ಅಗತ್ಯ ಬಂದರೆ ಮಧ್ಯಪ್ರವೇಶ ಮಾಡ್ತೀವಿ: ಕೇಂದ್ರ ಸರಕಾರಕ್ಕೆ 'ಸುಪ್ರೀಂ'
ನವದೆಹಲಿ, ಸೆಪ್ಟೆಂಬರ್ 17: ಮಾವೋವಾದಿಗಳ ಜತೆ ನಂಟು ಹೊಂದಿದ ಆರೋಪ ಇರುವ ಐವರು ಸಾಮಾಜಿಕ ಹೋರಾಟಗಾರರ ಗೃಹ ಬಂಧನವನ್ನು ಸೆಪ್ಟೆಂಬರ್ 19ರ ತನಕ ಸುಪ್ರೀಂ ಕೋರ್ಟ್ ವಿಸ್ತರಿಸಿದ್ದು, ಅಂದು ಅವರ ಬಿಡುಗಡೆ ಅರ್ಜಿ ವಿಚಾರಣೆಯನ್ನು ನಡೆಸಲಿದೆ. ಈ ಮಧ್ಯೆ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಕ್ಕೆ ಕೇಂದ್ರ ಸರಕಾರ ವಿರೋಧ ಮಾಡಿತು.
"ನಾವು ಪೊಲೀಸರ ದಾಖಲೆಗಳನ್ನು ನೋಡಬೇಕು. ಅದರಲ್ಲಿ ಏನೂ ಇಲ್ಲ ಅಂದರೆ ಪ್ರಕರಣವನ್ನು ರದ್ದು ಮಾಡಬಹುದು" ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಳೆದ ತಿಂಗಳು ಇತಿಹಾಸಕಾರರಾದ ರೋಮಿಲಾ ಥಾಪರ್ ಸೇರಿದಂತೆ ಐವರು ಸಾಮಾಜಿಕ ಹೋರಾಟಗಾರರನ್ನು ಬಂಧಿಸಲಾಗಿತ್ತು. ಅದರ ವಿರುದ್ಧ ಮಾನವ ಹಕ್ಕುಗಳ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು.
ಭೀಮಾ ಕೊರೆಗಾಂವ್ ಹಿಂಸಾಚಾರ: ವಿಚಾರವಾದಿಗಳ ಗೃಹಬಂಧನ ವಿಸ್ತರಣೆ
ಇನ್ನು ಬಂಧಿಸಿದ ಕ್ರಮವನ್ನು ವಿರೋಧಿಸಿ ಐವರು ಸಾಮಾಜಿಕ ಹೋರಾಟಗಾರರು ಕೋರ್ಟ್ ಗೆ ಅರ್ಜಿ ಹಾಕಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಗಳ ವಿವರ ಇಲ್ಲಿದೆ.
* "ಎಲ್ಲ ಪ್ರಕರಣವೂ ಸುಪ್ರೀಂ ಕೋರ್ಟ್ ಗೆ ಬರಲು ಸಾಧ್ಯವಿಲ್ಲ. ಇದು ತಪ್ಪಾದ ಪ್ರಕ್ರಿಯೆ. ಹಾಗಾದಾಗ ಎಲ್ಲ ಪ್ರಕರಣವೂ ಸುಪ್ರೀಂ ಕೋರ್ಟ್ ಗೆ ಬರುತ್ತದೆ" ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾ. ಎ.ಎಮ್.ಖನ್ವಿಲ್ಕರ್ ಅವರನ್ನು ಒಳಗೊಂಡ ಪೀಠಕ್ಕೆ ಸರಕಾರ ಹೇಳಿದೆ.
* "ಬೇರೆ ಕೋರ್ಟ್ ಗಳ ಮುಂದೆ ಬಾಕಿ ಇರುವ ಪ್ರಕರಣಗಳ ವಿಚಾರಣೆಯನ್ನು ಆಲಿಸಲು ಅವಕಾಶ ನೀಡಬೇಕು" ಎಂದು ಸರಕಾರ ಸರ್ವೋಚ್ಚ ನ್ಯಾಯಾಲಯವನ್ನು ಕೇಳಿಕೊಂಡಿದೆ.
ನಿವೃತ್ತಿಗೂ ಮುನ್ನ ದೀಪಕ್ ಮಿಶ್ರಾ ಕೈಯಲ್ಲಿ 5 ಮಹತ್ವದ ಪ್ರಕರಣ
* ಈಗಿನ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಮನ್ನಣೆ ನೀಡುವುದು ಅಪಾಯಕಾರಿ ಎಂದು ಕೇಂದ್ರ ಸರಕಾರ ಹೇಳಿದ್ದು, ಅರ್ಜಿದಾರರನ್ನು ಉದಾಹರಿಸಿ, ಅಪರಿಚಿತರಿಗೆ ಕೋರ್ಟ್ ಮನ್ನಣೆ ನೀಡಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಸರಕಾರ ಹೇಳಿದೆ.
* ಸ್ವಾತಂತ್ರ್ಯದ ರಕ್ಷಣೆ ಮಾಡುವ ಸಲುವಾಗಿ ಅರ್ಜಿಯನ್ನು ಸ್ವೀಕರಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.
ಬಂಧಿತರಾಗಿರುವ ಐವರು ವಿಚಾರವಾದಿಗಳು ಯಾರು, ಅವರ ಹಿನ್ನೆಲೆ ಏನು?
* ಮಾವೋವಾದಿಗಳ ಜತೆಗೆ ನಂಟು ಹೊಂದಿರುವ ಆರೋಪದ ಮೇಲೆ ಆಗಸ್ಟ್ ನಲ್ಲಿ ಮಹಾರಾಷ್ಟ್ರ ಪೊಲೀಸರು ತೆಲುಗು ಕವಿ ವರವರ ರಾವ್, ಸಾಮಾಜಿಕ ಕಾರ್ಯಕರ್ತರಾದ ವೆರ್ಮಾನ್ ಗೋನ್ಜಾಲ್ವಿಸ್, ಅರುಣ್ ಫೆರೇರಾ, ವಕೀಲರಾದ ಸುಧಾ ಭಾರದ್ವಾಜ್ ಮತ್ತು ನಾಗರಿಕ ಹಕ್ಕುಗಳ ಕಾರ್ಯಕರ್ತರಾದ ಗೌತಮ್ ನವಲಖ ಅವರನ್ನು ಬಂಧಿಸಿತ್ತು.
ಏನಿದು ಭೀಮಾ ಕೊರೆಗಾಂವ್ ವಿವಾದ? ವಿಚಾರವಾದಿಗಳ ಬಂಧನ ಏಕೆ?
* ಕಳೆದ ವರ್ಷ ಡಿಸೆಂಬರ್ ನಲ್ಲಿ ನಡೆದ ಸಮಾವೇಶ ಆನಂತರ ಭೀಮಾ-ಕೋರೆಗಾಂವ್ ಹಿಂಸಾಚಾರಕ್ಕೆ ತಿರುಗಿತ್ತು ಎಂಬ ಆರೋಪದ ಮೇಲೆ ವಿಚಾರಣೆ ನಡೆದಿತ್ತು
* ಅರ್ಜಿದಾರರ ಪರವಾಗಿ ವಾದ ಮಂಡಿಸುತ್ತಿರುವ ಅಭಿಷೇಕ್ ಮನು ಸಿಂಘ್ವಿ, ಎಲ್ಗಾರ್ ಪರಿಷದ್ ನ ಸಭೆಯಲ್ಲಿ ಐವರು ಸಾಮಾಜಿಕ ಕಾರ್ಯಕರ್ತರು ಭಾಗಿಯಾಗಿರಲಿಲ್ಲ. ಅಂದಿನ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ ಇಬ್ಬರು ಮಾಜಿ ನ್ಯಾಯಮೂರ್ತಿಗಳು ಹಾಗೂ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿಗಳು ಭಾಗಿಯಾಗಿದ್ದರು ಎಂಬ ಅಂಶದ ಬಗ್ಗೆ ಗಮನ ಸೆಳೆದಿದ್ದರು.
* ಮಹಾರಾಷ್ಟ್ರ ಪೊಲೀಸರು ಹೋರಾಟಗಾರರ ಬಂಧನ ಮಾಡಿರುವುದನ್ನು ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿತ್ತು. ಅವರೆಲ್ಲ ಗೌರವಯುತ ನಾಗರಿಕರು ಮತ್ತು ಭಿನ್ನಮತದ ಧ್ವನಿಯನ್ನು ಅಡಗಿಸುವುದು ಸರಿಯಲ್ಲ ಎಂದು ಹೇಳಿತ್ತು.
* ಸುಪ್ರೀಂ ಕೋರ್ಟ್ ನಿಂದ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಬಾರದಿತ್ತು ಎಂಬ ಪುಣೆ ಅಸಿಸ್ಟೆಂಟ್ ಕಮಿಷನರ್ ಹೇಳಿಕೆಯನ್ನು, "ಇಂಥ ಹೇಳಿಕೆ ಸುಪ್ರೀಂ ಕೋರ್ಟ್ ಘನತೆಗೆ ಚ್ಯುತಿ ತರುವಂಥದ್ದು" ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.