ಹಾನಿ ಪರಿಶೀಲನೆ ಬಳಿಕ ಕೇರಳಕ್ಕೆ ಹೆಚ್ಚುವರಿ ಪರಿಹಾರ: ಕೇಂದ್ರದ ಸ್ಪಷ್ಟನೆ
ನವದೆಹಲಿ, ಆಗಸ್ಟ್ 23: ಪ್ರವಾಹ ಪೀಡಿತ ಕೇರಳಕ್ಕೆ ಬಿಡುಗಡೆ ಮಾಡಿರುವ 600 ಕೋಟಿ ರೂ. ತಕ್ಷಣದ ನೆರವಿಗಾಗಿ ಹಂಚಿಕೆ ಮಾಡಿರುವ ನೆರವು ಮಾತ್ರ. ರಾಜ್ಯದಲ್ಲಿ ಉಂಟಾದ ಒಟ್ಟಾರೆ ಹಾನಿಯನ್ನು ಪರಿಶೀಲಿಸಿ ಇನ್ನಷ್ಟು ನೆರವನ್ನು ಬಿಡುಗಡೆ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಕ್ಷಣಾ ಕಾರ್ಯಕ್ಕಾಗಿ ರಜೆ ರದ್ದು ಮಾಡಿ ಮಾನವೀಯತೆ ಮೆರೆದ ಸೈನಿಕ
ರಾಜ್ಯ ವಿಪತ್ತು ಪರಿಹಾರ ನಿಧಿಯ (ಎಸ್ಡಿಆರ್ಎಫ್) 562.45 ಕೋಟಿ ರೂ. ಜತೆಗೆ 600 ಕೋಟಿ ರೂ. ಮುಂಗಡ ನೆರವು ನೀಡಲಾಗಿದೆ. ಕೇರಳದಂತಹ ಸಾಮಾನ್ಯ ವರ್ಗದ ರಾಜ್ಯಗಳ ಎಸ್ಡಿಆರ್ಎಫ್ ನಿಧಿಗೆ ಕೇಂದ್ರವು 75%ರಷ್ಟು ಕೊಡುಗೆ ನೀಡುತ್ತದೆ.
ಮಳೆಯ ಎರಡನೆಯ ಅವಧಿಯಲ್ಲಿ ಉಂಟಾದ ಪ್ರವಾಹದಿಂದ ಸಂಭವಿಸಿದ ಹಾನಿಗಳ ವಿವರವನ್ನು ಪಿಣರಾಯಿ ವಿಜಯನ್ ಸರ್ಕಾರದಿಂದ ಪಡೆದ ಕೂಡಲೇ ಹೆಚ್ಚುವರಿ ಹಣವನ್ನು ಎನ್ಡಿಆರ್ಎಫ್ ಕಡೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಅದು ಸ್ಪಷ್ಟೀಕರಣ ನೀಡಿದೆ.
ಕೇರಳ ಪ್ರವಾಹಕ್ಕೆ ಕಣ್ಣೀರಾಗಿ, ಮಾನವೀಯತೆ ಮೆರೆದ ಮುದ್ದು ಪುಟಾಣಿ
ಕೇರಳ ಪ್ರವಾಹ ಪರಿಹಾರ ಬಿಡುಗಡೆಗೆ ಕೋರಿ ಜುಲೈ 21ರಂದು ಮೊದಲ ಮನವಿ ರವಾನಿಸಿದಾಗ ಕೇಂದ್ರದ ಸಚಿವಾಲಯಗಳ ತಂಡವು ರಾಜ್ಯಕ್ಕೆ ಆಗಸ್ಟ್ 7-12ರ ಅವಧಿಯಲ್ಲಿ ಭೇಟಿ ನೀಡಿ ಹಾನಿಯ ಪ್ರಮಾಣವನ್ನು ಅಂದಾಜಿಸಿತ್ತು.
ಆದರೆ, ಎರಡನೆಯ ಅವಧಿಯಲ್ಲಿ ಸುರಿದ ಮಳೆ ಭಾರಿ ಪ್ರಮಾಣದ ದುರಂತಕ್ಕೆ ಕಾರಣವಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಪೂರ್ಣಗೊಂಡ ಬಳಿಕ ಉಂಟಾದ ಹಾನಿಯ ಕುರಿತು ಹೆಚ್ಚುವರಿ ಮನವಿ ಸಲ್ಲಿಸುವುದಾಗಿ ಕೇರಳ ಸರ್ಕಾರ ತಿಳಿಸಿದೆ.
ಕೇರಳ ಪ್ರವಾಹ: ಯುಎಇ ನೆರವು ಕೇಂದ್ರ ತಿರಸ್ಕರಿಸಿದ್ದೇಕೆ ಗೊತ್ತೇ?
ಕೇರಳ ಸರ್ಕಾರದಿಂದ ಎರಡನೆಯ ಮನವಿ ಬಂದ ಬಳಿಕ ಹಾನಿಯ ಪ್ರಮಾಣವನ್ನು ತಿಳಿದುಕೊಳ್ಳಲು ಕೇಂದ್ರದ ತಂಡವನ್ನು ಕಳುಹಿಸಲಾಗುವುದು ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.