ಬಾಂಗ್ಲಾ ರೋಹಿಂಗ್ಯಾ ಮುಸ್ಲಿಮರಿಗೆ ನೆರವಿನ ಹಸ್ತ ಚಾಚಿದ ಭಾರತ
ನವದೆಹಲಿ, ಸೆಪ್ಟೆಂಬರ್ 14: ಬಾಂಗ್ಲಾದೇಶದಲ್ಲಿ ವಲಸೆ ಬಂದು ನೆಲೆ ನಿಂತಿರುವ ರೊಹಿಂಗ್ಯಾ ಮುಸ್ಲಿಮರಿಗೆ ಭಾರತ ನೆರವಿನ ಹಸ್ತ ಚಾಚಿದೆ. ಏಕಾಏಕಿ ಲಕ್ಷಾಂತರ ಜನ ನಿರಾಶ್ರಿತರಾಗಿ ಬಾಂಗ್ಲಾಕ್ಕೆ ವಲಸೆ ಬಂದಿರುವುದರಿಂದ ಇವರ ನಿರ್ವಹಣೆ ನಡೆಸಲು ಬಾಂಗ್ಲಾ ಒದ್ದಾಡುತ್ತಿತ್ತು. ಇದೇ ಸಂದರ್ಭದಲ್ಲಿ ನೆರೆಯ ರಾಷ್ಟ್ರದ ನೆರವಿಗೆ ಭಾರತ ಧಾವಿಸಿದೆ.
ರೋಹಿಂಗ್ಯಾ ಮುಸ್ಲಿಮರಿಂದ ಭಾರತದ ಭದ್ರತೆಗೆ ಅಪಾಯ : ರಾಜನಾಥ್ ಸಿಂಗ್
ರೋಹಿಂಗ್ಯಾ ಮುಸ್ಲಿಮರು ಭದ್ರತೆಗೆ ತೊಡಕಾಗಿದ್ದಾರೆ ಎಂದು ಕೇಂದ್ರ ಸರಕಾರ ಹೇಳಿತ್ತು. ಹೀಗಿದ್ದೂ ಬಾಂಗ್ಲಾದೇಶದ ಮನವಿ ಮೇರೆಗೆ ನೆರವು ನೀಡಿರುವುದಾಗಿ ಉನ್ನತ ಅಧಿಕಾರಿಗಳು 'ಒನ್ಇಂಡಿಯಾ'ಗೆ ತಿಳಿಸಿದ್ದಾರೆ.
ಭಾರತದಿಂದ ಅಗತ್ಯ ಸಾಮಾಗ್ರಿಗಳನ್ನು ಹೊತ್ತ ಮೊದಲ ವಿಮಾನ ಇಂದು ಬಾಂಗ್ಲಾದೇಶಕ್ಕೆ ಪ್ರಯಾಣಿಸಿದೆ. ಬಾಂಗ್ಲಾದ ಚಿತ್ತಗಾಂಗ್ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 11 ಗಂಟೆಗೆ ವಿಮಾನ ಹೋಗಿ ತಲುಪಿದ್ದು, ಭಾರತದ ಬಾಂಗ್ಲಾ ರಾಯಭಾರಿ ಹರ್ಷ್ ವರ್ಧನ್ ಶ್ರಿಂಗ್ಲಾ ಪರಿಹಾರ ಸಾಮಾಗ್ರಿಗಳನ್ನು ಬಾಂಗ್ಲಾದ ಸಚಿವ ಒಬೈಸುಲ್ ಖಾದರ್ ಗೆ ಹಸ್ತಾಂತರಿಸಿದ್ದಾರೆ.
ಪರಿಹಾರ ಸಾಮಗ್ರಿಗಳಲ್ಲಿ ಅಕ್ಕಿ, ಬೇಳೆ ಕಾಳುಗಳು, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ, ಚಹಾ, ಬಿಸ್ಕೇಟ್, ಸೊಳ್ಳೆ ಪರದೆಗಳು ಸೇರಿದಂತೆ ಇತರ ಸಾಮಾಗ್ರಿಗಳು ಇವೆ.
ಇತ್ತೀಚೆಗೆ ಬಾಂಗ್ಲಾದೇಶಕ್ಕೆ 3,70,000 ಕ್ಕೂ ಹೆಚ್ಚು ರೊಹಿಂಗ್ಯಾ ಮುಸ್ಲಿಮರು ಮಯನ್ಮಾರ್ ನಿಂದ ನಿರಾಶ್ರಿತರಾಗಿ ವಲಸೆ ಬಂದಿದ್ದಾರೆ. ಇವರ ನಿರ್ವಹಣೆಯಲ್ಲಿ ಬಾಂಗ್ಲಾ ಬಸವಳಿದಿದ್ದು ಅಂತರಾಷ್ಟ್ರೀಯ ಸಮುದಾಯಕ್ಕೆ ಮಧ್ಯಪ್ರವೇಶಿಸುವಂತೆ ಮೊರೆ ಇಟ್ಡಿದೆ. ಮಯನ್ಮಾರ್ ನ ಮೇಲೆ ಒತ್ತಡ ಹೇರಿ ಸಮಸ್ಯೆ ಬಗೆಹರಿಸುವಂತೆ ಅದು ಕೇಳಿಕೊಂಡಿದೆ