ಚಳಿಗಾಲದ ಅಧಿವೇಶನ ಬೇಸಿಗೆಯಲ್ಲಾ : ಮೋದಿಗೆ ರೈ ಪ್ರಶ್ನೆ
ಬೆಂಗಳೂರು, ನವೆಂಬರ್ 25 : ಚಳಿಗಾಲ ಇನ್ನೂ ಶುರು ಆಗಿಲ್ಲವೆ? ಅಥವಾ ನೀವು ಬೇರೆಲ್ಲಾದರೂ ಬಿಜಿಯಾಗಿದ್ದೀರಾ? ಅಥವಾ ಚುನಾವಣೆಗೂ ಮೊದಲು ಪ್ರಶ್ನೆಗಳಿಗೆ ಉತ್ತರ ಕೊಡಲಾಗದಷ್ಟೂ ಬಿಸಿಯಾಗುತ್ತದೆಂದು ನಿಮ್ಮ ಅನಿಸಿಕೆಯೆ? ಜಸ್ಟ್ ಆಸ್ಕಿಂಗ್!
ಚಳಿಗಾಲದ ಅಧಿವೇಶನವನ್ನು ಕರೆಯಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ವಿಳಂಬ ಮಾಡಿರುವುದಕ್ಕೆ, ಎಣಿಕೆಗೆ ಸುಲಭವಾಗಿ ನಿಲುಕಲಾಗದಷ್ಟು ಪ್ರಶಸ್ತಿಗೆ ಭಾಜನರಾಗಿರುವ ಭಾರತದ ಖ್ಯಾತ ನಟ ಪ್ರಕಾಶ್ ರೈ ಅಲಿಯಾಸ್ ಪ್ರಕಾಶ್ ರಾಜ್ ಅವರು ಕೇಳಿರುವ ಕೆಣಕುವಂಥ ಪ್ರಶ್ನೆಗಳಿವು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ನಂತರ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿಯನ್ನು ನಡೆಸುವುದನ್ನು ರೂಢಿಗತ ಮಾಡಿಕೊಂಡಿರುವ ಪ್ರಕಾಶ್ ರೈ ಅವರು, ನಟನೆಗೆ ಹೊರತಾಗಿ ಭಾರತದಾದ್ಯಂತ ಸುದ್ದಿಗೆ ಗ್ರಾಸವಾಗಿದ್ದಾರೆ. ಹೊಗಳಿಕೆ ಮತ್ತು ತೆಗಳಿಕೆಗೆ ಏಕಕಾಲಕ್ಕೆ ಪಾತ್ರರಾಗಿದ್ದಾರೆ.
ಚಳಿಗಾಲದ ಅಧಿವೇಶನ ಮುಂದಿನ ಬೇಸಿಗೆಯಲ್ಲಾ
ಚಳಿಗಾಲದ ಅಧಿವೇಶನವನ್ನು ಡಿಸೆಂಬರ್ 15ರಿಂದ ಜನವರಿ 5ರವರೆಗೆ ಆಯೋಜಿಸಿರುವುದಾಗಿ ಕೇಂದ್ರ ಸರಕಾರ ಘೋಷಿಸಿದ ಮರುದಿನವೇ, 'ಚಳಿಗಾಲದ ಅಧಿವೇಶನ ಯಾವಾಗ ಆರಂಭವಾಗುತ್ತದೆ... ಮುಂದಿನ ಬೇಸಿಗೆಯಲ್ಲಾ' ಎಂದು ಪಕ್ಕಾ 'ಕಾಂಗ್ರೆಸ್' ರಾಜಕಾರಣಿಯಂತೆ ಟ್ವೀಟಿಸಿದ್ದಾರೆ.
ರಾಜಕಾರಣಿಯನ್ನೂ ಮೀರಿಸುವಂತೆ ಮಾತಿನ ವರಸೆ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನನಗಿಂತ ಉತ್ತಮ ನಟ ಎಂದು ವ್ಯಂಗ್ಯವಾಡಿದ್ದ ಪ್ರಕಾಶ್ ರೈ ಅವರು, ತಾವೇ ಸ್ವತಃ ರಾಜಕಾರಣಿಯಂತೆ ಅಥವಾ ನಿಜವಾದ ರಾಜಕಾರಣಿಯನ್ನೂ ಮೀರಿಸುವಂತೆ ಮಾತಿನ ವರಸೆ ತೋರುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಅನಾಯಾಸವಾಗಿ ಸಿಗುತ್ತಿರುವ 'ಅಟೆನ್ಷನ್'
'ಕಾಂಚೀವರಂ' ತಮಿಳು ಚಿತ್ರಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಪ್ರಕಾಶ್ ರೈ ಅವರು, ಸೋಷಿಯಲ್ ಮೀಡಿಯಾದಲ್ಲಿ ಅಚಾನಕ್ಕಾಗಿ ಮತ್ತು ಅನಾಯಾಸವಾಗಿ ಸಿಗುತ್ತಿರುವ 'ಅಟೆನ್ಷನ್' ಅನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಮತ್ತು ಆನಂದಿಸುತ್ತಿದ್ದಾರೆ ಕೂಡ.
ಮನದಿಂದ ಟ್ರೋಲ್ ಅಳಿಸಲು ಸಾಧ್ಯವೆ?
ಟ್ರೋಲ್ ಆಗುತ್ತಿದ್ದಂತೆ ಸಿಡಿಮಿಡಿಗೊಳ್ಳುತ್ತಿರುವ ಅವರು, ಟ್ರೋಲ್ ಮಾಡುವವರ ವಿರುದ್ಧವೂ ಕೆಂಡಕಾರಲು ಆರಂಭಿಸಿದ್ದಾರೆ. ನನ್ನ ವಿರುದ್ಧ ಮಾಡಿರುವ ಟ್ವೀಟ್ (ಟ್ರೋಲ್) ಗಳನ್ನು ನೀವು ಅಳಿಸಿ ಹಾಕಬಹುದು. ಆದರೆ, ಜನರ ಮನಸ್ಸಿನಿಂದ ಅವನ್ನು ಅಳಿಸಿ ಹಾಕಲು ಸಾಧ್ಯವೆ ಎಂದು ಟ್ರೋಲಿಗರ ಕಾಲೆಳೆದಿದ್ದಾರೆ.
ಪತ್ರಿಕೆಗಳನ್ನು ನೀವು ಓದುವುದಿಲ್ಲವೆ?
ಇನ್ನು ಟ್ವಿಟ್ಟಿಗರು ಬಿಡ್ತಾರಾ? ಡಿಯರ್ ಪ್ರಕಾಶ್ ರಾಜ್ ಅವರೆ, ಪತ್ರಿಕೆಗಳನ್ನು ನೀವು ಓದುವುದಿಲ್ಲವೆ? ಚಳಿಗಾಲದ ಅಧಿವೇಶನದ ದಿನವನ್ನು ನಿನ್ನೆಯೇ ಕೇಂದ್ರ ಘೋಷಿಸಿದೆ. ಟ್ವಿಟ್ಟರಿನಲ್ಲಿ ಏನನ್ನಾದರೂ ಬರೆಯುವ ಮುನ್ನ, ನಿಮಗೆ ಗೊತ್ತಿರುವ ಮಾಹಿತಿ ಸರಿಯಾಗಿದೆಯಾ ಸುಳ್ಳಾಗಿದೆಯಾ ಎಂದಾದರೂ ತಿಳಿದುಕೊಳ್ಳಿ ಎಂದು ರೈ ಅವರನ್ನು ಬಟಾಬಯಲು ಮಾಡಿದ್ದಾರೆ.
ಖಾಲಿ ಕೊಡ ಸದ್ದು ಮಾಡುತ್ತದೆ
ಖಾಲಿ ಕೊಡ ಸಿಕ್ಕಾಪಟ್ಟೆ ಸದ್ದು ಮಾಡುತ್ತದೆ. ಇಂಥವರಿಗೆ ಹೆಚ್ಚಿನ ಮಹತ್ವ ನೀಡಬಾರದು ಎಂದು ಒಬ್ಬರು ಟ್ವೀಟಿಸಿದ್ದರೆ, ಡಿಸೆಂಬರ್ 15ರಂದು ಸಿಕ್ಕಾಪಟ್ಟೆ ಚಳಿಯಿರಲಿದೆ ಮತ್ತು ಡಿಸೆಂಬರ್ 18ರಂದು ಮಧ್ಯಾಹ್ನ ಎಷ್ಟು ಚಳಿಯಿರುತ್ತದೆಂದರೆ ಇಡೀ ಕಾಂಗ್ರೆಸ್ ಪಕ್ಷ ಸತ್ತ ಟರ್ಕಿಯಂತೆ ಮರಗಟ್ಟಿ ಹೋಗಿರುತ್ತದೆ. ಬೆಟ್ ಕಟ್ತೀರಾ ಎಂದು ಮತ್ತೊಬ್ಬರು ಚಾಟಿ ಬೀಸಿದ್ದಾರೆ.