ಅವಧಿಗೆ ಮುನ್ನ ತೆಲಂಗಾಣ ವಿಧಾನಸಭೆ ಮತ್ತು ಲೋಕಸಭೆಗೂ ಚುನಾವಣೆ?
ಬೆಂಗಳೂರು, ಜೂನ್ 26 : ರಾಜಸ್ಥಾನ, ಮಧ್ಯ ಪ್ರದೇಶ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಈ ವರ್ಷದ ಕೊನೆಯಲ್ಲಿ ನಡೆಯಲಿದ್ದು, ಅದೇ ಸಮಯದಲ್ಲಿ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ನಡೆಯಬೇಕಿದ್ದ ಲೋಕಸಭೆ ಚುನಾವಣೆಯೂ ನಡೆಯಲಿದೆಯಾ?
ಇಂಥದೊಂದು ಸಂಭಾವ್ಯತೆಗೆ ಸಾಕಷ್ಟು ಸೂಚನೆಗಳು, ಸಂಕೇತಗಳು ಬರುತ್ತಿದ್ದು, ಕಾಲ ಕೂಡಿಬಂದರೆ ಮತ್ತು ಚುನಾವಣಾ ಆಯೋಗ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದರೆ, ಡಿಸೆಂಬರ್ ಹೊತ್ತಿಗೆ ಲೋಕಸಭೆ ಚುನಾವಣೆ ನಡೆದರೂ ಅಚ್ಚರಿಯಿಲ್ಲ.
ಲೋಕಸಭಾ ಚುನಾವಣೆ: ರಾಜ್ಯದ ಸಂಭಾವ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕಲ್ವಕುಂಟ ಚಂದ್ರಶೇಖರ ರಾವ್ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದು, ನಂತರ ಕೆಸಿಆರ್ ಅವರು ನೀಡಿರುವ ಹೇಳಿಕೆಗಳು ಹಲವಾರು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.
ದೇಶದಾದ್ಯಂತ ಏಕಕಾಲಕ್ಕೆ ಚುನಾವಣೆಗೆ ನರೇಂದ್ರ ಮೋದಿ ಒಲವು
ನಾವು ಡಿಸೆಂಬರ್ ಹೊತ್ತಿಗೆ ವಿಧಾನಸಭೆ ಚುನಾವಣೆ ಎದುರಿಸಲು ಸಿದ್ಧ, ನೀವೂ ಸಿದ್ಧರಾಗಿರಿ ಎಂದು ಕೆ ಚಂದ್ರಶೇಖರ ರಾವ್ ಅವರು ವಿರೋಧ ಪಕ್ಷಗಳಿಗೆ ಸೆಡ್ಡು ಹೊಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ವಿರೋಧ ಪಕ್ಷದವರು ಕೂಡ, ಅಷ್ಟೊಂದು ಆತುರವಿದ್ದರೆ ವಿಧಾನಸಭೆಯನ್ನು ವಿಸರ್ಜಿಸಿ ಎಂದು ಎದಿರೇಟು ನೀಡಿದ್ದಾರೆ.
ಕೆಸಿಆರ್ ಮತ್ತು ಮೋದಿ ನಡುವೆ ಮಹತ್ವದ ಸಭೆ
ಹಾಗೆ ನೋಡಿದರೆ, ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಅದೇ ಸಮಯದಲ್ಲಿ ಲೋಕಸಭೆ ಚುನಾವಣೆಯೂ ನಡೆಯಬೇಕಿದೆ. ಆದರೆ, ನರೇಂದ್ರ ಮೋದಿ ಮತ್ತು ಕೆ ಚಂದ್ರಶೇಖರ ರಾವ್ ಅವರ ನಡುವೆ ನಡೆದ ಜೂನ್ 15ರ ಸಭೆಯ ನಂತರ ಈ ಚುನಾವಣೆಯ ಲೆಕ್ಕಾಚಾರಗಳು ಬದಲಾವಣೆಯಾಗುವಂತೆ ಕಂಡುಬರುತ್ತಿದೆ. ಇದ್ದಕ್ಕಿದ್ದಂತೆ ಚುನಾವಣಾ ಚಟುವಟಿಕೆಗಳು ಕೂಡ ಆರಂಭವಾಗಿವೆ.
ಒಂದು ದೇಶ, ಒಂದು ಚುನಾವಣೆ
ಡಿಸೆಂಬರ್ ನಲ್ಲಿ ರಾಜಸ್ತಾನ ಮತ್ತು ಮಧ್ಯ ಪ್ರದೇಶಗಳಿಗೆ ಚುನಾವಣೆ ನಿಗದಿಯಾಗಿದೆ. ಇವುಗಳ ಜೊತೆಗೆ ಛತ್ತೀಸಗಢ, ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೂ ವಿಧಾನಸಭೆ ಚುನಾವಣೆ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೆ, ಒಂದು ದೇಶ, ಒಂದು ಚುನಾವಣೆ ಎಂಬ ಸ್ಲೋಗನ್ ಅನ್ನು ಮೋದಿಯವರು ಜಪಿಸುತ್ತಲೇ ಇದ್ದಾರೆ. ಇದು ನಿಜವಾದರೆ, ಈ ರಾಜ್ಯಗಳ ಜೊತೆ ಲೋಕಸಭೆ ಚುನಾವಣೆ ನಡೆದರೂ ಅಚ್ಚರಿಯಿಲ್ಲ.
ಅಚ್ಚರಿ ತಂದ ಕೆಸಿಆರ್ ಅವರ ನಡೆಗಳು
ಎಲ್ಲಕ್ಕಿಂತ ಹೆಚ್ಚಾಗಿ ಅಚ್ಚರಿ ತಂದಿದ್ದು ಕೆಸಿಆರ್ ಅವರ ನಡೆಗಳು. ಕೆಲ ದಿನಗಳ ಹಿಂದೆ ಕೇಂದ್ರದ ವಿರುದ್ಧ ಹರಿಹಾಯುತ್ತಿದ್ದ ಅವರು, ಸಂಯುಕ್ತ ರಂಗದೊಡನೆ ಗುರುತಿಸಿಕೊಂಡಿದ್ದರು. ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಿದಾಗ, ಎಲ್ಲ ವಿರೋಧ ಪಕ್ಷಗಳ ನಾಯಕರುಗಳ ಜೊತೆ ಕೆಸಿಆರ್ ಕೂಡ ಕೈ ಎತ್ತಿದ್ದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಮಟ್ಟ ಹಾಕೋಣ ಎಂದು ಕೆಸಿಆರ್ ಅಬ್ಬರಿಸಿದ್ದರು.
ಆಂಧ್ರ, ತೆಲಂಗಾಣ, ಜೆಡಿಎಸ್ ಶಾಸಕರನ್ನು ನಮಗೆ ಒಪ್ಪಿಸಿ, ಚಿಂತೆ ಬಿಡಿ: ಕೆಸಿಆರ್, ನಾಯ್ಡು
ಸಂಯುಕ್ತ ರಂಗಕ್ಕೆ ಕೆಸಿಆರ್ ಠೇಂಗಾ
ಬಿಜೆಪಿಯನ್ನು ಮಟ್ಟಹಾಕುವುದಿರಲಿ, ಇದೀಗ ತೆಲಂಗಾಣ ರಾಷ್ಟ್ರ ಸಮಿತಿಯೇ ಬಿಜೆಪಿ ಜೊತೆ ಕೈಜೋಡಿಸುವ ಲಕ್ಷಣಗಳು ಕಂಡುಬರುತ್ತಿವೆ. ಮುಂದಿನ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಭಾರತೀಯ ಜನತಾ ಪಕ್ಷಗಳೆರಡು ಜಂಟಿಯಾಗಿ ತೆಲಂಗಾಣದಲ್ಲಿ ಸ್ಪರ್ಧಿಸಿದರೂ ಅಚ್ಚರಿಯಿಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸಂಯುಕ್ತ ರಂಗದ ಅಂಗ ಪಕ್ಷಗಳಿಗೆ ಬಿದ್ದ ಭಾರೀ ಹೊಡೆತ.
ತೆಲಂಗಾಣದಲ್ಲಿ ಕೆಸಿಆರ್ ಗೆ ಎದುರಾಳಿಯೇ ಇಲ್ಲ
119 ಸ್ಥಾನಗಳಿರುವ ತೆಲಂಗಾಣ ವಿಧಾನಸಭೆಯಲ್ಲಿ ಕನಿಷ್ಠ 100 ಸೀಟುಗಳನ್ನು ಗೆಲ್ಲುವ ವಿಶ್ವಾಸವನ್ನು ಕೆ ಚಂದ್ರಶೇಖರ ರಾವ್ ಅವರು ವ್ಯಕ್ತಪಡಿಸಿದ್ದಾರೆ. 2014ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಅಭೂತಪೂರ್ವ ಯಶಸ್ಸು ಕಂಡು, 90 ಸೀಟುಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದ್ದು. ಕಾಂಗ್ರೆಸ್ ಕೇವಲ 13 ಸೀಟುಗಳನ್ನು ಮಾತ್ರ ತನ್ನ ವಶ ಮಾಡಿಕೊಂಡು, ಸಮಾಧಾನಪಟ್ಟುಕೊಂಡಿತ್ತು. ಬಿಜೆಪಿ 5ರಲ್ಲಿ ಗೆದ್ದಿದ್ದರೆ, ಎಐಎಂಐಎಂ 7 ಮತ್ತು ಟಿಡಿಪಿ 3 ಮತ್ತು ಸಿಪಿಐ(ಎಂ) 1 ಸ್ಥಾನ ಗೆದ್ದಿದ್ದವು. ತೆಲಂಗಾಣದಲ್ಲಿ ಸದ್ಯಕ್ಕೆ ಟಿಆರ್ಎಸ್ಗೆ ಪ್ರತಿಸ್ಪರ್ಧಿಯೇ ಇಲ್ಲ.
ಕರ್ನಾಟಕಕ್ಕೂ ಮತ್ತೊಂದು ಚುನಾವಣೆ?
ರಾಜಸ್ತಾನ, ಮಧ್ಯ ಪ್ರದೇಶ, ಛತ್ತೀಸಗಢ, ತೆಲಂಗಾಣ, ಮಧ್ಯ ಪ್ರದೇಶಗಳ ಜೊತೆಗೆ ಜಮ್ಮು ಮತ್ತು ಕಾಶ್ಮೀರಕ್ಕೂ ಲೋಕಸಭೆ ಚುನಾವಣೆಯ ಜೊತೆಗೇ ಚುನಾವಣೆ ನಡೆದರೂ ಅಚ್ಚರಿಯಿಲ್ಲ. ಈಗಾಗಲೆ, ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಹೇರಲಾಗಿದೆ. ಬೆಂಬಲವನ್ನು ಬಿಜೆಪಿ ಹಿಂಪಡೆದಿದ್ದರಿಂದ ಅಲ್ಲಿ ಪಿಡಿಪಿ ಸರಕಾರ ಬಿದ್ದುಹೋಗಿದೆ. ಈ ಎಲ್ಲ ರಾಜ್ಯಗಳ ಜೊತೆ ಕರ್ನಾಟಕಕ್ಕೂ ಮತ್ತೊಂದು ಚುನಾವಣೆ ನಡೆಯಲಿದೆಯಾ ಎಂಬ ಸಂದೇಹವೂ ಕಾಡಲು ಆರಂಭವಾಗಿದೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ.