ಭಾರತ್ ಜೋಡೋ ಯಾತ್ರೆ ಮೊದಲ ಹೆಜ್ಜೆಯಲ್ಲೇ ಎಡವಿದರಾ ರಾಹುಲ್ ಗಾಂಧಿ!?
ನವದೆಹಲಿ, ಸೆಪ್ಟೆಂಬರ್ 21: ದೇಶದಲ್ಲಿ ರಾಹುಲ್ ಗಾಂಧಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಪ್ರಾರಂಭಿಕ ಹೆಜ್ಜೆಯಲ್ಲೇ ಎಡವಿದರಾ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ಶುರುವಾಗಿವೆ.
ಕಾಂಗ್ರೆಸ್ನ 'ಭಾರತ್ ಜೋಡೋ ಯಾತ್ರೆ' ಗುಜರಾತ್ ಅಥವಾ ಯಾವುದೇ ಬಿಜೆಪಿ ಆಡಳಿತದ ರಾಜ್ಯದಿಂದ ಪ್ರಾರಂಭವಾಗಬೇಕಿತ್ತು ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಇದು ಚರ್ಚೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವಂತೆ ಮಾಡಿದೆ. ಪ್ರತ್ಯೇಕ ವಿದರ್ಭ ರಾಜ್ಯಕ್ಕಾಗಿ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ದೇಶದಲ್ಲಿ ಚುನಾವಣಾ ಚಾಣಕ್ಯ ಎನಿಸಿಕೊಂಡಿರುವ ಪ್ರಸಾಂತ್ ಕಿಶೋರ್ ಆಡಿರುವ ಮಾತಿನ ಹಿಂದಿನ ಅಸಲಿಯತ್ತು ಏನು? ರಾಹುಲ್ ಗಾಂಧಿ ಆರಂಭಿಕ ಹೆಜ್ಜೆಯ ಬಗ್ಗೆ ಇವರು ಆಡಿರುವ ಮಾತುಗಳೇನು? ನಿಜವಾಗಿಯೂ ರಾಹುಲ್ ಗಾಂಧಿ ಮೊದಲ ಹೆಜ್ಜೆ ತಪ್ಪಾಗಿದೆಯೇ? ರಾಜಕೀಯ ವಲಯದಲ್ಲಿ ಸದ್ಯಕ್ಕೆ ಚರ್ಚೆ ಆಗುತ್ತಿರುವುದೇನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಕಾಂಗ್ರೆಸ್ಸಿನ ಭಾರತ್ ಜೋಡೋ ಎಲ್ಲಿ ಶುರುವಾಗಬೇಕಿತ್ತು?
ಭಾರತದ ಹಲವು ರಾಜ್ಯಗಳಲ್ಲಿ ಇದೇ ವರ್ಷ ವಿಧಾನಸಭೆ ಚುನಾವಣೆಗಳು ಶುರುವಾಗಲಿವೆ. ಚುನಾವಣೆಗೆ ಅಣಿಯಾಗಿರುವ ಗುಜರಾತ್ನಿಂದ ಅಥವಾ ಬಿಜೆಪಿಯು ಹೆಚ್ಚು ಪ್ರಾಬಲ್ಯವನ್ನು ಹೊಂದಿರುವ ಉತ್ತರ ಪ್ರದೇಶ ಅಥವಾ ಮಧ್ಯಪ್ರದೇಶದಂತಹ ರಾಜ್ಯಗಳಿಂದ ಕಾಂಗ್ರೆಸ್ ತನ್ನ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದ್ದರೆ ಉತ್ತಮವಾಗಿ ಇರುತ್ತಿತ್ತು," ಎಂದು ಪ್ರಶಾಂತ್ ಕಿಶೋರ್ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಆದರೆ ರಾಹುಲ್ ಗಾಂಧಿ ಶುರು ಮಾಡಿರುವ ಭಾರತ್ ಜೋಡೋ ಯಾತ್ರೆಯು ತಮಿಳುನಾಡಿನಿಂದ ಪ್ರಾರಂಭವಾಗಿದೆ. ಇದೂ ಕೂಡ ಯಾತ್ರೆ ಮೇಲೆ ಪ್ರಾರಂಭಿಕ ಪರಿಣಾಮವನ್ನು ಬೀರುತ್ತದೆ.
ಕಾಂಗ್ರೆಸ್ ಜೊತೆಗಿನ ಪ್ರಶಾಂತ್ ಕಿಶೋರ್ ಒಪ್ಪಂದ ವಿಫಲ
ದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ಸಿನ ರಾಜಕೀಯ ಕಾಗುಣಿತದ ಲೆಕ್ಕಾಚಾರಕ್ಕೆ ಇದೇ ಪ್ರಶಾಂತ್ ಕಿಶೋರ್ ಮೇಷ್ಟ್ರು ಆಗುತ್ತಾರೆ ಎನ್ನುವ ಸುದ್ದಿ ಹಲ್-ಚಲ್ ಎಬ್ಬಿಸಿತ್ತು. ಆದರೆ ತದನಂತರದಲ್ಲಿ ನಡೆದ ಕೆಲವು ರಾಜಕೀಯ ಬೆಳವಣಿಗೆಗಳು ಎಲ್ಲಾ ಯೋಜನೆಗಳು ಉಲ್ಟಾ ಹೊಡೆಯುವಂತೆ ಮಾಡಿದವು. ಕಾಂಗ್ರೆಸ್ ಅಂಗಳಕ್ಕೆ ಪ್ರವೇಶಿಸಲು ಪ್ರಶಾಂತ್ ಕಿಶೋರ್ ನಿರಾಕರಿಸಿದ್ದರು. ಚುನಾವಣಾ ಕಾರ್ಯತಂತ್ರದ ಮುಖ್ಯಸ್ಥರಾಗಿ ಕಾಂಗ್ರೆಸ್ ಜೊತೆಗಿರುವ ಒಪ್ಪಂದಕ್ಕೆ ಅವರು ಸಾಧ್ಯವಿಲ್ಲ ಎಂದು ಹೇಳಿ ಬಿಟ್ಟರು.
ವಿದರ್ಭಾ ಪ್ರತ್ಯೇಕತೆ ಬಗ್ಗೆ ಪ್ರಶಾಂತ್ ಕಿಶೋರ್ ಹೇಳಿದ್ದೇನು?
ವಾಸ್ತವದಲ್ಲಿ ಪ್ರತ್ಯೇಕ ವಿದರ್ಭ ಕುರಿತು ಬೆಂಬಲಿಗರೊಂದಿಗೆ ಸಂವಾದ ನಡೆಸಿದ ಪ್ರಶಾಂತ್ ಕಿಶೋರ್, ಪ್ರತ್ಯೇಕ ರಾಜ್ಯದ ಕನಸನ್ನು ನನಸಾಗಿಸಲು ಜನರು ಒಗ್ಗಟ್ಟಿನಿಂದ ಪ್ರಯತ್ನಿಸಬೇಕು ಎಂದು ಕರೆ ನೀಡಿದರು. "ಜನರಿಗೆ ಭರವಸೆ ಇದ್ದರೆ, ಪ್ರತ್ಯೇಕ ವಿದರ್ಭ ರಾಜ್ಯದ ಕಲ್ಪನೆಯನ್ನು ಮುಂದುವರಿಸಬಹುದು. ಆಂದೋಲನವು ಕೇಂದ್ರವನ್ನು ತಲುಪಬೇಕು. ಅದು ರಾಷ್ಟ್ರೀಯ ಪರಿಣಾಮವನ್ನು ಬೀರಬೇಕು. ಅಭಿಯಾನವು ಸಮಾಜದಿಂದ ಹೊರಹೊಮ್ಮಬೇಕು," ಎಂದು ಪ್ರಶಾಂತ್ ಕಿಶೋರ್ ಹೇಳಿದರು.
ಯಾವ ದಿಕ್ಕಿನತ್ತ ಹೊರಟಿಹುದು ರಾಹುಲ್ ಗಾಂಧಿ ಯಾತ್ರೆ?
2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಗುರಿ ಹೊತ್ತು ಸಾಗುತ್ತಿರುವ ಕಾಂಗ್ರೆಸ್ಸಿಗೆ ಭಾರತ್ ಜೋಡೋ ಯಾತ್ರೆಯೇ ದಾರಿಯಾಗಿದೆ. ಇದೇ ದಾರಿಯಲ್ಲಿ ಸಾಗಿದ ರಾಹುಲ್ ಗಾಂಧಿ, ಈಗ ರಾಷ್ಟ್ರಮಟ್ಟದಲ್ಲಿ ಸದ್ದು ಆಗುತ್ತಿದ್ದಾರೆ, ಸದ್ದು ಮಾಡುತ್ತಿದ್ದಾರೆ. ಕಾಂಗ್ರೆಸ್ ಆರಂಭಿಸಿದ ಭಾರತ್ ಜೋಡೋ ಯಾತ್ರೆ ಭಾಗವಾಗಿ 150 ದಿನಗಳ ಕಾಲ ಕನ್ಯಾಕುಮಾರಿ To ಕಾಶ್ಮೀರದವರೆಗೂ 3570 ಕಿಲೋ ಮೀಟರ್ ನಡೆಯುತ್ತಿದ್ದಾರೆ. ಐದು ತಿಂಗಳ ಯಾತ್ರೆಯು 3,500 ಕಿಲೋಮೀಟರ್ ಮತ್ತು 12ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಂಚರಿಸಲಿದ್ದು, ಪ್ರತಿನಿತ್ಯ 25 ಕಿ.ಮೀ ನಡೆಯುತ್ತಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ಹೊರಟಿರುವ ಕಾಂಗ್ರೆಸ್ ರಾಜಕುಮಾರನಿಗೆ ಯಾವುದೇ ರೀತಿಯ ಐಶಾರಾಮಿ ಸವಲತ್ತುಗಳನ್ನು ನೀಡಿಲ್ಲ. ಕಂಟೇನರ್ಗಳಲ್ಲಿ ಮಲಗುವ ಹಾಸಿಗೆ, ಶೌಚಾಲಯ ಮತ್ತು ಎಸಿಗಳನ್ನು ಸಹ ಅಳವಡಿಸಲಾಗಿದೆ. ಪ್ರಯಾಣದ ಸಮಯದಲ್ಲಿ, ತಾಪಮಾನ ಮತ್ತು ಪರಿಸರವು ಅನೇಕ ಪ್ರದೇಶಗಳಲ್ಲಿ ಭಿನ್ನವಾಗಿರುತ್ತದೆ. ಈ ಸ್ಥಳ ಬದಲಾವಣೆಯೊಂದಿಗೆ ತೀವ್ರವಾದ ಶಾಖ ಮತ್ತು ತೇವಾಂಶವನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆಗಳನ್ನು ಮಾಡಲಾಗಿದೆ.