ನಿಜವಾಗಿಯೂ ಕೊರೊನಾ ಭಾರತದಲ್ಲಿ 3ನೇ ಹಂತದಲ್ಲಿದೆಯೇ?
ನವದೆಹಲಿ, ಮಾರ್ಚ್ 29: ಕೊರೊನಾ ಸೋಂಕಿನ ಪ್ರಕರಣಗಳು ಭಾರತದಲ್ಲಿ ಸಾವಿರದ ಗಡಿ ದಾಟಿವೆ. ಆದರೆ, ದೇಶದಲ್ಲಿ ಕೊರೊನಾ ಸೋಂಕು 3ನೇ ಹಂತದಲ್ಲಿಯೇ. ಕೇಂದ್ರ ಸರ್ಕಾರ ಈ ಕುರಿತು ಇನ್ನು ಅಂತಿಮ ಆದೇಶ ಹೊರಡಿಸಿಲ್ಲ.
ಆರೋಗ್ಯ ಕ್ಷೇತ್ರದ ಹಲವು ತಜ್ಞರು ಕೊರೊನಾ ದೇಶದಲ್ಲಿ 3ನೇ ಹಂತಕ್ಕೆ ಕಾಲಿಟ್ಟಿದೆ ಎಂದು ಹೇಳಿದ್ದಾರೆ. ಆದರೆ, ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ.
ಕೊರೊನಾ 3ನೇ ಹಂತ ಎಂದರೆ ಅದು ಸಮುದಾಯದಲ್ಲಿ ವೇಗವಾಗಿ ಹಬ್ಬುವ ಪ್ರಕ್ರಿಯೆಯಾಗಿದೆ. ಇದು ಬಹಳ ಕ್ಷಿಷ್ಟಕರವಾದ ಹಂತ ಎಂಬುದು ತಜ್ಞರ ಅಭಿಮತ. ದಿ ಕ್ವಿಂಟ್ಗೆ ಡಾ. ಗಿರಿಧರ್ ಜ್ಞಾನಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಮುಂದಿನ 5 ರಿಂದ 10 ದಿನಗಳು ಭಾರತದ ಪಾಲಿಗೆ ನಿರ್ಣಾಯಕವಾಗುತ್ತದೆ. ಏಕೆಂದರೆ ಸೋಂಕು ತಗುಲಿದವರಿಗೆ ಈ ದಿನಗಳಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಡಾ. ಗಿರಿಧರ್ ಜ್ಞಾನಿ ಅವರ ಪ್ರಕಾರ, "ಸರ್ಕಾರದ ಬಳಿ ಸೋಂಕು ಪರೀಕ್ಷೆಗೆ ಅಗತ್ಯ ಇರುಷ್ಟು ಕಿಟ್ಗಳು ಸದ್ಯದ ಪರಿಸ್ಥಿತಿಯಲ್ಲಿ ಇಲ್ಲ".
ಕೊರೊನಾ ಸಮುದಾಯದಲ್ಲಿ ಹಬ್ಬುವುದನ್ನು ತಡೆಯಲು ಸರ್ಕಾರ ಸಿದ್ಧವಾಗಿದೆ. ಎಲ್ಲಾ ರಾಜ್ಯ ಸರ್ಕಾರಗಳು ಈ ಪರಿಸ್ಥಿತಿ ಎದುರಿಸಲು ಇನ್ನೂ ಸಿದ್ಧವಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈಗಾಗಲೇ ದಿನಕ್ಕೆ 100 ಕೇಸುಗಳು ಬಂದರೂ ಅವುಗಳನ್ನು ಎದುರಿಸಲು ಸಿದ್ಧವಿರುವುದಾಗಿ ಘೋಷಣೆ ಮಾಡಿದ್ದಾರೆ.
ಶುಕ್ರವಾರ ಒಡಿಶಾ ರಾಜ್ಯದಲ್ಲಿ 60 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿತ್ತು. ವೈರಸ್ ಸಮುದಾಯದಲ್ಲಿ ಹಬ್ಬುವ ಆತಂಕವನ್ನು ರಾಜ್ಯ ಸರ್ಕಾರ ವ್ಯಕ್ತಪಡಿಸಿತ್ತು.
ಒಡಿಶಾದಲ್ಲಿ ಪತ್ತೆಯಾದ ಪ್ರಕರಣ ವಿದೇಶ ಪ್ರಯಾಣದ ಹಿನ್ನಲೆಯನ್ನು ಹೊಂದಿರಲಿಲ್ಲ. ಆದ್ದರಿಂದ, ರಾಜ್ಯ ಸರ್ಕಾರ ಕೊರೊನಾ 3ನೇ ಹಂತದಲ್ಲಿದೆ. ಅದು ಸಮುದಾಯದಲ್ಲಿ ಹರಡುತ್ತಿದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿತ್ತು.