ಭಾರತದಲ್ಲಿ 'ಗಂಗಾಜಲ' ಕುಡಿದರೆ ಕೊರೊನಾ ವೈರಸ್ ಮಾಯ?
ನವದೆಹಲಿ, ಮೇ.07: ವಿಶ್ವದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಸೋಂಕು ನಿವಾರಣೆಗೆ ಗಂಗಾ ಜಲವೇ ಸಾಕು. ಭಾರತದಲ್ಲಿ ಗಂಗಾಜಲ ಕುಡಿದರೆ ಕೊರೊನಾ ವೈರಸ್ ನಿಂದ ಪಾರಾಗಬಹುದೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ದೇಶದ ಪವಿತ್ರ ಗಂಗಾ ನದಿಯ ನೀರು ಸೇವಿಸಿದ್ರೆ ಕೊರೊನಾದಿಂದ ಪಾರಾಗುವ ಸಾಧ್ಯತೆಗಳಿವೆಯೇ ಎಂಬುದರ ಬಗ್ಗೆ ಸಂಶೋಧನೆ ನಡೆಸುವಂತೆ ಕೇಂದ್ರ ಸರ್ಕಾರವು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ(ICMR) ಮುಂದಿಟ್ಟಿದೆ.
ಲಕ್ಷಲಕ್ಷ ಬಲಿ ಪಡೆದ ಕೊರೊನಾ ವೈರಸ್ ಸೋಂಕಿಗೆ ಸಿಕ್ಕಿತು ಔಷಧಿ!
ಕೇಂದ್ರ ಸರ್ಕಾರದ ಪ್ರಸ್ತಾಪವನೆಯನ್ನು ಐಸಿಎಂಆರ್ ತಿರಸ್ಕರಿಸಿದೆ. ಕೊರೊನಾ ವೈರಸ್ ವಿರುದ್ಧ ಹೋರಾಟಬಲ್ಲ ವ್ಯಾಕ್ಸಿನ್ ಸಂಶೋಧನೆಯಲ್ಲಿ ತೊಡಗಿರುವ ಸಂದರ್ಭದಲ್ಲಿ ಇಂಥ ಪ್ರಸ್ತಾವನೆಗಳಿಗೆ ತಲೆ ಕೆಡಿಸಿಕೊಳ್ಳಲು ಆಗುವುದಿಲ್ಲ. ಸಾಂಕ್ರಾಮಿಕ ಪಿಡುಗು ವಿಶ್ವವನ್ನು ವ್ಯಾಪಿಸುತ್ತಿರುವ ವೇಳೆಯಲ್ಲಿ ವೃಥಾ ಕಾಲಹರಣ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಐಸಿಎಂಆರ್ ತಿಳಿಸಿದೆ ಎಂದು 'ದಿ ಪ್ರಿಂಟ್' ವರದಿ ಮಾಡಿದೆ.
ಐಸಿಎಂಆರ್ ಗೆ ಮನವಿ ಮಾಡಿದ ಜಲಶಕ್ತಿ ಸಚಿವಾಲಯ
ಗಂಗಾ ಜಲದಿಂದ ಸೋಂಕು ನಿವಾರಣೆ ಸಾಧ್ಯವೇ ಎಂಬ ಬಗ್ಗೆ ಅಧ್ಯಯನ ನಡೆಸುವಂತೆ ಅತುಲ್ಯ ಗಂಗಾ ಎಂಬ ಎನ್ ಜಿಓ ಸಂಸ್ಥೆಯು ಕಳೆದ ಏಪ್ರಿಲ್.03ರಂದು ಜಲಶಕ್ತಿ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಜಲಶಕ್ತಿ ಸಚಿವಾಲಯವು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಎದುರು ಸಂಶೋಧನೆಗೆ ಮನವಿ ಮಾಡಿತು ಎಂದು ತಿಳಿದು ಬಂದಿದೆ.
ಬ್ಯಾಕ್ಟಿರಿಯಾ ಕೊಲ್ಲವ ಶಕ್ತಿ ಇದೆಯಾ ಗಂಗಾ ಜಲದಲ್ಲಿ?
ಭಾರತದ ಪವಿತ್ರ ಗಂಗಾ ನದಿಯಲ್ಲಿ ನಿಂಜಾ ವೈರಸ್ ಗುಣವಿದೆ. ನಿಂಜಾ ವೈರಸ್ ಎಂಬುದು ಬ್ಯಾಕ್ಟಿರಿಯಾಗಳನ್ನು ಕೊಲ್ಲುವ ಒಂದು ಬಗೆಯ ವೈರಸ್ ಆಗಿದೆ. ಮನುಷ್ಯರಲ್ಲಿರುವ ಬ್ಯಾಕ್ಟಿರಿಯಾಗಳನ್ನು ಕೊಲ್ಲುವ ಶಕ್ತಿಯುಳ್ಳ ಗಂಗಾ ಜಲದಿಂದ ಕೊರೊನಾ ವೈರಸ್ ಕೂಡಾ ನಿವಾರಣೆ ಆಗುತ್ತದೆಯೇ ಎಂಬ ಬಗ್ಗೆ ಸಂಶೋಧನೆ ನಡೆಸಬೇಕಿದೆ ಎಂದು ಅತುಲ್ಯ ಗಂಗಾ ಎಂಬ ಎನ್ ಜಿಓ ಸಂಸ್ಥೆಯು ಕಳೆದ ತಿಂಗಳು ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದಿತ್ತು.
ವೈದ್ಯಕೀಯ ಪ್ರಯೋಗಕ್ಕಾಗಿ ಐಸಿಎಂಆರ್ ಗೆ ಮನವಿ
ಕಳೆದ ಏಪ್ರಿಲ್.03ರಂದೇ ಅತುಲ್ಯ ಗಂಗಾ ಸಂಸ್ಥೆಯು ಪ್ರಧಾನಮಂತ್ರಿ ಕಚೇರಿಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸಿತ್ತು. ಏಪ್ರಿಲ್.30ರಂದು ಸ್ವಚ್ಛ ಗಂಗಾ ರಾಷ್ಟ್ರೀಯ ಸಚಿವಾಲಯವು ನಮಾಮಿ ಗಂಗಾ ಯೋಜನೆ ಅಡಿಯಲ್ಲಿ ವೈದ್ಯಕೀಯ ಪ್ರಯೋಗ ನಡೆಸುವಂತೆ ಐಸಿಎಂಆರ್ ಗೆ ಸಚಿವಾಲಯವು ಮನವಿ ಮಾಡಿಕೊಂಡಿತ್ತು. ಈ ಸಂಬಂಧ ಐಸಿಎಂಆರ್ ಸಿಬ್ಬಂದಿಯು ಚರ್ಚೆ ನಡೆಸಿದ್ದು, ಇದರಿಂದ ಎನ್ ಜಿಓ ಸಂಸ್ಥೆಗೆ ನೆರವಾಗುತ್ತದೆಯೇ ವಿನಃ ಬೇರೆ ಉಪಯೋಗವಿಲ್ಲ ಎಂದು ತಿಳಿದು ಪ್ರಸ್ತಾವನೆಯನ್ನು ತಿರಸ್ಕರಿದೆ ಎಂದು ತಿಳಿದು ಬಂದಿದೆ.
ಜಲಶಕ್ತಿ ಸಚಿವಾಲಯದ ಪ್ರಸ್ತಾವನೆಯಲ್ಲಿ ಲಾಜಿಕ್ ಇಲ್ಲ
ಗಂಗಾ ಜಲದ ಬಗ್ಗೆ ಸಂಶೋಧನೆ ನಡೆಸುವಂತೆ ಜಲಶಕ್ತಿ ಸಚಿವಾಲಯದ ಪ್ರಸ್ತಾಪನೆ ಸಲ್ಲಿಸುತ್ತಿದ್ದಂತೆ ಐಸಿಎಂಆರ್ ನಲ್ಲಿ ಚರ್ಚೆ ನಡೆಸಲಾಯಿತು. ಕೊರೊನಾ ವೈರಸ್ ವಿರುದ್ಧ ಹೋರಾಡಲು ಪ್ಲಾಸ್ಮಾ ಥೆರಿಪಿ ಹೇೆಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಇದರ ಮಧ್ಯ ಗಂಗಾ ಜಲದಲ್ಲಿ ಬ್ಯಾಕ್ಟಿರಿಯಾಗಳನ್ನು ಕೊಲ್ಲುವ ಶಕ್ತಿಯಿದೆ ಎಂಬ ಬಗ್ಗೆ ಸಂಶೋಧನೆ ನಡೆಸುವುದಕ್ಕೆ ಸಾಧ್ಯವಿಲ್ಲ. ಅಲ್ಲದೇ ಗಂಗಾಜಲದಲ್ಲಿ ಬ್ಯಾಕ್ಟಿರಿಯಾಗಳನ್ನು ಕೊಲ್ಲುವ ಗುಣವಿದೆ, ಅದರಿಂದ ಕೊರೊನಾ ವೈರಸ್ ಗುಣಮುಖವಾಗುತ್ತದೆ ಎಂಬ ವಾದದಲ್ಲಿ ಯಾವುದೇ ಲಾಜಿಕ್ ಇಲ್ಲ ಎಂದು ಐಸಿಎಂಆರ್ ತಿಳಿಸಿದೆ.
ಅತುಲ್ಯ ಗಂಗಾ ಸಂಸ್ಥೆಯ ವಾದವೇನು?
ಅತುಲ್ಯ ಗಂಗಾ ಸಂಸ್ಥೆಯು ಸಲ್ಲಿಸಿದ ಪ್ರಸ್ತಾವನೆಯಲ್ಲಿ ಪವಿತ್ರ ಗಂಗಾ ನದಿಯು ಔಷಧೀಯ ಗುಣಗಳನ್ನು ಹೊಂದಿದೆ. ಗಂಗಾ ನದಿಯಲ್ಲಿ ಬ್ಯಾಕ್ಟಿರಿಯಾಗಳನ್ನು ಕೊಲ್ಲುವಂತಾ ಶಕ್ತಿಯಿದ್ದು, ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರ್ ನಲ್ಲಿರುವ ಐಐಟಿ, ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್, ಲಕ್ನೋದ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟ್ಯಾಕ್ಸಿಕಾಲಜಿ ರಿಸರ್ಚ್ ಸಂಸ್ಥೆಗಳು ಗಂಗಾ ಜಲದಲ್ಲಿ ಬ್ಯಾಕ್ಟಿರಿಯಾಗಳನ್ನು ಕೊಲ್ಲುವ ಶಕ್ತಿಯಿದೆ ಎನ್ನುವುದನ್ನು ಖಾತ್ರಿಪಡಿಸಿವೆ ಎಂದು ಎನ್ ಜಿಓ ಸಂಸ್ಥೆಯ ವಕ್ತಾರ ಮನೋಜ್ ಕಿಶ್ವಾರ್ ತಿಳಿಸಿದ್ದಾರೆ.