ಟೀಂ ಇಂಡಿಯಾದ ಕಿತ್ತಳೆ ಬಣ್ಣದ ಜೆರ್ಸಿಗೆ ಕಾಂಗ್ರೆಸ್, ಎಸ್ಪಿ ವಿರೋಧ
ನವದೆಹಲಿ, ಜೂನ್ 26: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಜೂನ್ 30ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ನೀಲಿ ದಿರಿಸಿನ ಬದಲು ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಮೈದಾನಕ್ಕಿಳಿಯಲಿದೆ.
ಆದರೆ, ಈ ಬಣ್ಣದ ದಿರಿಸಿಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಭಾರತದ ಕ್ರಿಕೆಟ್ ತಂಡವು ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಆಡುವುದಕ್ಕೆ ಮಹಾರಾಷ್ಟ್ರದ ಮುಸ್ಲಿಂ ಶಾಸಕರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.
ಆಂಗ್ಲರ ವಿರುದ್ಧ ಕಿತ್ತಳೆ ಜರ್ಸಿ ತೊಟ್ಟು ಟೀಂ ಇಂಡಿಯಾ ಕಣಕ್ಕೆ?
ಈ ನಿರ್ಧಾರದ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ. ಈ ಬಣ್ಣದ ಜೆರ್ಸಿಯು ದೇಶದೆಲ್ಲೆಡೆ ಕೇಸರೀಕರಣ ನಡೆಯುತ್ತಿರುವುದರ ಭಾಗ ಎಂದು ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಆರೋಪಿಸಿದ್ದಾರೆ.
ಇಡೀ ದೇಶವನ್ನು ಕೇಸರಿಮಯ ಮಾಡಲು ಮೋದಿಜಿ ಬಯಸಿದ್ದಾರೆ. ಭಾರತದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ್ದು ಒಬ್ಬ ಮುಸ್ಲಿಂ. ತ್ರಿವರ್ಣಗಳಲ್ಲಿ ಬೇರೆ ಬಣ್ಣಗಳೂ ಇವೆ. ಆದರೆ, ಕಿತ್ತಳೆಯನ್ನೇ ಏಕೆ ಆಯ್ದುಕೊಳ್ಳಲಾಗಿದೆ? ಜೆರ್ಸಿಯು ತ್ರಿವರ್ಣಗಳನ್ನು ಆಧರಿಸಿ ವಿನ್ಯಾಸಗೊಂಡಿದ್ದರೆ ಒಳ್ಳೆಯದಿತ್ತು ಎಂದು ಹೇಳಿದ್ದಾರೆ.
ಈ ಹೇಳಿಕೆಯನ್ನು ಬೆಂಬಲಿಸಿರುವ ಕಾಂಗ್ರೆಸ್ ಶಾಸಕ ನಸೀಮ್ ಖಾನ್, ಮೋದಿ ಸರ್ಕಾರವು ಕೇಸರಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ವಿಶ್ವಕಪ್ ತಂಡಗಳ ಸೆಮಿಫೈನಲ್ ಹಾದಿಯ ಕುತೂಹಲಕಾರಿ ಲೆಕ್ಕಾಚಾರ!
ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಅದು ಕೇಸರಿ ರಾಜಕಾರಣ ಮಾಡುತ್ತಿದೆ. ತ್ರಿವರ್ಣವನ್ನು ಗೌರವಿಸಬೇಕು. ರಾಷ್ಟ್ರೀಯ ಸೌಹಾರ್ದಕ್ಕೆ ಉತ್ತೇಜನ ನೀಡಬೇಕು. ಈ ಸರ್ಕಾರ ಎಲ್ಲವನ್ನೂ ಕೇಸರಿಮಯಗೊಳಿಸಲು ಬಯಸಿದೆ ಎಂದು ದೂರಿದ್ದಾರೆ.
ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರು ಕಿತ್ತಳೆ ಬಣ್ಣದ ಜೆರ್ಸಿಯನ್ನು ಬೆಂಬಲಿಸಿದ್ದಾರೆ. ಈ ಬಣ್ಣವು ಧೈರ್ಯ ಮತ್ತು ಗೆಲುವಿನ ಸಂಕೇತ. ಅದರೊಂದಿಗೆ ಯಾರಿಗೂ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.