ರಾಜ್ಯಸಭೆ ಅಧಿವೇಶನ: ಪ್ರತಿಭಟನೆಯಿಂದ 1 ವಾರದಲ್ಲಿ ಶೇ 52ರಷ್ಟು ಕಲಾಪದ ಅವಧಿ ವ್ಯರ್ಥ
ನವದೆಹಲಿ, ಡಿಸೆಂಬರ್ 05: ಕಳೆದ ಒಂದು ವಾರ ನಡೆದ ಚಳಿಗಾಲದ ರಾಜ್ಯಸಭೆ ಅಧಿವೇಶನದ ಕಲಾಪದಲ್ಲಿ ಶೇಕಡ 52ರಷ್ಟು ಸಮಯವು ಪ್ರತಿಭಟನೆ ಹಾಗೂ ಬೇರೆ ಅಡ್ಡಿಗಳಿಂದಾಗಿ ವ್ಯರ್ಥವಾಗಿದೆ. ಆದರೆ ಗುರುವಾರ ಹಾಗೂ ಶುಕ್ರವಾರ ಗಮನಾರ್ಹವಾಗಿ ಸದನದಲ್ಲಿ ಚಟುವಟಿಕೆಗಳು ನಡೆದಿದ್ದು, ಅಧಿವೇಶನದ ಕಾರ್ಯಚಟುವಟಿಕೆಗೆ ಸಹಜತೆಗೆ ಮರಳುವ ಭರವಸೆಯನ್ನು ನೀಡಿದೆ.
ಮುಂಗಾರು ಅಧಿವೇಶನದಲ್ಲಿ ಕೊನೆಯ ದಿನದಲ್ಲಿ ಗದ್ದಲ ಉಂಟು ಮಾಡಿದ ಕಾರಣದಿಂದಾಗಿ 12 ಮೇಲ್ಮನೆ ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಈ ವಿಚಾರವನ್ನು ಹಾಗೂ ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷದ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಸತ್ತಿನಲ್ಲಿ ಟಿಆರ್ಎಸ್ ಆಕ್ರೋಶ: ರೈತರ ವಿಚಾರದಲ್ಲಿ ಬಿಜೆಪಿ ಎಡವಿತೇ?
ವಿರೋಧ ಪಕ್ಷದ ನಾಯಕರುಗಳು ಮುಂಗಾರು ಅಧಿವೇಶನದಲ್ಲಿ ಗದ್ದಲ ಉಂಟು ಮಾಡಿದ್ದಾರೆ ಎಂದು ಆರೋಪ ಮಾಡಿ ಈ ಚಳಿಗಾಲ ಅಧಿವೇಶನದಿಂದ ಸಂಸದರನ್ನು ಅಮಾನತು ಮಾಡುವ ಕ್ರಮವು "ಪ್ರಜಾಪ್ರಭುತ್ವ ವಿರೋಧಿ" ಎಂದು ಟೀಕೆ ಮಾಡುತ್ತಿದ್ದಾರೆ. ಈ ನಡುವೆ ಸಭಾಪತಿ ಎಂ ವೆಂಕಯ್ಯ ನಾಯ್ಡು ಈ ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯಲು ನಿರಾಕರಿಸಿದ್ದಾರೆ. ಅಮಾನತುಗೊಂಡ ಸದಸ್ಯರು "ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ" ಎಂದು ಒತ್ತಿ ಹೇಳಿದರು.
ಅಮಾನತುಗೊಂಡಿರುವ ಸಂಸದರು ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿರೋಧ ಪಕ್ಷದ ಸಂಸದರು ಕ್ಷಮೆಯಾಚಿಸಿದರೆ ಅಮಾನತು ರದ್ದುಗೊಳಿಸುವ ಬಗ್ಗೆ ಚಿಂತನೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಅಧಿವೇಶನ ನಡೆದದ್ದು ಎಷ್ಟು ಹೊತ್ತು?
ಕಳೆದ ವಾರದಲ್ಲಿ ಸದನವು ನಿಗದಿತ ಸಮಯದ ಶೇಕಡಾ 47.70 ರಷ್ಟು ಸಮಯ ಮಾತ್ರ ಸರಿಯಾಗಿ ನಡೆದಿದೆ ಎಂದು ಪ್ರಕಟಣೆಯು ಉಲ್ಲೇಖ ಮಾಡಿದೆ. ಸದನವು ಗುರುವಾರ ನಿಗದಿತ ಸಮಯಕ್ಕಿಂತ 33 ನಿಮಿಷಗಳ ಕಾಲ ಹೆಚ್ಚಿಗೆ ನಡೆದ ಕಾರಣದಿಂದಾಗಿ ಈ ವಾರದಲ್ಲಿ ಒಟ್ಟಾರೆಯಾಗಿ ಸದನ ಸರಿಯಾದ ರಿತಿಯಲ್ಲಿ ನಡೆದ ಸಮಯವು ಶೇಕಡಾ 49.70 ಕ್ಕೆ ಏರಿಕೆ ಆಗಿದೆ ಎಂದು ಕೂಡಾ ಪ್ರಕಟಣೆಯು ಹೇಳಿದೆ. ಗುರುವಾರ ಹಾಗೂ ಶುಕ್ರವಾರ ಅಧಿಕವಾಗಿ ಸದನವು ನಡೆದಿದೆ. ಗುರುವಾ ಶೇಕಡ 95 ರಷ್ಟು ಸದನವು ಸರಿಯಾಗಿ ನಡೆದಿದ್ದು, ಶುಕ್ರವಾರ ಶೇಕಡ 100 ಸದನವು ಸರಿಯಾಗಿ ನಡೆದಿದೆ.
ಶುಕ್ರವಾರ ಎರಡೂವರೆ ಗಂಟೆಗಳ ಪೂರ್ಣ ನಿಗದಿತ ಸಮಯದಲ್ಲಿ ಸದನವು ಖಾಸಗಿ ಸದಸ್ಯರ ವ್ಯವಹಾರವನ್ನು ಕೈಗೆತ್ತಿಕೊಂಡಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಕೊನೆಯ ಬಾರಿಗೆ ಫೆಬ್ರವರಿ 7, 2020 ರಂದು ಬಜೆಟ್ ಅಧಿವೇಶನದಲ್ಲಿ ಇಷ್ಟು ಚರ್ಚೆ ನಡೆದಿದೆ ಎಂದು ಅದು ಹೇಳಿದೆ. ಅಧಿವೇಶನದ ಒಂದು ವಾರದಲ್ಲಿ ಎರಡು ಮಸೂದೆಗಳು ಅಂಗೀಕಾರ ಮಾಡಲಾಗಿದೆ. ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಮಸೂದೆ ಹಾಗೂ ಅಣೆಕಟ್ಟು ಸುರಕ್ಷತಾ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ.
ಮುಂಗಾರು ಅಧಿವೇಶನದಲ್ಲಿ 133 ಕೋಟಿ ರೂ. ವ್ಯರ್ಥ
ಪೆಗಾಸಸ್ ಹಗರಣ, ಕೃಷಿ ಕಾಯ್ದೆ ರದ್ಧತಿ ವಿಚಾರ, ಇಂಧನ ಬೆಲೆ ಏರಿಕೆ ಮೊದಲಾದ ವಿಚಾರಗಳಿಂದಾಗಿ ಪ್ರತಿಪಕ್ಷಗಳು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರತಿಭಟನೆ ನಡೆಸುತ್ತಿರುವುದರಿಂದ ಮುಂಗಾರು ಅಧಿವೇಶನದಲ್ಲಿ 89 ಗಂಟೆಗಳ ಸಮಯ ಹಾಗೂ ಒಟ್ಟು ₹ 133 ಕೋಟಿಗೂ ಹೆಚ್ಚು ಹಣ ಪೋಲಾಗಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. ಜುಲೈ 19ರಂದು ಆರಂಭವಾಗಿರುವ ಅಧಿವೇಶನ ಸುಗಮವಾಗಿ ನಡೆದಿದ್ದರೆ ಈವರೆಗೆ 117 ತಾಸು ಕಲಾಪ ನಡೆಯಬೇಕಿತ್ತು. ಆದರೆ, ಕೇವಲ 18 ತಾಸು ಸುಗಮವಾಗಿ ಕಲಾಪ ನಡೆದಿದ್ದು, ಉಳಿದ ಸಮಯ ಗದ್ದಲ, ಪ್ರತಿಭಟನೆ, ಸಭಾತ್ಯಾಗದಲ್ಲೇ ವ್ಯರ್ಥವಾಗಿದೆ ಎಂದು ಆಗಸ್ಟ್ 1 ರಂದು ಕೇಂದ್ರ ಸರ್ಕಾರವು ಹೇಳಿತ್ತು. ಈ ಪೈಕಿ ಸುಮಾರು 89 ಗಂಟೆಗಳ ಕೆಲಸದ ಸಮಯ ಸರಕಾರ ಹಾಗೂ ವಿಪಕ್ಷಗಳ ಗದ್ದಲಗಳಿಂದ ವ್ಯರ್ಥವಾಗಿದೆ. ಇದರರ್ಥ ತೆರಿಗೆದಾರರ ಒಟ್ಟು ರೂಪಾಯಿ 133 ಕೋಟಿಗೂ ಹೆಚ್ಚು ಹಣ ಪೋಲಾಗಿದೆ ಎಂದು ಕೂಡಾ ಹೇಳಿತ್ತು.
Recommended Video
(ಒನ್ಇಂಡಿಯಾ ಸುದ್ದಿ)