ಒತ್ತೆ ಇಟ್ಟ ಮಗನ ಬಿಡಿಸಲು 2,000 ಕಿ.ಮೀ ಕ್ರಮಿಸಿದ ತಾಯಿ
2,000 ರೂಪಾಯಿ ಸಂಗ್ರಹಿಸಿ ಜೀತದಾಳಾಗಿ ಒತ್ತೆ ಇಟ್ಟಿದ್ದ ತನ್ನ 7 ವರ್ಷ ಪ್ರಾಯದ ಮಗನನ್ನು ಬಿಡಿಸಲು ಮೂರು ಮಕ್ಕಳ ತಾಯಿ ದೀಮಾಪುರ್ ನಿಂದ ತನ್ನ ಇಬ್ಬರು ಮಕ್ಕಳೊಂದಿಗೆ ಆಗ್ರಾದವರೆಗೆ 2,000 ಕಿಲೋಮೀಟರ್ ಪ್ರಯಾಣಿಸಿದ್ದಾರೆ.
ಆಗ್ರ, ಮೇ 15: ಒಂದು ಕಡೆ ವಿಶ್ವ ತಾಯಂದಿರ ದಿನ ಮುಗಿದಿದೆ. ಇನ್ನೊಂದು ಕಡೆ ಸಾಲ ವಾಪಸ್ ನೀಡಿ ಜೀತದಾಳಾಗಿರಿಸಿದ್ದ ತನ್ನ ಮಗನನ್ನು ಬಿಡಿಸಲು ಮೂರು ಮಕ್ಕಳ ತಾಯಿ 2,000 ಕಿಲೋಮೀಟರ್ ಪ್ರಯಾಣ ಬೆಳೆಸಿದ್ದಾರೆ. ಅದೂ ಜುಜುಬಿ 2,000 ರೂಪಾಯಿ ಪಾವತಿಸಲು! ಅಷ್ಟಕ್ಕೂ ಆ ಸಾಲ ತೆಗೆದಿದ್ದು ಸ್ವತಃ ತನ್ನ ಗಂಡನ ಅಂತ್ಯ ಸಂಸ್ಕಾರಕ್ಕೆ!!
ಇಂಥಹದ್ದೊಂದು ಹೃದಯ ವಿದ್ರಾವಕ ಘಟನೆ ಆಗ್ರಾದಲ್ಲಿ ನಡೆದಿದೆ.
ಮೂರು ಮಕ್ಕಳ ತಾಯಿ ದುಡಿದು ಕಾಸು ಸಂಗ್ರಹಿಸಲು ದೀಮಾಪುರ್ ನಿಂದ ತನ್ನ ಇಬ್ಬರು ಮಕ್ಕಳೊಂದಿಗೆ ಆಗ್ರಾದವರೆಗೆ ಪಯಣ ಬೆಳೆಸಿದ್ದಾರೆ. ಈ ಮೂಲಕ 2,000 ರೂಪಾಯಿ ಸಂಗ್ರಹಿಸಿ ಜೀತದಾಳಾಗಿ ಒತ್ತೆ ಇಟ್ಟಿದ್ದ ತನ್ನ 7 ವರ್ಷ ಪ್ರಾಯದ ಮಗನನ್ನು ಬಿಡಿಸಲು ಆಕೆ ಈ ಪ್ರಯಾಣ ನಡೆಸಿದ್ದರು. ತನ್ನ ಗಂಡ ಸತ್ತಾಗ ಅಂತ್ಯಸಂಸ್ಕಾರ ನಡೆಸಲು ಹಣವಿಲ್ಲದೆ ಮಗನನ್ನೇ ಒತ್ತೆ ಇಟ್ಟು ಆಕೆ ಈ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದರು.
2016ರ ಅಕ್ಟೋಬರಿನಲ್ಲಿ ರೀತಾ ಗಂಡ ತೀರಿಕೊಂಡಿದ್ದರು. ಈ ಸಂದರ್ಭ ತನ್ನ ಎರಡನೇ ಮಗ ಸೋನುವನ್ನು ಒತ್ತೆ ಇಟ್ಟು ಆಕೆ ಸಾಲ ಪಡೆದುಕೊಂಡಿದ್ದರು. ಆದರೆ ದಿನಕ್ಕೆ 40 ರೂ ದುಡಿಯುತ್ತಿದ್ದ ರೀತಾಗೆ ಸಾಲ ತೀರಿಸಲಾಗಲಿಲ್ಲ. ಕೊನೆಗೆ ಸಂಬಂಧಿಕರ ಸಲಹೆ ಮೇರೆಗೆ ಉಸ್ಯೋಗ ಪಡೆದು ಸಾಲ ತೀರಿಸಲು ಆಗ್ರಾಗೆ ಪ್ರಯಾಣಿಸಿದ್ದರು.
ಆದರೆ ಆಗ್ರಾಗೆ ಬಂದಿಳಿಯುತ್ತಿದ್ದಂತೆ ಆಕೆಯ ಸಂಬಂಧಿಕರು ಮಧ್ಯೆ ರಸ್ತೆಯಲ್ಲಿ ಬಿಟ್ಟು ಮಾಯವಾಗಿದ್ದರು. ಈ ಸಂದರ್ಭ ಹಸಿವಿನಿಂದ ಬಳಲುತ್ತಿದ್ದ ತನ್ನ ಮಕ್ಕಳಿಗೆ ಕಸದ ತೊಟ್ಟಿಯಿಂದಲೇ ಆಹಾರ ಹೆಕ್ಕಿ ಹೊಟ್ಟೆ ತುಂಬಿಸಿದ್ದಾರೆ. ಸಾರ್ವಜನಿಕ ನಲ್ಲಿಯಿಂದಲೇ ನೀರು ಕುಡಿದು ಸುಮಾರು ಒಂದು ವಾರ ಕಳೆದಿದ್ದಾರೆ.
ಆದರೆ ಆಕೆ ಕೊನೆಗೂ ಸಾಮಾಜಿಕ ಕಾರ್ಯಕರ್ತ ನರೇಶ್ ಪರಸ್ ಕಣ್ಣಿಗೆ ಬಿದ್ದಿದ್ದಾರೆ. ಅವರಿಗೆ ಆಕೆಯ ಜತೆ ಭಾಷೆಯ ಕಾರಣಕ್ಕೆ ಸಂಪರ್ಕ ಬೆಳೆಸಲು ಸಾಧ್ಯವಾಗಿಲ್ಲ. ಹೀಗಾಗಿ ಕೊನೆಗೆ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ. ಮಾತ್ರವಲ್ಲ ಮತ್ತೊಂದು ಸರಕಾರೇತರ ಸಂಸ್ಥೆಯನ್ನೂ ಸಂಪರ್ಕಿಸಿದ್ದಾರೆ.
ಕೊನೆಗೆ ಸ್ಥಳೀಯ ವರ್ತಕರೊಬ್ಬರು ಆಹಾರ, ಚಪ್ಪಲಿ ಜತೆಗೆ ಮೂರುವರೆ ಸಾವಿರ ರೂಪಾಯಿ ನೀಡಿ ಆ ಮಹಿಳೆಯನ್ನು ಕಳುಹಿಸಿದ್ದಾರೆ. ಕೊನೆಗೆ ಪೊಲೀಸರು ನಾಗಲ್ಯಾಂಡ್ ಪೊಲೀಸರಿಗೆ ಮಾಹಿತಿ ನೀಡಿ ಒತ್ತೆಯಿಟ್ಟ ಆಕೆಯ ಮಗನ್ನು ಹುಡುಕಲು ಮುಂದಾಗಿದ್ದಾರೆ.
{promotion-urls}