ದ್ರೌಪದಿ ಮುರ್ಮು ಬಳಿ ಕ್ಷಮೆಯಾಚಿಸುತ್ತೇನೆ, ಆದರೆ ಬಿಜೆಪಿ ವಂಚಕರ ಕ್ಷಮೆ ಕೇಳಲ್ಲ: ಅಧೀರ್ ರಂಜನ್ ಚೌಧರಿ
ನವದೆಹಲಿ, ಜುಲೈ 28: ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ 'ರಾಷ್ಟ್ರಪತ್ನಿ' ಹೇಳಿಕೆ ವಿವಾದ ತೀವ್ರಗೊಳ್ಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಅಧೀರ್ ರಂಜನ್ ಚೌಧರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಲ್ಲಿ ಕ್ಷಮೆಯಾಚಿಸುತ್ತೇನೆ, ಆದರೆ ಬಿಜೆಪಿಯ ವಂಚಕ ಸಂಸದರ ಬಳಿ ಕ್ಷಮೆಯಾಚನೆ ಮಾಡಲ್ಲ ಎಂದು ಹೇಳಿದ್ದಾರೆ.
ತಮ್ಮ 'ರಾಷ್ಟ್ರಪತ್ನಿ' ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರ ಆಕ್ರೋಶ ವ್ಯಕ್ತಪಡಿಸಿರುವ ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ನಾನು ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿಲ್ಲ, ಬಾಯಿತಪ್ಪಿ ಹೇಳಿಕೆ ನೀಡಿದ್ದೇನೆ ಎಂದು ಅವರು ತಮ್ಮನ್ನು ಸಮರ್ಥಿಸಿಕೊಂಡರು. ನಾನು ಬಂಗಾಳಿ ನನಗೆ ಹಿಂದಿ ಭಾಷೆ ಸರಿಯಾಗಿ ಗೊತ್ತಿಲ್ಲ, ನಾನು ಹಿಂದಿಯಲ್ಲಿ ಮಾತನಾಡಬಾರದಿತ್ತು ಎಂದು ಹೇಳಿದರು.
ನವದೆಹಲಿ: ಜೋರ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ
ಕೇಸರಿ ಪಕ್ಷದ ನಾಯಕರೊಬ್ಬರು ಸೋನಿಯಾ ಗಾಂಧಿ ಸೇರಿದಂತೆ ತಮ್ಮ ಮಹಿಳಾ ಸಹೋದ್ಯೋಗಿಗಳಿಗೆ ಅಗೌರವ ತೋರಿದ್ದಾರೆ ಎಂದು ಚೌಧರಿ ನಂತರ ಬಿಜೆಪಿ ವಿರುದ್ಧ ಆರೋಪಿಸಿದರು.
"ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಬಗ್ಗೆ ಏನು ಹೇಳುತ್ತಾರೆ? ಶಶಿ ತರೂರ್ ಪತ್ನಿ ಬಗ್ಗೆ ಹೇಳಿದ್ದೇನು? ಸಂಸತ್ತಿನ ಒಳಗೆ ಬಿಜೆಪಿ ಮುಖಂಡರು ರೇಣುಕಾ ಚೌಧರಿ ಬಗ್ಗೆ ಹೇಗೆ ಮಾತನಾಡಿದರು?" ಎಂದು ಪತ್ರಕರ್ತರನ್ನು ಪ್ರಶ್ನಿಸಿದರು.
ದ್ರೌಪದಿ ಮುರ್ಮು ಭೇಟಿ ಮಾಡುತ್ತೇನೆ
ಖುದ್ದಾಗಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮಾತನಾಡುವುದಾಗಿ ಅಧೀರ್ ರಂಜನ್ ಚೌಧರಿ ತಿಳಿಸಿದರು. ಅವರ ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆಯಾಚಿಸಲು ಸಿದ್ಧ ಎಂದು ತಿಳಿಸಿದರು.
"ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದೇನೆ. ಶುಕ್ರವಾರ ಅವರನ್ನು ಭೇಟಿ ಮಾಡಲು ಸಮಯ ಸಿಗಬಹುದು. ನಾವು ಭೇಟಿಯಾದರೆ ಅವರ ಜೊತೆ ವೈಯಕ್ತಿಕವಾಗಿ ಮಾತನಾಡುತ್ತೇನೆ. ನನ್ನ ಹೇಳಿಕೆಯಿಂದ ಅವರ ಭಾವನೆಗಳಿಗೆ ನೋವಾಗಿದ್ದರೆ ಅವರ ಬಳಿ ಕ್ಷಮೆಯಾಚಿಸುತ್ತೇನೆ. ಆದರೆ ನನ್ನ ವಿರುದ್ಧ ಕೂಗಾಡುತ್ತಿರುವ ಈ ವಂಚಕರಿಗೆ ಕ್ಷಮೆ ಕೇಳಲ್ಲ" ಎಂದು ಚೌಧರಿ ಹೇಳಿದ್ದಾರೆ.
ಬಿಜೆಪಿಯವರದ್ದು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ
"ಇವರೆಲ್ಲ ಪಖಂಡಿಗಳು. ಹೆಣ್ಣನ್ನು ಅವಮಾನಿಸುವುದರಲ್ಲಿ ನಿಪುಣರು. ಒಬ್ಬರ ಹಿಂದೆ ಒಬ್ಬರು ಮಹಿಳೆಯರನ್ನು ಅವಮಾನಿಸಿದ್ದಾರೆ. ನಾನು ಅವರ ಬಗ್ಗೆ ನಿಮಗೆ ನೆನಪಿಸಬೇಕೇ?" ಎಂದು ಚೌಧರಿ ಪ್ರಶ್ನಿಸಿದ್ದಾರೆ.
"ಬಿಜೆಪಿಯವರು ಈಗ ಆದಿವಾಸಿಗಳಿಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಭಾರತದಲ್ಲಿ, ಮೋದಿ ಆಡಳಿತದಲ್ಲಿ, ಬುಡಕಟ್ಟು ಜನಾಂಗದವರು ಹೆಚ್ಚು ಬಳಲುತ್ತಿದ್ದಾರೆ. ಹೋಗಿ ಸತ್ಯವನ್ನು ಪರಿಶೀಲಿಸಿ. ದೇಶದ ಸ್ಥಿತಿ ನೋಡಿ" ಎಂದು ಹೇಳಿದರು.
ಲೋಕಸಭೆಯಲ್ಲಿ ಗದ್ದಲ
ಗುರುವಾರ ಬೆಳಗ್ಗೆ ಲೋಕಸಭೆಯಲ್ಲಿ ಅಧೀರ್ ರಂಜನ್ ಚೌಧರಿ ಅವರ "ರಾಷ್ಟ್ರಪತ್ನಿ" ಹೇಳಿಕೆಯು ಭಾರಿ ಗದ್ದಲ ಸೃಷ್ಟಿಸಿತು. ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿತು. ನಂತರ ಭಾರಿ ವಿವಾದಕ್ಕೆ ಕಾರಣವಾಯಿತು.
"ಬುಧವಾರ ನಾವು ವಿಜಯ್ ಚೌಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಪತ್ರಕರ್ತರು ನಾವು ಎಲ್ಲಿಗೆ ಹೋಗಬೇಕೆಂದು ಕೇಳಿದರು. ನಾನು "ರಾಷ್ಟ್ರಪತ್ನಿ" ಎಂದು ಒಮ್ಮೆ ತಪ್ಪಾಗಿ ಹೇಳಿದೆ. ನಾನು ತಪ್ಪು ಮಾಡಿದ ವಿಡಿಯೋ ಭಾಗವನ್ನು ತೋರಿಸಬೇಡಿ ಎಂದು ಪತ್ರಕರ್ತರನ್ನು ಒತ್ತಾಯಿಸಿದೆ. ಆದರೆ ಬಿಜೆಪಿ ಈಗ ಅದೇ ವಿಚಾರದಲ್ಲಿ ವಿವಾದ ಸೃಷ್ಟಿಸುತ್ತಿದೆ" ಎಂದು ಹೇಳಿದರು.
ನಾನು ಆಕಸ್ಮಿಕವಾಗಿ 'ರಾಷ್ಟ್ರಪತ್ನಿ' ಪದವನ್ನು ಒಂದೇ ಬಾರಿ ಬಳಸಿದ್ದೇನೆ. ರಾಷ್ಟ್ರಪತಿಗಳಿಗೆ ನಾನು ಎಂದಿಗೂ ಅಗೌರವ ತೋರಿಲ್ಲ ಎಂದು ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡರು.
ಸೋನಿಯಾ ಗಾಂಧಿ ಕ್ಷಮೆಯಾಚಿಸಲಿ ಎಂದ ಸ್ಮೃತಿ ಇರಾನಿ
ಚೌಧರಿ ಅವರ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಗ್ರಹಿಸಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿ ನಾಯಕರು ಚೌಧರಿ ಅವರ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.