57 ವರ್ಷಗಳಿಂದ 'ನೆಹರೂ ಹೆಂಡತಿ'ಯಾಗಿರುವ ಈಕೆಗೆ ನೆರವು ಸಿಗಬಹುದಾ?
ಕೋಲ್ಕತ್ತಾ, ನವೆಂಬರ್ 2: ಹೆಣ್ಣುಮಗಳೊಬ್ಬಳು ಗಂಡಸಿನ ಕೈಯನ್ನು ಮುಟ್ಟಿದರೆ ಅಥವಾ ಹಿಡಿದರೆ ಭಾರತದಲ್ಲಿ ಏನು ಶಿಕ್ಷೆ ನೀಡಬಹುದು? 2016ನೇ ಇಸವಿಯಲ್ಲಿ, ಅದರಲ್ಲೂ ಪಟ್ಟಣ ಪ್ರದೇಶದಲ್ಲಿ ಏನು ಶಿಕ್ಷೆ ಆಗುತ್ತೆ ಹೇಳಿ. ಈ ಪ್ರಶ್ನೆಯೇ ನಾಲಾಯಕ್ ಅನಿಸ್ತಿದೆಯಾ? ಆದರೆ ಕೆಲವು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಮಡಿವಂತಿಕೆ ಹಾಗೇ ಉಳಿದಿದೆ.
ಆ ಕಾರಣಕ್ಕೆ ಇಂದಿಗೂ ಅಂಥ ಹೆಣ್ಣುಮಗಳನ್ನು ಆ ಹಳ್ಳಿಯಿಂದಲೇ ಹೊರ ಹಾಕಬಹುದು ಅಥವಾ ಕೊಂದೇ ಬಿಡಬಹುದು. ಇನ್ನು 57 ವರ್ಷದ ಹಿಂದೆ ಅಂಥ ಸನ್ನಿವೇಶ ಸೃಷ್ಟಿಯಾಗಿದ್ದರೆ ಅನ್ನೋದನ್ನ ಸುಮ್ಮನೆ ಊಹಿಸಿಕೊಳ್ಳಿ. ಅಂಥ ಮಡಿವಂತಿಕೆಗೆ ಬಲಿಯಾಗಿರುವ ಪಶ್ಚಿಮ ಬಂಗಾಲದ ಬುಡಕಟ್ಟು ಸಮುದಾಯದ ಹೆಣ್ಣುಮಗಳೊಬ್ಬಳು 1959ರಿಂದ ಅಂಥ ಸಂಕಟ ಅನುಭವಿಸುತ್ತಲೇ ಇದ್ದಾರೆ.
ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ, ಪ್ರಗತಿಪರ ಆಲೋಚನೆಗಳಿಗೆ ಹೆಸರಾದವರು. ಇಂದಿನ ಆಕೆ ಸಂಕಟಕ್ಕೆ ತಳಕು ಹಾಕಿಕೊಂಡಿರುವುದು ಅದೇ ನೆಹರೂ. 1959ರಲ್ಲಿ ಅಣೆಕಟ್ಟು ಉದ್ಘಾಟನೆಗಾಗಿ ನೆಹರೂ ಪಶ್ಚಿಮ ಬಂಗಾಲಕ್ಕೆ ಹೋಗಿದ್ದರು. ಅವರ ಕೋರಿಕೆ ಮೇರೆಗೆ ಅಣೆಕಟ್ಟು ಉದ್ಘಾಟಿಸಿದ್ದು ಬುದ್ನಿ ಮಂಜಿಯಾನ್. ಆಗ ಆಕೆಗೆ ಹದಿನೇಳು ವರ್ಷ.
ಅಣೆಕಟ್ಟು ಉದ್ಘಾಟನೆ ಮಾಡಿದ ಮೊದಲಿಗರು
ಅಣೆಕಟ್ಟನ್ನು ಉದ್ಘಾಟನೆ ಮಾಡಲು ಅವಕಾಶ ಸಿಕ್ಕ ಮೊದಲ ಕೂಲಿಯಾಳು ಬಹುಶಃ ಆಕೆಯೇ ಇರಬೇಕು, ಆ ಕಾರ್ಯಕ್ರಮದಲ್ಲಿ ನೆಹರೂ ಆಕೆಗೆ ಹಾರವನ್ನು ನೀಡಿದರು. ಆ ಒಂದು ಘಟನೆ ಬುದ್ನಿಯ ಬದುಕನ್ನೇ ಬದಲಿಸಿತು. ಮಾಧ್ಯಮವೊಂದರ ವರದಿ ಪ್ರಕಾರ, ಅಂದು ರಾತ್ರಿಯೇ ಸಂತಾಲಿ ಸಮಾಜ ಆ ಘಟನೆ ಬಗ್ಗೆ ಚರ್ಚಿಸುವುದಕ್ಕೆ ಸಭೆ ಕರೆಯಿತು.
ಕೆಲಸದಿಂದ ತೆಗೆದರು
ತೀರಾ ವಿಚಿತ್ರ ಸಂಗತಿ ಅಂದರೆ, ನೆಹರೂ ತಮ್ಮ ಹಾರವನ್ನು ಬುದ್ನಿಗೆ ಕೊಟ್ಟಿದ್ದರಿಂದ ಬುಡಕಟ್ಟು ಸಂಪ್ರದಾಯದ ಪ್ರಕಾರ ಅವರೇ ಆಕೆಯ ಪತಿ ಎಂದುಬಿಟ್ಟರು. ಆ ವೇಳೆಯಲ್ಲಿ ದಾಮೋದರ್ ನದಿ ಯೋಜನೆಯಲ್ಲಿ ಬುದ್ನಿ ಕೆಲಸ ಮಾಡುತ್ತಿದ್ದರು. ಆಕೆಯನ್ನು 1962ರಲ್ಲಿ ಅಲ್ಲಿನ ಕೆಲಸದಿಂದ ತೆಗೆಯಲಾಯಿತು.
ಮದುವೆಯೇ ಆಗಲಿಲ್ಲ
ಅಲ್ಲಿಂದ ಜಾರ್ಖಂಡ್ ಗೆ ಹೋದ ಬುದ್ನಿ ಏಳು ವರ್ಷ ಪರದಾಡಿದ್ದಾರೆ. ಆಕೆಗೆ ಮುಂದೆ ಸುಧೀರ್ ದತ್ತ ಎಂಬ ಗೆಳೆಯ ಸಿಕ್ಕರೂ ಸಮಾಜ ಏನನ್ನುತ್ತದೋ ಎಂಬ ಕಾರಣಕ್ಕೆ ಇಬ್ಬರೂ ಮದುವೆ ಕೂಡ ಆಗಲ್ಲ. ಆದರೆ ಒಟ್ಟಿಗೆ ಇರುತ್ತಾರೆ. ಬುದ್ನಿಗೆ ಈಗ ಮೂವರು ಮಕ್ಕಳಿದ್ದಾರೆ.
ರಾಜೀವ ಗಾಂಧಿ ಭೇಟಿ
1985ರಲ್ಲಿ ನೆಹರೂ ಮೊಮ್ಮಗ, ಆಗಿನ ಪ್ರಧಾನಿ ರಾಜೀವ ಗಾಂಧಿಗೆ ಬುದ್ನಿ ಕಥೆ ಗೊತ್ತಾಗುತ್ತದೆ. ಆಕೆ ರಾಜೀವರನ್ನು ಒಡಿಶಾದಲ್ಲಿ ಭೇಟಿ ಕೂಡ ಆಗ್ತಾರೆ. ದಾಮೋದರ್ ನದಿ ಯೋಜನೆ ಕೆಲಸ ವಾಪಸ್ ಆಕೆಗೆ ಕೊಡ್ತಾರೆ. ಈಗ ನಿವೃತ್ತರಾಗಿರುವ ಬುದ್ನಿ ತಮ್ಮ ಅನುಭವವನ್ನು ಪತ್ರಿಕೆಯೊಂದರ ಜತೆ ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿಗೆ ಮನವಿ
ಹಲವು ವರ್ಷಗಳ ನಂತರ ಬುದ್ನಿ ತಮ್ಮ ಹಳ್ಳಿಗೆ ಭೇಟಿ ಕೊಡ್ತಾರೆ. ಈಗಲೂ ಕೆಲವು ಸಂದರ್ಭಗಳಲ್ಲಿ ಹೋಗ್ತಾರೆ. ಆದರೆ ಆಕೆಯನ್ನು ಇಂದಿಗೂ ಅಲ್ಲಿನ ಜನ ಗೌರವದಿಂದ ನೋಡಲ್ಲ. ಇದೀಗ ರಾಹುಲ್ ಗಾಂಧಿಯವರು ಆಕೆಗಾಗಿ ಒಂದು ಮನೆ, ಮಗನಿಗೊಂದು ಕೆಲಸ ದೊರಕಿಸಿಕೊಟ್ಟರೆ ಉಳಿದ ಬದುಕನ್ನು ನೆಮ್ಮದಿಯಾಗಿ ಕಳೆಯಬಹುದು ಎಂಬುದು ಆಕೆಯ ಅಪೇಕ್ಷೆ-ನಿರೀಕ್ಷೆ.