸುವುದು ಸುಳ್ಳಲ್ಲ.(ಚಿತ್ರ ಕೃಪೆ: ಪಿಟಿಐ)
ಅಕ್ಕರೆ ತುಂಬಿದ ಗುಟುಕು
ತನ್ನ ಪುಟ್ಟ ಮರಿಗಳಿಗೆ ಗುಟುಕಿನೊಂದಿಗೆ ಅಕ್ಕರೆಯನ್ನೂ ತುಂಬಿ ನೀಡುತ್ತಿರುವ ತಾಯಿ ಹಕ್ಕಿ. ಈ ಚಿತ್ರ ತಾಯಿಪ್ರೀತಿಯ ಔನ್ನತ್ಯವನ್ನು ತೆರೆದಿಡುವುದು ಸುಳ್ಳಲ್ಲ.
ಮೃಗಗಳಲ್ಲೂ ಮಾನವೀಯತೆ!
ಚಿರತೆಯ ಮರಿಯೊಂದು ಸಿಂಹದ ಹಅಲು ಕುಡಿಯುತ್ತಿರುವ ಈ ದೃಶ್ಯ ಮೃಗಗಳಲ್ಲೂ ಸುಪ್ತವಾಗಿರುವ ಮಾನವೀಯತೆಯನ್ನು ಪ್ರಕಟಿಸುತ್ತವೆ. ತನ್ನ ಒಡಲಲ್ಲಿ ಹುಟ್ಟದ ಮರಿಯಲ್ಲದಿದ್ದರೂ ಚಿರತೆ ಮರಿಗೂ ಅಕ್ಕರೆಯಿಂದ ಹಾಲುಣಿಸುತ್ತಿರುವ ಸಿಂಹವನ್ನು ಕ್ರೂರ ಮೃಗ ಎಂದು ಕರೆಯುವುದು ಹೇಗೆ?
ತುತ್ತಿನ ಬುತ್ತಿ ತಲೆಮೇಲೆ ಹೊತ್ತು...
ಹೊಟ್ಟೆಪಾಡಿಗಾಗಿ ದುರದೂರಿಗೆ ತೆರಳುವ ಕಾರ್ಮಿಕರು ಸಂಜೆಯಾಗುತ್ತಲೇ ಮನೆಯತ್ತ ತೆರಳುತ್ತಿರುವ ದೃಶ್ಯ. ತುತ್ತಿನ ಬುತ್ತಿಯನ್ನು ತಲೆಮೇಲೆ ಹೊತ್ತ ಈ ಚಿತ್ರ, ಸಂಜೆ ಹಗಲೆನ್ನದೆ ಬದುಕಿನ ಅನಿವಾರ್ಯತೆಗಳಿಗೆ ತಲೆಬಾಗಲೇಬೇಕೆಂಬ ಸಂದೇಶವನ್ನು ಸ್ಫುರಿಸುವಂತಿದೆ.
ಸೃಷ್ಟಿಯ ಸೊಬಗಿಗೆ ಹೋಲಿಕೆಯೆಲ್ಲಿ?
ಸೂರ್ಯಕಾಂತಿ ಹೂವಿನ ಮೇಲೆ ಕುಳಿತು, ಮಧುವನ್ನು ಹೀರುತ್ತಿರುವ ಚಿಟ್ಟೆಯ ಚಿತ್ತಾರ ಸೃಷ್ಟಿಯ ಸೊಬಗಿಗೆ ಕನ್ನಡಿ ಹಿಡಿದಂತಿದೆ. ಅದರ ರೆಕ್ಕೆಯ ಮೇಲೆ ಒಪ್ಪವಾಗಿ ಬಿಡಿಸಿಟ್ಟ ರಂಗವಲ್ಲಿ ಸೃಷ್ಟಿ ವಿಸ್ಮಯದ ದ್ಯೋತಕ!
ಮೊಟ್ಟೆಯ ಕಾಯುವ ಕಾಯಕ!
ಮರದ ಪೊಟರೆಯಲ್ಲಿ ಮೊಟ್ಟೆಯನ್ನಿಟ್ಟು ಅಡಿಗಡಿಗೆ ಅದರ ಯೋಗಕ್ಷೇಮ ವಿಚಾರಿಸುತ್ತ, ಮೊಟ್ಟೆಯನ್ನು ಕಾಯುವುದನ್ನೇ ಕಾಯಕವನ್ನಾಗಿಸಿಕೊಂಡ ಮುದ್ದು ಗಿಳಿರಾಮ, ಮರದ ಪೊಟರೆಯಿಂದ ಇಣುಕುತ್ತಿರುವ ಮನಮೋಹಕ ದೃಶ್ಯ.
ಬಾಯಾರಿಕೆಗೆ ನೀರು, ಕಣ್ಣಿಗೆ ಶಿಕಾರಿಯ ಕನಸು!
ಬಾಯಾರಿತೆಂದು ನೀರು ಕುಡಿಯಲು ಬಂದ ಚಿರತೆಯೊಂದು ಕಣ್ಣಲ್ಲಿ ಶಿಕಾರಿಗಾಗಿ ಹುಡುಕಾಟ ನಡೆಸುತ್ತಿರುವ ದೃಶ್ಯ ಛಾಯಾಚಿತ್ರಕಾರನ ಕಣ್ಣಲ್ಲಿ ಸೆರೆಯಾದದ್ದು ಹೀಗೆ.
ಉಸ್ಸಪ್ಪಾ... ಸೆಕೆ!
ಸೆಕೆ ತಾಳಲಾರದ ಹುಲಿಯೊಂದು ನೀರಿನಲ್ಲಿ ಮುಳುಗಿ, ನಂತರ ಮೈಮೇಲಿನ ನೀರನ್ನೆಲ್ಲ ಕೊಡವಿಕೊಳ್ಳುತ್ತಿದ್ದ ಸಮಯಕ್ಕೆ, ಥಟ್ ಅಂತ ಕ್ಲಿಕ್ ಮಾಡಿದ ಫೋಟೋಗ್ರಾಫರ್ ನ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದ್ದು ಹೀಗೆ!
ಸಂಧ್ಯಾರಾಗಕ್ಕೆ ಹೆಜ್ಜೆಯ ಸಾಥ್!
ಸೂರ್ಯ ರಂಗೇರುತ್ತ ಹಾಡುತ್ತಿರುವ ಸಂಧ್ಯಾರಾಗಕ್ಕೆ ಹೆಜ್ಜೆ ಹಾಕುತ್ತಿರುವ ಜಿಂಕೆಗಳ ಸಮೂಹ ಸಂಜೆಗೆ ಮೆರುಗು ನೀಡಿದ್ದು ಹೀಗೆ.
ದೋಣಿ ಸಾಗಲಿ ಮುಂದೆ ಹೋಗಲಿ...
ದೋಣಿಯಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬ ನದಿಯಲ್ಲಿದ್ದ ಪಕ್ಷಿಗಳಿಗೆ ಆಹಾರ ಎಸೆಯುತ್ತಿರುವ ಈ ದೃಶ್ಯದೊಂದಿಗೆ ಹಿನ್ನೆಲೆಯಲ್ಲಿ ಸೂರ್ಯಾಸ್ತವೂ ಸೇರಿಕೊಂಡು ಹಲವಾರು ಕತೆ ಹೇಳುತ್ತಿವೆ.
ಗುಡಿಗೋ, ಮುಡಿಗೋ..!
ದೇವರ ಗುಡಿಗೋ, ಲಲನೆಯರ ಮುಡಿಗೋ ಸೇರಲು ತವಕದಿಂದಿರುವ ಮೊಗ್ಗುಗಳು ಈಗಿನ್ನೂ ಬಿರಿದು, ಸುವಾಸನೆ ಬೀರಿ ಅರಳುತ್ತಿರುವ ಕ್ಷಣ.