ಲಾಲೂ ಶಿಕ್ಷೆ ವಿರುದ್ಧ ಹೈಕೋರ್ಟ್ ಗೆ ಮೇಲ್ಮನವಿ: ತೇಜಸ್ವಿ ಯಾದವ್
ರಾಂಚಿ, ಡಿಸೆಂಬರ್ 24: ಮೇವು ಹಗರಣದ ಎರಡನೇ ಪ್ರಕರಣದಲ್ಲಿ ಲಾಲೂ ಪ್ರಸಾದ್ ಯಾದವ್ ಶಿಕ್ಷೆಗೆ ಗುರಿಯಾಗಿರುವುದನ್ನು ತಮ್ಮ ಕುಟುಂಬದ ಮೇಲೆ ನಡೆದ ಸಂಚು ಎಂದು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ. ವಿಶೇಷ ಸಿಬಿಐ ನ್ಯಾಯಾಲಯದ ಆದೇಶದ ವಿರುದ್ಧ ಜಾರ್ಖಂಡ್ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದಿದ್ದಾರೆ.
ಲಾಲೂನನ್ನು ಜೈಲಿಗಟ್ಟಿದ ದಿಟ್ಟ ಅಧಿಕಾರಿ ಅಮಿತ್ ಖರೆ!
ತೀರ್ಪಿನ ಬಗ್ಗೆ ಆರ್.ಜೆ.ಡಿ ಆಂತಂಕಗೊಂಡಿಲ್ಲ, ಈ ರೀತಿಯ ಸಂಚಿನ ವಿರುದ್ಧ ಹೋರಾಡಲಾಗುವುದು ಎಂದಿದ್ದಾರೆ.
"ಇದೊಂದು ಲಾಲೂಜೀ ಮತ್ತು ಅವರ ಕುಟುಂಬದ ಮೇಲಿನ ಸಂಚು. ನಾವು ಹೈಕೋರ್ಟ್ ಗೆ ಈ ಸಂಬಂಧ ಮೇಲ್ಮನವಿ ಸಲ್ಲಿಸಲಿದ್ದೇವೆ. ಅಲ್ಲಿ ನಮಗೆ ನ್ಯಾಯ ಸಿಗುವ ಭರವಸೆ ಇದೆ," ಎಂದು ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಆರ್.ಜೆ.ಡಿ ದುರ್ಬಲ ಪಕ್ಷವಲ್ಲ. ಲಾಲು ಪ್ರಸಾದ್ ಯಾದವ್ ದೋಷಿಯಾಗಿರುವುದರಿಂದ ಪಕ್ಷ ದುರ್ಬಲವಾಗುವುದಿಲ್ಲ. ಎಲ್ಲಾ ಆರ್.ಜೆ.ಡಿ ಕಾರ್ಯಕರ್ತರೂ ನಾಯಕರಿದ್ದಂತೆ. ಲಾಲೂ ಪ್ರಸಾದ್ ಯಾದವ್ ನ್ಯಾಯಾಂಗ ಬಂಧನದಲ್ಲಿ ಇದ್ದಾಗಲೂ ನಾವು ಪಕ್ಷದ ವ್ಯವಹಾರಗಳನ್ನು ನಡೆಸುತ್ತೇವೆ," ಎಂದಿದ್ದಾರೆ.
ಇನ್ನು ಜಾರ್ಖಂಡ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೀಪಕ್ ಪ್ರಕಾಶ್ ತೇಜಸ್ವಿ ಯಾದವ್ ವಾದವನ್ನು ತಳ್ಳಿ ಹಾಕಿದ್ದಾರೆ.
ಇದು ಕಾಂಗ್ರೆಸ್ ನ ಸಂಚು ಎಂಬುದನ್ನು ಲಾಲೂ ಪ್ರಸಾದ್ ಯಾದವ್ ಅರ್ಥ ಮಾಡಿಕೊಳ್ಳಬೇಕು. ಇಡೀ ಮೇವು ಹಗರಣ ಬೆಳಕಿಗೆ ಬಂದಿದ್ದು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮತ್ತು ಪ್ರಕರಣದ ತನಿಖೆ ಮತ್ತು ವಿಚಾರಣೆ ನಡೆದಿದ್ದೂ ಕಾಂಗ್ರೆಸ್ ಅವಧಿಯಲ್ಲಿ ಎಂದು ಹೇಳಿದ್ದಾರೆ.