ಮಿಸ್ ವ್ಹೀಲ್ ಚೇರ್ ಗೆದ್ದುಬರಲಿ ನಮ್ಮ ಕನ್ನಡತಿ ಡಾ.ರಾಜಲಕ್ಷ್ಮಿ
ಮೈಸೂರು, ಸೆಪ್ಟೆಂಬರ್ 30: ಅನೀರಿಕ್ಷಿತ ಆಘಾತಗಳು ಬದುಕನ್ನು ಕಲಿಸುತ್ತವಂತೆ! ಡಾ.ಎಸ್.ಜೆ.ರಾಜಲಕ್ಷ್ಮಿ ಎಂಬ ಸುಂದರ ದಂತವೈದ್ಯೆಯೊಬ್ಬರ ಬದುಕಿನಲ್ಲಾಗಿದ್ದೂ ಅದೇ. ವೈದ್ಯ ತಂದೆ-ತಾಯಿ, ಜೀವನದಲ್ಲಿ ಯಾವುದಕ್ಕೂ ಕೊರತೆಯಿಲ್ಲದ ಸ್ಥಿತಿಯಲ್ಲಿ ಹುಟ್ಟಿ, ಬೆಳೆದ ರಾಜಲಕ್ಷ್ಮಿಯವರಿಗೆ ಬದುಕಿನ ಸಂಕೀರ್ಣತೆಯ ಪರಿಚಯವಾಗಿದ್ದು, ಅವರು ಭೀಕರ ಅಪಘಾತವೊಂದರಲ್ಲಿ ಗಾಯಗೊಂಡಾಗಲೇ.
ವಿಧಿಯೇ ರೂಪಿಸಿದ ಈ ವಿಶ್ವಸುಂದರಿ ಹೆಸರು ರಾಜಲಕ್ಷ್ಮಿ!
ಸದಾ ಚಟುವಟಿಕೆಯಿಂದ, ಪಾದರಸದಂತೆ ಓಡಾಡುತ್ತಿದ್ದ ರಾಜಲಕ್ಷ್ಮಿ ಮೊಟ್ಟ ಮೊದಲ ಬಾರಿಗೆ ವ್ಹೀಲ್ ಚೇರ್ ನಲ್ಲಿ ಕುಳಿತು ಜಗತ್ತನ್ನು ನೋಡಬೇಕಾದ ಸ್ಥಿತಿ ಎದುರಾದಾಗ ಜೀವನ ಬೇರೆಯೇ ಇದೆ ಅನ್ನಿಸಿತ್ತು. ದೈಹಿಕ ಸ್ಥಿತಿಯಲ್ಲಿ ಬದಲಾವಣೆ, ಅನಿರೀಕ್ಷಿತ ಆಘಾತ ಎಲ್ಲವೂ ಸೇರಿ ಬದುಕು ಸಾಕು ಎನ್ನಿಸುವ ಹಂತ ತಲುಪಿದ್ದು ಹಲವು ಸಲ. ಆದರೆ ಅವರಲ್ಲಿದ್ದ ಇಚ್ಛಾಶಕ್ತಿ, ಬದುಕುವ ಛಲ, ಈ ಸ್ಥಿತಿಯಲ್ಲಿ ಬದುಕನ್ನು ಬೇರೆಯದೇ ರೀತಿಯಲ್ಲಿ ಪ್ರೀತಿಸುವ ಜೀವನಪ್ರೀತಿ ಎಲ್ಲವೂ ಸೇರಿ ಅವರನ್ನೀಗ ಮಿಸ್ ವ್ಹೀಲ್ ಚೇರ್ ವರ್ಲ್ಡ್ ಸ್ಪರ್ಧೆಯ ಉತ್ತುಂಗಕ್ಕೆ ತಂದು ಕೂರಿಸಿದೆ!
ಮಹಿಳಾ ಸಾಧಕಿ- 3: 'ಅವಳ ಹೆಜ್ಜೆ'ಯ ಶಾಂತಲಾ ದಾಮ್ಲೆ
ಹೌದು, ಯಾವುದೋ ಒಂದು ಅಹಿತಕರ ಘಟನೆಗೆ ಬದುಕನ್ನೇ ಮುಗಿಸಿಬಿಡುವಷ್ಟು ತಾಕತ್ತಿಲ್ಲ ಎಂಬುದನ್ನು ರಾಜಲಕ್ಷ್ಮಿ ಸಾಬೀತುಪಡಿಸಿದ್ದಾರೆ. ಬದುಕುವ ಛಲವಿದ್ದರೆ ಎಂಥ ದುರಂತವನ್ನೂ ನಾಚಿಸಿ ಬದುಕಬಹುದು ಎಂಬುದು ಅವರ ಬದುಕಿನ ಅನುಭವದ ಮಾತು. ಪೊಲೆಂಡ್ ನಲ್ಲಿ ಅಕ್ಟೋಬರ್ 7 ರಂದು ನಡೆಯಲಿರುವ ಮಿಸ್ ವ್ಹೀಲ್ ಚೇರ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿರುವ ರಾಜಲಕ್ಷ್ಮಿ, ಅಲ್ಲಿಗೆ ತೆರಳುವ ಮುನ್ನ ಒನ್ ಇಂಡಿಯಾಕ್ಕೆ ನೀಡಿದ ಸಂದರ್ಶನ ಇಲ್ಲಿದೆ. ಈ ವಾರದ ನಮ್ಮ ಮಹಿಳಾ ಸಾಧಕಿ ರಾಜಲಕ್ಷ್ಮಿ ಅವರು ಮಿಸ್ ವ್ಹೀಲ್ ಚೇರ್ ವರ್ಲ್ಡ್ ಸ್ಪರ್ಧೆಯನ್ನು ಗೆದ್ದು ಬರಲಿ ಎಂದು ಹಾರೈಸುತ್ತ, ಅವರ ಬದುಕಿನ ಕುರಿತು ಅವರೇ ಹೇಳಿದ ಮಾತುಗಳನ್ನು ಕೇಳಿ...
ಬದುಕನ್ನೇ ಬದಲಿಸಿತು ಅನಿರೀಕ್ಷಿತ ಆಘಾತ
"ನಾನು ಹುಟ್ಟಿ, ಬೆಳೆದಿದ್ದು ಬೆಂಗಳೂರಿನಲ್ಲೆ, ನಾನು ಕನ್ನಡತಿ! ಗಿರಿನಗರದಲ್ಲಿ ನಮ್ಮ ಮನೆ. ಅಪ್ಪ-ಅಮ್ಮ ಇಬ್ಬರೂ ವೈದ್ಯರು. ನನಗೂ ವೈದ್ಯ ವೃತ್ತಿಯ ಮೇಲೆ ಮೊದಲಿನಿಂದಲೂ ಆಸಕ್ತಿ. ಇಷ್ಟಪಟ್ಟು ದಂತವೈದ್ಯಕೀಯ ಓದುತ್ತಿದ್ದ ನಾನು ಚೆನ್ನೈನಲ್ಲಿ ನಡೆಯುತ್ತಿದ್ದ ರಾಷ್ಟ್ರಮಟ್ಟದ ಸಮಾವೇಶವೊಂದರಲ್ಲಿ ಪ್ರಬಂಧ ಮಂಡಿಸಲು ತೆರಳಿದ್ದೆ. ನನ್ನ ದುರದೃಷ್ಟವೋ, ಚಾಲಕನ ಬೇಜವಾಬ್ದಾರಿಯೋ, ಒಟ್ಟಿನಲ್ಲಿ ನಮ್ಮ ಮಾರ್ಗಮಧ್ಯೆ ನಮ್ಮ ಕಾರು ಅಪಘಾತಕ್ಕೊಳಗಾಗಿ, ನನ್ನ ಬೆನ್ನುಹುರಿಗೆ ಗಂಭೀರ ಪೆಟ್ಟು ಬಿತ್ತು! ಎಚ್ಚರವಾಗುವ ಹೊತ್ತಿಗೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ನನಗೆ ಇನ್ನು ನಡೆಯುವುದಕ್ಕೆ ಸಾಧ್ಯವಿಲ್ಲ ಎಂಬ ವಿಷಯ ಎಷ್ಟೋ ದಿನಗಳವರೆಗೂ ನಂಬುವುದಕ್ಕೆ ಸಾಧ್ಯವಾಗಿರಲಿಲ್ಲ!"
ಸೌಂದರ್ಯಳನ್ನು ಜೀವಂತವಾಗಿಟ್ಟಿರುವ ಅತ್ತಿಗೆ ನಿರ್ಮಲಾ!
ನನ್ನದೇ ದೇಹಕ್ಕೆ ಅಪರಿಚಿತಳಾದ ಅನುಭವ!
"ಅಲ್ಲಿಯವರೆಗೂ ಬದುಕಿನ ಬಗೆಗಿದ್ದ ದೃಷ್ಟಿಕೋನ ಬದಲಿಸಿಕೊಳ್ಳಲೇಬೇಕಿತ್ತು. ಎಲ್ಲವೂ ಹೊಸತು. ಹಲವು ದಿನಗಳವರೆಗೆ ಮತ್ತೊಬ್ಬರ ಮೇಲೆ ಅವಲಂಬಿತಳಾಗಲೇ ಬೇಕಾದ ಸ್ಥಿತಿ! ನನ್ನದೇ ದೇಹದೊಂದಿಗೆ ಅಪರಿಚಿತಳಂತೆ ಅನುಸಂಧಾನ ನಡೆಸಬೇಕಾದ ಸ್ಥಿತಿಯಲ್ಲಿ ನಾನಿದ್ದೆ. ಯಾವುದೋ ಒಂದು ಬಿಂದುವಿನಲ್ಲಿ ಬದುಕು ಸಾಕು ಅಂತಲೂ ಅನ್ನಿಸದಿಲ್ಲ! ಆದರೆ ಆ ಹೊತ್ತಿಗಷ್ಟೇ ಆ ಭಾವ. ಈ ಘಟನೆಯ ನಂತರ ಬದುಕು ಹೊಸ ಗುರಿಯನ್ನು ಹುಡುಕಿಕೊಳ್ಳತೊಡಗಿತ್ತು. ಕ್ರಮೇಣ ಆ ಗುರಿಯೇ ಗಟ್ಟಿಯಾಗುತ್ತ ಈಗ ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ."
ಮಹಿಳಾ ಸಾಧಕಿ ಭಾಗ-2: ಥ್ರೋಬಾಲ್ ಮಿನುಗು ತಾರೆ ಸಂಪೂರ್ಣ
ಅಪಘಾತದ ನಂತರವೂ ಡಾನ್ಸರ್!
"ಮನಶ್ಶಾಸ್ತ್ರ ಮತ್ತು ಫ್ಯಾಷನ್ ಕೋರ್ಸ್ ಮಾಡಿ, ನಂತರ ಎಂಬಿಎ ಪದವಿ ಪಡೆದೆ. ನನ್ನದೇ ಆದ ಒಂದು ಕ್ಲೀನಿಕ್ ಶುರುಮಾಡಿದೆ. ಅಪಘಾತಕ್ಕೂ ಮೊದಲು ನೃತ್ಯ ಮತ್ತು ಟೇಬಲ್ ಟೆನ್ನಿಸ್ ನಲ್ಲಿ ಸಾಕಷ್ಟು ಆಸಕ್ತಿ ಇತ್ತು. ಅಪಘಾತದ ನಂತರೂ ವ್ಹೀಲ್ ಚೇರ್ ಡಾನ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತೇನೆ."
ಮಿಸ್ ವ್ಹೀಲ್ ಚೇರ್ ಇಂಡಿಯಾ ಕಿರೀಟ ಮುಡಿಗೆ ಬಂದಾಗ...
"ಈ ಘಟನೆಯ ನಂತರ ನನ್ನ ಆಸಕ್ತಿ ಮಾಡೆಲಿಂಗ್ ನತ್ತ ಹೊರಳಿತು. ಮಿಸ್ ವ್ಹೀಲ್ ಚೇರ್ ಬಗ್ಗೆ ಮಾಹಿತಿ ಕಲೆಹಾಕಿ ಅದರಲ್ಲಿ ಪಾಲ್ಗೊಂಡೆ. 2014 ರಲ್ಲಿ ನನ್ನೆಲ್ಲ ಪ್ರಯತ್ನಕ್ಕೂ ಫಲ ಸಿಕ್ಕಿತು. ಮಿಸ್ ವ್ಹೀಲ್ ಚೇರ್ ಇಂಡಿಯಾ ಕಿರೀಟ ಮುಡಿಗೇರಿದಾಗ ಆದ ಸಂತಸ ಬೇರೆಲ್ಲ ನೋವನ್ನೂ ಮರೆಸಿತ್ತು. ಇದೀಗ ಪೊಲೆಂಡ್ ನಲ್ಲಿ ಅಕ್ಟೋಬರ್ 7 ರಂದು ನಡೆಯಲಿರುವ ಮಿಸ್ ವ್ಹೀಲ್ ಚೇರ್ ವರ್ಲ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೊರಟಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ."
ನನ್ನಂಥ ಎಲ್ಲರಿಗೂ ಅನುಕಂಪವಲ್ಲ, ಪ್ರೋತ್ಸಾಹ ಬೇಕು
"ಈ ದುರಂತ ನನ್ನ ಬದುಕಿನಲ್ಲಿ ಹೆಚ್ಚೇನೂ ಬದಲಾವಣೆ ಮಾಡಲಿಲ್ಲ. ಯಾಕಂದ್ರೆ ನಂಗೆ ನನ್ನ ತಂದೆ-ತಾಯಿ ಕುಟುಂಬಸ್ಥರೆಲ್ಲರಿದಂದಲೂ ಸಾಕಷ್ಟು ಪ್ರೋತ್ಸಾಹ, ಬೆಂಬಲ ಸಿಕ್ಕಿದೆ. ಆದರೆ ನನಗೆ ಸಿಕ್ಕ ಈ ಬೆಂಬಲವೇ ನನ್ನಂಥ ನೂರಾರು ಜನರಿಗೂ ಸಿಕ್ಕಿದೆ ಎನ್ನುವುದಕ್ಕಾಗುವುದಿಲ್ಲ. ಪ್ರಪಂಚದಲ್ಲಿ ಸಾಕಷ್ಟು ಒಳ್ಳೆಯ ಜನರಿದ್ದಾರೆ. ಆದರೆ ನನ್ನಂಥ ಹಲವರಿಗೆ ಅಗತ್ಯವಿರುವುದು ಅನುಕಂಪವಲ್ಲ, ಬದಲಾಗಿ ಪ್ರೋತ್ಸಾಹ. ಹಾಗೆಯೇ ಇಂಥ ಯಾವುದೇ ದುರಂತ ಸಂಭವಿಸಿದರೂ ಎದೆಗುಂದುವ ಅಗತ್ಯವಿಲ್ಲ. ಇಂಥ ಘಟನೆಗಳು ಬದುಕಿನ ಬೇರೆ ಮುಖಗಳನ್ನು ತೋರಿಸುತ್ತೇವೆ, ಪ್ರಬುದ್ಧತೆ ಬೆಳೆಸುತ್ತವೆ. ಈ ಬದುಕನ್ನು ನಾನು ಮೊದಲಿಗಿಂತ ಹೆಚ್ಚು ಪ್ರೀತಿಸುತ್ತೇನೆ, ಪ್ರತಿಯೊಬ್ಬರೂ ಬದುಕನ್ನು ಪ್ರೀತಿಸಲಿ ಎಂದು ಬಯಸುತ್ತೇನೆ..."