ಮಧ್ಯಪ್ರದೇಶ: ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಪತ್ನಿ, ಭಯದಿಂದ ನದಿಗೆ ಹಾರಿ ಪತಿ ಆತ್ಮಹತ್ಯೆ
ಭೋಪಾಲ್, ಜನವರಿ 20 : ಮನೆಯಲ್ಲಿ ಮಕ್ಕಳು ಹುಟ್ಟಿದರೇ ಸಂತಸ ಪಡುವವರೆ ಜಾಸ್ತಿ. ಅದರಲ್ಲೂ ಹೆಣ್ಣು ಮಕ್ಕಳನ್ನು ಲಕ್ಷ್ಮೀದೇವಿ ಎಂದು ಕರೆದು ಸಂಭ್ರಮಿಸಲಾಗುತ್ತದೆ. ಆದರೆ, ಮಧ್ಯಪ್ರದೇಶದಲ್ಲಿ ಹೆಣ್ಣು ಮಕ್ಕಳು ಹುಟ್ಟಿದ ಕಾರಣಕ್ಕೆ ತಂದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಮಧ್ಯಪ್ರದೇಶದ ಭೋಪಾಲ್ನ ಬಾಲಘಾಟ್ನಲ್ಲಿ ತನ್ನ ಪತ್ನಿ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ಸುದ್ದಿ ಕೇಳಿ ದುಃಖದಿಂದ ವ್ಯಕ್ತಿಯೊಬ್ಬ ತನ್ನ ಜೀವನವನ್ನು ಕೊನೆಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೋಪಾಲ್ನ ವರಸಿವಾಣಿ ಪೊಲೀಸ್ ಠಾಣಾ ವ್ಯಾಪ್ತಿಯ ದಿನಿಪುಣಿ ಗ್ರಾಮದ ವಾಸುದೇವ್ ಪಟ್ಲೆ ಮೃತ ದುರ್ದೈವಿ. ಈಗಾಗಲೇ ವಾಸುದೇವ್ ಪಟ್ಲೆ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದು ಈ ಮಕ್ಕಳು ಸೇರಿ ಹೆಣ್ಣು ಮಕ್ಕಳ ಸಂಖ್ಯೆ ನಾಲ್ಕಕ್ಕೆ ಏರಿದೆ. ಇದೇ ಭಯಕ್ಕೆ ಅವರು ವೈಂಗಾಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ವಾಸುದೇವ್ ಪಟ್ಲೆ ಅವರು ಸಂಜೆ 6:30 ಕ್ಕೆ ಸೇತುವೆಯಿಂದ ವೈಂಗಾಂಗಾ ನದಿಗೆ ಹಾರಿದ್ದರು. ನಂತರ ಅವರ ಮೃತದೇಹ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ. ಅವರ ಪತ್ನಿ ಜಿಲ್ಲಾ ಆಸ್ಪತ್ರೆಯಲ್ಲಿ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ನಂತರ ವಾಸುದೇವ್ ಪಟ್ಲೆ ಕಂಗಾಲಾಗಿದ್ದರು ಎಂದು ಬಾಲಾಘಾಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕಮಲ್ ಸಿಂಗ್ ಗೆಹ್ಲೋಟ್ ಪಿಟಿಐಗೆ ತಿಳಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ಮೃತರ ಪತ್ನಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ನಂತರ ಕೆಲವು ಔಷಧಿಗಳನ್ನು ಖರೀದಿಸಬೇಕು ಎಂದು ಹೇಳಿ ಆಸ್ಪತ್ರೆಯಿಂದ ಹೊರನಡೆದಿದ್ದಾರೆ. ಬಳಿಕ ಸೇತುವೇ ಮೇಲೆ ಬಮದು ನದಿಗೆ ಹಾರಿದ್ದಾರೆ ಎಂದು ಕುಟುಂಬದ ಸ್ನೇಹಿತರು ಹೇಳಿದ್ದಾರೆ.
ನಾಲ್ವರು ಒಡಹುಟ್ಟಿದವರಲ್ಲಿ ಪಟ್ಲೆ ಒಬ್ಬನೇ ಮಗ. 15 ರಿಂದ 20 ಎಕರೆ ಕೃಷಿ ಜಮೀನು ಹೊಂದಿದ್ದು, ಮಾರ್ಬಲ್ ವ್ಯಾಪಾರಿಯಾಗಿದ್ದರು. ಆತನಿಗೆ ಈ ನವಜಾತ ಅವಳಿ ಸೇರಿದಂತೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ ಎಂದು ಮಾಹಿತಿ ದೊರೆತಿದೆ. ಆರ್ಥಿಕವಾಗಿ ಸ್ಪಲ್ಪ ಸಬಲರಾಗಿದ್ದರು ಎಂಬ ಅವರ ಆಸ್ತಿ, ಕೆಲಸದ ವಿವರಗಳು ತಿಳಿಸುತ್ತಿದ್ದು, ಅವರ ಆತ್ಮಹತ್ಯೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777