ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಮಹಿಳೆಯರ ಸೇರ್ಪಡೆಗೆ ಕೇಂದ್ರ ಒಪ್ಪಿಗೆ
ನವದೆಹಲಿ, ಸೆಪ್ಟೆಂಬರ್ 8: ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಮಹಿಳೆಯರನ್ನು ಸೇರಿಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ಬುಧವಾರ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದೆ. ರಕ್ಷಣಾ ಪಡೆಗಳ ಜೊತೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಈ ಕುರಿತು ಕೇಂದ್ರ ಸರ್ಕಾರದ ಪರ ನ್ಯಾಯಾಲಯಕ್ಕೆ ವಿವರಣೆ ನೀಡಿದ್ದಾರೆ.
ಮಹಿಳೆಯರು ಎನ್ಡಿಎ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಿದ ಸುಪ್ರೀಂ
'ಮಹಿಳೆಯರು ಎನ್ಡಿಎಗೆ ಸೇರಲು ಕೇಂದ್ರ ಒಪ್ಪಿಗೆ ನೀಡಿದೆ. ಈ ಕುರಿತು ಅಫಿಡವಿತ್ ಸಲ್ಲಿಸಲಿದ್ದೇವೆ' ಎಂದು ಭಾಟಿಯಾ ತಿಳಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಕೈಗೊಳ್ಳಲಿರುವ ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ನೀಡಲು ನ್ಯಾಯಾಲಯ ಆದೇಶಿಸಿದ್ದು, ಎರಡು ವಾರಗಳ ಕಾಲಾವಕಾಶ ನೀಡಿ ಸೆಪ್ಟೆಂಬರ್ 22ರಂದು ಮತ್ತೆ ಚರ್ಚೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.
ಮಹಿಳೆಯರಿಗೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಭಾಗವಾಗಲು ನಿರಾಕರಿಸುವುದು ಭಾರತದ ಸಂವಿಧಾನದ 14, 15, 16 ಹಾಗೂ 19ನೇ ವಿಧಿಯ ಉಲ್ಲಂಘನೆ ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಪೀಠ ಬುಧವಾರ ನಡೆಸಿತು.
ಮಹಿಳೆಯರು ಎನ್ಡಿಎ ಪ್ರವೇಶ ಪರೀಕ್ಷೆ ಬರೆಯಲು ಅನುಮತಿ ನೀಡುವ ಸಂಬಂಧ ಆಗಸ್ಟ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿತ್ತು.
2027ರಲ್ಲಿ ಭಾರತದ ಪ್ರಥಮ ಮಹಿಳಾ ಸಿಜೆಐ ಆಗಲಿದ್ದಾರೆ ಬಿ.ವಿ. ನಾಗರತ್ನ
ಸದ್ಯ ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟಿರುವ ಕೇಂದ್ರದ ನಿಲುವಿಗೆ ಸುಪ್ರೀಂ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದ್ದು, 'ಎನ್ಡಿಎ ಮಹಿಳೆಯರ ಪ್ರವೇಶಾತಿಗೆ ಸಂಬಂಧಿಸಿದಂತೆ ಪ್ರಾಧಿಕಾರಗಳಿಗೆ ಪ್ರೇರೇಪಿಸಿದ್ದೇವೆ. ಲಿಂಗ ಸಮಾನತೆ ವಿಚಾರದಲ್ಲಿ ದೇಶದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಬೇಕಿದೆ. ಕೇಂದ್ರದ ಸದ್ಯದ ಈ ನಿಲುವು ಸಂತೋಷ ತಂದಿದೆ' ಎಂದು ಹೇಳಿದೆ.
ಎನ್ಡಿಎಗೆ ಮಹಿಳೆಯರ ಸೇರ್ಪಡೆ ಸಂಬಂಧ ರಕ್ಷಣಾ ಪಡೆಗಳು ನಿರ್ಧರಿಸಿದ್ದು, ಈ ಸಂಬಂಧ ಅಭಿವೃದ್ಧಿ ಯೋಜನೆ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ.
ಮಹಿಳೆಯರಿಗೆ ರಕ್ಷಣಾ ಹಾಗೂ ನೌಕಾಪಡೆ ಅಕಾಡೆಮಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು. ಎನ್ಡಿಎ ಪರೀಕ್ಷೆ ತರಬೇತಿಯನ್ನು ಅವರು ಪಡೆಯಬಹುದಾಗಿದೆ. ಸಂಬಂಧಿತ ಪ್ರಾಧಿಕಾರಗಳಿಗೆ ಅಧಿಸೂಚನೆ ಹೊರಡಿಸಬೇಕು, ಹಾಗೆಯೇ ಅಗತ್ಯ ಪ್ರಚಾರ ನೀಡಬೇಕು ಎಂದು ಆಗಸ್ಟ್ 19ರಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹಾಗೂ ಹೃಷಿಕೇಶ್ ರಾಯ್ ಅವರನ್ನೊಳಗೊಂಡ ನ್ಯಾಯಪೀಠ ಕೇಂದ್ರ ಲೋಕಸೇವಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.
ರಾಷ್ಟ್ರೀಯ ಭದ್ರತಾ ಪಡೆಯಲ್ಲಿ ಲಿಂಗಸಮಾನತೆ ಸಾಧಿಸಲು ಇದು ಮಹತ್ವದ ಹೆಜ್ಜೆ. ಈ ಪರೀಕ್ಷೆಯ ಫಲಿತಾಂಶ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಮಹಿಳಾ ಅಭ್ಯರ್ಥಿಗಳು ನ್ಯಾಯಾಲಯದ ಮುಂದಿನ ಆದೇಶಗಳಿಗೆ ಒಳಪಟ್ಟು ಪರೀಕ್ಷೆ ಬರೆಯಬಹುದು ಎಂದು ಸ್ಪಷ್ಟನೆ ನೀಡಲಾಗಿತ್ತು.
"ಭೂಸೇನೆ ಹಾಗೂ ನೌಕಾಪಡೆಯಲ್ಲ ಮಹಿಳೆಯರನ್ನು ಕಾಯಂ ಸೇವೆಗೆ ನಿಯೋಜಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಹೀಗಿದ್ದರೂ ಸರ್ಕಾರ ಈ ನೀತಿ ಅನುಸರಿಸಲು ಕಾರಣವೇನು" ಎಂದು ಪ್ರಶ್ನಿಸಿತ್ತು.
ಸೇನೆಯಲ್ಲಿ ಮಹಿಳೆಗೆ ಅವಕಾಶ ಇದ್ದಾಗ, ಎನ್ಡಿಎ ಪರೀಕ್ಷೆ ಬರೆಯಲು ಏಕೆ ತಡೆಯಲಾಗುತ್ತಿದೆ ಎಂದು ಕೇಳಿದ್ದು, ಸರ್ಕಾರ ಯಾವಾಗಲೂ ನ್ಯಾಯಾಂಗದ ಮಧ್ಯಸ್ಥಿಕೆ ಬಯಸಬಾರದು ಎಂದಿತ್ತು.
ಬಹಳ ಹಿಂದಿನಿಂದಲೂ ಎನ್ಡಿಎಯಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ನ್ಯಾಯಾಲಯ ಹೇಳುತ್ತಲೇ ಬಂದಿತ್ತು. ಆದರೆ ಸೇನೆಯ ಉನ್ನತಾಧಿಕಾರಿಗಳು ಸ್ವಯಂಪ್ರೇರಿತವಾಗಿ ತೀರ್ಮಾನ ಕೈಗೊಳ್ಳಬೇಕೆಂದು ಬಯಸುತ್ತಿರುವುದಾಗಿ ಹೇಳಿತ್ತು.
ಸದ್ಯ ಸೇನೆಯ ನಿರ್ಧಾರಕ್ಕೆ ನ್ಯಾಯಾಲಯ ಸಂತಸ ವ್ಯಕ್ತಪಡಿಸಿದ್ದು, ಭಾರತೀಯ ಸೇನೆ ವಿಶ್ವದಲ್ಲೇ ಗೌರವಯುತ ಸಂಸ್ಥೆಯಾಗಿದೆ. ಆದರೆ ಲಿಂಗ ಸಮಾನತೆ ವಿಚಾರದಲ್ಲಿ ಇನ್ನಷ್ಟು ಸುಧಾರಣೆಗಳ ಅಗತ್ಯವಿದೆ ಎಂದು ಹೇಳಿದೆ.