ಗಾಲ್ವಾನ್ ಸಂಘರ್ಷ: ಚೀನಾ ಬಗ್ಗೆ ಚಕಾರ ಎತ್ತದ ಪ್ರಧಾನಿ ಮೋದಿ
ನವದೆಹಲಿ, ಜೂನ್.30: ಭಾರತ-ಚೀನಾದ ಲಡಾಖ್ ಪೂರ್ವಭಾಗದ ಗಾಲ್ವಾನ್ ಕಣಿವೆಯಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ವಿಕೋಪಕ್ಕೆ ತಿರುಗುತ್ತಿದೆ. ಗಡಿಯಲ್ಲಿ ಕ್ಯಾತೆ ತೆಗೆದಿರುವ ಡ್ರ್ಯಾಗನ್ ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಖಡಕ್ ಸಂದೇಶ ರವಾನಿಸಲಿದ್ದಾರೆ ಎಂದು ಭಾರತೀಯರ ನಿರೀಕ್ಷೆ ಹುಸಿಯಾಗಿದೆ.
Recommended Video
ಮಂಗಳವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗರೀಬ್ ಕಲ್ಯಾಣ್ ರೋಜಗಾರ್ ಯೋಜನೆಯನ್ನು ನವೆಂಬರ್ ವರೆಗೂ ವಿಸ್ತರಣೆ ಮಾಡುವುದಾಗಿ ಘೋಷಣೆ ಮಾಡಿದರು.
ಪ್ರಧಾನಿ ಮೋದಿ ಭಾಷಣ: ಅನ್ಲಾಕ್2ರಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ
ಕಳೆದ 24 ಗಂಟೆಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರವು ದೇಶದಲ್ಲಿ ಟಿಕ್ ಟಾಕ್ ಸೇರಿದಂತೆ ಒಟ್ಟು 59 ಚೀನೀ ಆ್ಯಪ್ ಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಈ ಮೂಲಕ ಡ್ರ್ಯಾಗನ್ ರಾಷ್ಟ್ರದ ವಿರುದ್ಧ ಸಮರ ಸಾರಲಾಗಿದೆ ಎಂದು ಬಣ್ಣಿಸಲಾಗಿತ್ತು.
ಚೀನಾ ಬಗ್ಗೆ ಚಕಾರ ಎತ್ತದ ಪ್ರಧಾನಿ ಮೋದಿ:
ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಭಾರತ-ಚೀನಾ ಯೋಧರ ನಡುವಿನ ಸಂಘರ್ಷ. ಚೀನೀ ಆ್ಯಪ್ ಗಳ ಬಹಿಷ್ಕಾರ, ಚೀನಾದ ವಿರುದ್ಧ ಆರ್ಥಿಕ ಸಮರ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಗಡಿಯಲ್ಲಿ ಕಾಲ್ಕೆರೆದು ನಿಂತಿರುವ ಚೀನಾಗೆ ತಕ್ಕ ಪಾಠ ಕಲಿಸಬೇಕು ಎಂದು ಪ್ರಧಾನಿ ಪುನರ್ ಉಚ್ಛರಿಸುತ್ತಾರೆ ಎಂಬ ನಿರೀಕ್ಷೆ ಭಾರತೀಯರಲ್ಲಿ ಮನೆ ಮಾಡಿತ್ತು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತ್ರ ಇದ್ಯಾವುದರ ಬಗ್ಗೆಯೂ ಚಕಾರ ಎತ್ತಲಿಲ್ಲ. ಬದಲಿಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಭಾಷಣವು ಕೇವಲ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ರೋಜಗಾರ್ ಯೋಜನೆಯ ವಿಸ್ತರಣೆ ಕುರಿತು ಘೋಷಣೆಗೆ ಮಾತ್ರ ಸೀಮಿತವಾಗಿತ್ತು.