488 ಸಂಸದರ ಮತಗಳೊಂದಿಗೆ ನಾಯ್ಡು ಮುಂದಿನ ಉಪರಾಷ್ಟ್ರಪತಿ
ನವದಹಲಿ, ಜುಲೈ 20: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಸುಲಭ ಜಯಗಳಿಸಲಿದ್ದಾರೆ. ಆಗಸ್ಟ್ 5 ರಂದು ನಡೆಯಲಿರುವ ಚುನಾವಣೆಯಲ್ಲಿ ನಾಯ್ಡು ವಿರುದ್ಧ ವಿಪಕ್ಷಗಳ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಗಾಂಧಿ ಕಣದಲ್ಲಿದ್ದಾರೆ.
ಒಟ್ಟು 788 ಸದಸ್ಯರಲ್ಲಿ ನಾಯ್ಡು 488 ಸದಸ್ಯರ ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಇತ್ತೀಚೆಗೆ ಬಿಜೆಪಿಯ ವಿನೋದ್ ಖನ್ನಾ ಮತ್ತು ಅನಿಲ್ ಮಾಧವ್ ದವೆ ಅಕಾಲಿಕ ಮರಣಕ್ಕೆ ತುತ್ತಾಗಿದ್ದರಿಂದ ಸದಸ್ಯ ಬಲ 790 ರಿಂದ 788ಕ್ಕೆ ಇಳಿಕೆಯಾಗಿತ್ತು.
ಲೋಕಸಭೆಯ 544 (ವಿನೋದ್ ಖನ್ನಾ ಸ್ಥಾನ ಖಾಲಿ) ಸ್ಥಾನಗಳಲ್ಲಿ ಎನ್ಡಿಎ ಮೈತ್ರಿಕೂಟ 337 ಸದಸ್ಯರನ್ನು ಹೊಂದಿದೆ. ಇನ್ನು ರಾಜ್ಯಸಭೆಯಲ್ಲಿ 244ರಲ್ಲಿ 77 ಸಂಸದರು ಎನ್ಡಿಎಗೆ ಸೇರಿದ್ದಾರೆ.
ಇದಲ್ಲದೆ ಎನ್ಡಿಎ ಹೊರತಾದ ಪಕ್ಷಗಳಾದ ಎಐಎಡಿಎಂಕೆ, ಟಿಆರ್ಎಸ್, ವೈಎಸ್ಆರ್ ಕಾಂಗ್ರೆಸ್ ವೆಂಕಯ್ಯ ನಾಯ್ಡುಗೆ ಬೆಂಬಲ ಸೂಚಿಸಿವೆ. ಹೀಗಾಗಿ ಲೋಕಸಭೆಯಲ್ಲಿ 54 ಹಾಗೂ ರಾಜ್ಯಸಭೆಯಲ್ಲಿ 17 ಹೆಚ್ಚುವರಿ ಮತಗಳು ಎನ್ಡಿಎ ಅಭ್ಯರ್ಥಿಗೆ ಸಿಗಲಿದೆ.
ಹೀಗೆ ಒಟ್ಟಾರೆ ಶೇಕಡಾ 60 ಮತಗಳನ್ನು ಪಡೆಯುವ ಮೂಲಕ ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಲಿದ್ದಾರೆ.