ಗುಜರಾತಿನಲ್ಲಿ ಜಾದೂಗಾರರು ಮಾಡಲಿದ್ದಾರಾ ಮೋಡಿ!
ಅಹ್ಮದಾಬಾದ್, ನವೆಂಬರ್ 22 : ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಇನ್ನೂ ಪ್ರಚಾರಕ್ಕಿಳಿಯದ ನರೇಂದ್ರ ಮೋದಿಯವರು ಏನು ಮಾಡಲಿದ್ದಾರೋ ಇನ್ನೂ ಖಚಿತವಾಗಿಲ್ಲ, ಆದರೆ, ಜಾದೂಗಾರರು ಮಾತ್ರ ಮತದಾರರ ಮೇಲೆ ಇಂದ್ರಜಾಲ ಬೀಸಲು ರೆಡಿಯಾಗಿದ್ದಾರೆ.
ವಿನೂತನ ವಿಧಾನಗಳ ಮೂಲಕ ಮತದಾರರನ್ನು ಸೆಳೆಯುವುದು ಭಾರತೀಯ ಜನತಾ ಪಕ್ಷದ ತಂತ್ರಗಾರಿಕೆ. ಇದಕ್ಕಾಗಿ ಮಾಂತ್ರಿಕರ ಸೇನೆ ಸಿದ್ಧವಾಗಿದೆ. ಇಂಥ ತಂತ್ರಗಾರಿಕೆ ಫಲ ಕೊಡುತ್ತಾ ಅಥವಾ ಬಿಜೆಪಿಗೆ ತಿರುಗುಬಾಣವಾಗುತ್ತಾ? ಡಿಸೆಂಬರ್ 18ರಂದು, ಸೋಮವಾರ ಉತ್ತರ ಸಿಗಲಿದೆ.
ಗುಜರಾತ್ : 28 ಅಭ್ಯರ್ಥಿಗಳ 3ನೇ ಪಟ್ಟಿ ಪ್ರಕಟಿಸಿದ ಬಿಜೆಪಿ
ಬುಧವಾರದಿಂದ ಜಾದೂಗಾರರ ಒಂದು ತಂಡ ಎಲ್ಲ 182 ಕ್ಷೇತ್ರಗಳನ್ನು ಸುತ್ತಲಿದ್ದು, ಮತದಾರರನ್ನು ಉಚಿತವಾಗಿ ರಂಜಿಸಲಿದ್ದಾರೆ. ಜೊತೆಗೆ, ಭಾರತೀಯ ಜನತಾ ಪಕ್ಷದ 'ವಿಕಾಸ'ದ ಸಂದೇಶವನ್ನು ಮತದಾರರಿಗೆ ಮನದಟ್ಟು ಮಾಡಿಕೊಡಲು ಶ್ರಮಿಸಲಿದ್ದಾರೆ.
ಇದಕ್ಕೂ ಮೊದಲು ಬೀದಿ ನಾಟಕ, ಶಾಸ್ತ್ರೀಯ ನೃತ್ಯ, 3ಡಿ ತಂತ್ರಜ್ಞಾನಗಳ ಮೂಲಕ ಮತದಾರರನ್ನು ಸೆಳೆಯಲು ಬಿಜೆಪಿ ಪ್ರಯತ್ನ ನಡೆಸಿದೆ. ಪಾಟೀದಾರ್ ಜನಾಂಗದ ನಾಯಕ ಹಾರ್ದಿಕ್ ಪಟೇಲ್ ಸ್ನೇಹ ಸಂಪಾದಿಸಿ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಸೋಲಿಸಲು ಪಣ ತೊಟ್ಟಿರುವ ಹಿನ್ನೆಲೆಯಲ್ಲಿ ಬಿಜೆಪಿ ಇಂಥ ತಂತ್ರಗಾರಿಕೆಯನ್ನು ರೂಪಿಸಲೇಬೇಕಿದೆ.
ಬಿಜೆಪಿ-ಕಾಂಗ್ರೆಸ್ ಒಂದೇ; ಎಂದೂ ಟಿಕೆಟ್ ಕೇಳಿಲ್ಲ : ಹಾರ್ದಿಕ್ ಆಕ್ರೋಶ
ಮತದಾರರು ಬಿಜೆಪಿಗೆ ಮತ ಹಾಕುವಂತೆ ಮಾಡಲು ಮತ್ತು ಅವರನ್ನು ರಂಜಿಸಲು ಮಾಂತ್ರಿಕರಿಗಾಗಿ ಈಗಾಗಲೆ ಸೂಕ್ತವಾದಂಥ ಸಂಭಾಷಣೆಗಳನ್ನು ರಚಿಸಲಾಗಿದೆ. ಪಕ್ಷದ ಬೆಳವಣಿಗೆ ಮಂತ್ರ ಮತ್ತು ಭರವಸೆಗಳನ್ನು ಮನದಟ್ಟು ಮಾಡಲು ಮಾಂತ್ರಿಕತೆಯ ತಂತ್ರ ಕೆಲಸ ಮಾಡಲಿದೆ ಎಂದು ಬಿಜೆಪಿ ಬಲವಾಗಿ ನಂಬಿದೆ.
ಮಾಂತ್ರಿಕರು ಬುಧವಾರದಿಂದಲೇ ಗುಜರಾತಿ ಹಳ್ಳಿಹಳ್ಳಿಗಳನ್ನು ಸುತ್ತಲಿದ್ದಾರೆ. ಒಳಕಲಹಗಳು, ಕೆಲ ಜಾತಿವಾದಿ ಪಕ್ಷಗಳು ಬೆಂಬಲಿಸದೆ ಇರುವುದು, ಕೆಲ ನಾಯಕರು ಪಕ್ಷಾಂತರ ಮಾಡಿರುವುದರಿಂದ ಜರ್ಜರಿತವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಜಾದೂಗಾರಿಕೆಯಿಂದಾಗಿ ಬಿಜೆಪಿಯನ್ನು ಟೀಕಿಸಲು ಮತ್ತೊಂದು ಮಾತಿನ ಅಸ್ತ್ರ ಸಿಕ್ಕಂತಾಗಿದೆ.
ಗುಜರಾತ್ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ, ಪಕ್ಷ ತೊರೆದ ತಂದೆ-ಮಗ
ರಾಹುಲ್ ಗಾಂಧಿಯವರು ಗುಜರಾತಿನ ಊರೂರನ್ನು ಸುತ್ತುತ್ತಿರುವುದರಿಂದ ಬಿಜೆಪಿ ಬೆದರಿದೆ. ಅಸಲಿಗೆ, ನರೇಂದ್ರ ಮೋದಿಯವರ ಬದಲಾಗಿ ಕೇಂದ್ರದಲ್ಲಿ ಡಾ. ಮನಮೋಹನ ಸಿಂಗ್ ಅವರ ಸರಕಾರವಿದ್ದಾಗ ಗುಜರಾತನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಬಿಜೆಪಿಗೆ ಗೊತ್ತಿರುವುದು ರಾಹುಲ್ ಇಮೇಜಿಗೆ ಮಸಿ ಬಳಿಯುವುದು ಮಾತ್ರ ಎಂದು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭರತ್ ಸಿನ್ಹ್ ಸೋಳಂಕಿ ಅವರು ಟೀಕಿಸಿದ್ದಾರೆ.
ಬಿಜೆಪಿ ಪಕ್ಷವೇ ಜಾದೂಗಾರರ ಪಕ್ಷ. ಅವರು 50 ಲಕ್ಷ ಬಡವರಿಗೆ ಮನೆ ಕಟ್ಟಿಸಿ ಕೊಡುತ್ತೇನೆಂದು ವಾಗ್ದಾನ ನೀಡಿದ್ದರು. ಅವರು ಕೇವಲ 2 ಲಕ್ಷ ಜನರಿಗೆ ಮಾತ್ರ ವಸತಿ ಕಲ್ಪಿಸುವಲ್ಲಿ ಸಫಲರಾಗಿದ್ದಾರೆ. ಉಳಿದೆಲ್ಲವನ್ನು ಜಾದೂಗಾರರಂತೆ ಗುಳುಂ ಮಾಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
22 ವರ್ಷಗಳ ಬಿಜೆಪಿಯ ಆಡಳಿತದ ನಂತರವೂ, 40 ಕಿ.ಮೀ. ಉದ್ದದ ನರ್ಮದಾ ಉಪನಾಲೆಯ ಕಾಮಗಾರಿ ಇನ್ನೂ ಮುಗಿದಿಲ್ಲ. ಇದು ಗುಜರಾತ್ ರಾಜ್ಯದಲ್ಲಾದರೆ, ಬಿಜೆಪಿ ಆಡಳಿತದಲ್ಲಿ ಕಾಶ್ಮೀರದಲ್ಲಿ ಪರಿಸ್ಥಿತಿ ಉಲ್ಬಣಗೊಂಡಿದೆ. ನೂರಾರು ಜವಾನರು ಬಿಜೆಪಿಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಭರತ್ ಸಿನ್ಹ್ ಸೋಳಂಕಿ ಅವರು ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.