ಎಸ್ಡಿಪಿಐ, ಪಿಎಫ್ಐ ನಿಷೇಧ: ಕೇಂದ್ರಕ್ಕೆ ತೇಜಸ್ವಿ ಸೂರ್ಯ ಪ್ರಶ್ನೆ
ನವದೆಹಲಿ, ಸೆಪ್ಟೆಂಬರ್ 16: ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ರದ್ದುಗೊಳಿಸುತ್ತೀರಾ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಪೂರ್ವ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಆಗಸ್ಟ್ 11ರಂದು ನಡೆದ ಹಿಂಸಾಚಾರದಲ್ಲಿ ರಾಜಕೀಯ ಸಂಘಟನೆಗಳಾದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಭಾಗಿಯಾಗಿವೆ ಎಂಬ ಆರೋಪವಿದೆ. ಹೀಗಾಗಿ ಕೇಂದ್ರ ಸರ್ಕಾರ ಅವುಗಳನ್ನು ನಿಷೇಧಿಸಲಿದೆಯೇ? ಎಂದು ತೇಜಸ್ವಿ ಸೂರ್ಯ ಸಂಸತ್ನಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರು ಗಲಭೆ: ಸತ್ಯ ಶೋಧನಾ ಸಮಿತಿ ವರದಿಯಲ್ಲಿ ಏನಿದೆ?
ಸಂಸತ್ನಲ್ಲಿ ಚುಕ್ಕಿ ರಹಿತ ಗುರುತಿನ ಪ್ರಶ್ನೆ ಕೇಳಿದ ತೇಜಸ್ವಿ ಸೂರ್ಯ, ಎಸ್ಡಿಪಿಐ ಜತೆ ನಂಟು ಹೊಂದಿರುವ ಅನೇಕ ದುಷ್ಕರ್ಮಿಗಳು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಚುಕ್ಕಿ ರಹಿತ ಪ್ರಶ್ನೆಗೆ ಸಂಸತ್ನಲ್ಲಿ ಮೌಖಿಕ ಉತ್ತರ ನೀಡುವುದಿಲ್ಲ. ಬದಲಾಗಿ ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ನೀಡಲಾಗುತ್ತದೆ. ಮುಂದೆ ಓದಿ.
ಎಸ್ಡಿಪಿಐ, ಪಿಎಫ್ಐ ನಿಷೇಧ
'ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗಳಲ್ಲಿ ಇತ್ತೀಚೆಗೆ ನಡೆದ ಘಟನೆಗಳ ಬಳಿಕ ಎಸ್ಡಿಪಿಐ, ಪಿಎಫ್ಐ ಮತ್ತು ಅಂತಹ ಇತರೆ ರಾಜಕೀಯ ಸಂಘಟನೆಗಳನ್ನು ರದ್ದುಗೊಳಿಸುವ ವಿಚಾರವನ್ನು ಸರ್ಕಾರ ಪರಿಗಣಿಸುತ್ತಿದೆಯೇ? ಎಸ್ಡಿಪಿಐ ಜತೆಗೆ ಗುರುತಿಸಿಕೊಂಡ ಅನೇಕ ದುಷ್ಕರ್ಮಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡಿದ್ದಾರೆ' ಎಂದು ತೇಜಸ್ವಿ ಸೂರ್ಯ ತಮ್ಮ ಪ್ರಶ್ನೆಯಲ್ಲಿ ಹೇಳಿದ್ದಾರೆ.
ಎಸ್ಡಿಪಿಐ ರಕ್ಷಣೆ ಮಾಡುವುದು ಸಿದ್ದರಾಮಯ್ಯ ಪ್ಲಾನ್!
ಎಸ್ಐಒಗೆ ಉಗ್ರವಾದಿ ಸಂಘಟನೆ ನಂಟು
ಇಸ್ಲಾಮಿಕ್ ಸಂಘಟನೆ ಜಮಾತ್-ಎ-ಇಸ್ಲಾಮಿಯ ವಿದ್ಯಾರ್ಥಿ ಘಟಕ ಸ್ಟುಡೆಂಟ್ ಇಸ್ಲಾಮಿಕ್ ಸಂಸ್ಥೆಯಂತಹ (ಎಸ್ಐಒ) ಸಂಘಟನೆಗಳ ಮೇಲೆಯೂ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆಯೇ ಎಂದು ಸೂರ್ಯ ಪ್ರಶ್ನಿಸಿದ್ದಾರೆ. ಭಾರತದಲ್ಲಿ ಇಸ್ಲಾಮಿಕ್ ಮೂಲಭೂತ ಉಗ್ರವಾದ ನಡೆಸಲು ಹಣಕಾಸು ಒದಗಿಸುವ ಮೂಲಕ ಉತ್ತೇಜನ ನೀಡುವ ಟರ್ಕಿಶ್ ಯೂತ್ ಫೆಡರೇಷನ್ (ಟಿಯುಜಿವಿಎ) ಜತೆಗೆ ಎಸ್ಐಒ ನಂಟು ಹೊಂದಿದೆ ಎಂದು ವರದಿಯಾಗಿದೆ ಎಂಬುದಾಗಿ ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಉತ್ತರ
ಈ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, 'ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳನ್ನು ನಡೆಸುವ ಸಂಘಟನೆಗಳ ವಿರುದ್ಧ ಅಗತ್ಯ ಬಿದ್ದ ಸಂದರ್ಭದಲ್ಲಿ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ' ಎಂದು ಹೇಳಿದೆ.
ರಾಜ್ಯ ಸರ್ಕಾರ ಹೇಳಿದ್ದೇನು?
ಬೆಂಗಳೂರು ಹಿಂಸಾಚಾರದ ಬಳಿಕ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವ ಚರ್ಚೆ ಮುನ್ನೆಲೆಗೆ ಬಂದಿತ್ತು. ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಕ್ಕೆ ಸೂಕ್ತ ಸಾಕ್ಷ್ಯಗಳನ್ನು ಸಂಗ್ರಹಿಸಿದ ಬಳಿಕ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ಅವುಗಳನ್ನು ನಿಷೇಧಿಸುವಂತೆ ಕೋರಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿತ್ತು.