ಪ್ರೀತಿಸಿ ಕೈಕೊಟ್ಟವನ ಮೇಲೆ ಆ್ಯಸಿಡ್ ಎರಚಿ ಕೊಂದ ಪ್ರಿಯತಮೆ
ನಾಲ್ಕು ವರ್ಷಗಳ ಕಾಲ ಪ್ರೀತಿಸಿ, ಮದುವೆಯಾಗದ್ದಕ್ಕೆ ತಕ್ಕ ಶಾಸ್ತಿ ಮಾಡಿರುವುದಾಗಿ ಹೇಳಿರುವ ಆ್ಯಸಿಡ್ ದಾಳಿ ಮಾಡಿದ ಹುಡುಗಿ.
ಗುಂಟೂರು (ಆಂಧ್ರಪ್ರದೇಶ), ಮೇ 24: ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗದೇ ವಂಚಿಸಿದ ಎಂಬ ಕಾರಣಕ್ಕೆ ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿ ಆತನ ಸಾವಿಗೆ ಕಾರಣಳಾಗಿದ್ದಾಳೆ. ಕೇವಲ ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಆತ ಈಗ ಇಹಲೋಕ ತ್ಯಜಿಸಿದ್ದಾನೆ.
ಮೃತ ಇಲಿಯಾಸ್ ಹಾಗೂ ಆತನ ಪ್ರೇಮಿ ಹಿಮ ಬಿಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತಾಡಿಕೊಂಡ ಮಂಡಲದಲ್ಲಿನ ಪಾಮುಲಪಾಡು ಗ್ರಾಮದವರು.
ಪರಸ್ಪರ ಪ್ರೀತಿಸುತ್ತಿದ್ದ ಈ ಇಬ್ಬರೂ ನಾಲ್ಕು ವರ್ಷಗಳ ಕಾಲ ಪ್ರೇಮದಲ್ಲಿದ್ದರು. ಆದರೆ, ಆತ ಮದುವೆಗೆ ನಿರಾಕರಿಸಿದ ಎಂದು ಆಕೆ ಆರೋಪಿಸಿದ್ದಾಳೆ.
ಮದುವೆಗೆ ನಿರಾಕರಿಸಿದ್ದ ಯುವಕ ಇತ್ತೀಚೆಗೆ ಮನೆಯಲ್ಲಿ ನೋಡಿದ ಯುವತಿಯೊಂದಿಗೆ ಮದುವೆಯಾಗಿದ್ದ. ಇದರಿಂದ ಹಿಮ ಬಿಂದು ಕುದ್ದು ಹೋಗಿದ್ದಳು.
ಪ್ರತೀಕಾರಕ್ಕೆ ಸಿದ್ಧಳಾದ ಆಕೆ, ಹೊಸ ಮದುಮಗನಾಗಿ ಕಂಗೊಳಿಸುತ್ತಿದ್ದ ಇಲಿಯಾಸ್ ನ ಗೆಳೆಯನನ್ನು ಸಂಪರ್ಕಿಸಿದ ಹಿಮಬಿಂದು, ಇಲಿಯಾಸ್ ಬಳಿಯಿರುವ ತನ್ನ ಹಳೆಯ ಫೋಟೋಗಳನ್ನು ಹಿಂಪಡೆಯುವುದಕ್ಕಾಗಿ ಆತನನ್ನು ಭೇಟಿಯಾಗಲು ಇಚ್ಛಿಸಿರುವುದಾಗಿ ಸಂದೇಶ ಕಳುಹಿಸಿದ್ದಳು. ಇದನ್ನು ನಂಬಿದ ಆತ, ಮಾಜಿ ಪ್ರೇಯಸಿಗೆ ಆಕೆಯ ಫೋಟೋಗಳನ್ನು ಹಿಂದಿರುಗಿಸಲು ಆಕೆ ಹೇಳಿದ್ದ ವೆನಿಗಂಡ್ಲ ಹಳ್ಳಿಯ ಹೊರವಲಯಕ್ಕೆ ಬಂದಿದ್ದ.
ಆ ವೇಳೆ ಜಗಳ ತೆಗೆದ ಆಕೆ, ನೋಡನೋಡುತ್ತಿದ್ದಂತೆ ತಾನು ತನ್ನ ಬ್ಯಾಗ್ ನಲ್ಲಿ ಮೊದಲೇ ತಂದಿದ್ದ ಆ್ಯಸಿಡ್ ಬಾಟಲಿಯನ್ನು ಹೊರತೆಗೆದು ಆತನ ಮುಖಕ್ಕೆ ಎರಚಿ ಓಡಿ ಹೋದಳು. ಕೆಳಗೆ ಬಿದ್ದು ಒದ್ದಾಡುತ್ತಿದ್ದ ಆತನ ಕೂಗು ಕೇಳಿದ ಗ್ರಾಮಸ್ಥರು ಓಡಿ ಬಂದು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಮಾರ್ಗ ಮಧ್ಯೆ ಆತ ಕೊನೆಯುಸಿರೆಳೆದಿದ್ದಾನೆ.
ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.