ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ಕರೆದಿದ್ದು ಏಕೆ?
ನವದೆಹಲಿ, ಜನವರಿ 12 : ಹಿಂದೆಂದೂ ನಡೆಯದಂಥ ವಿದ್ಯಮಾನ ಭಾರತದ ಸರ್ವೋಚ್ಚ ನ್ಯಾಯಾಲಯದ ಅಂಗಳಲ್ಲಿ ಶುಕ್ರವಾರ, ಜನವರಿ 12ರಂದು ನಡೆದಿದೆ. ಸುಪ್ರೀಂ ಕೋರ್ಟ್ ನ ನಾಲ್ವರು ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ಕರೆದು ವಿವರಗಳನ್ನು ನೀಡಿದ್ದಾರೆ.
ನ್ಯಾ. ಕುರಿಯನ್ ಜೋಸೆಫ್, ನ್ಯಾ. ಜೆ ಚಲಮೇಶ್ವರ, ನ್ಯಾ. ರಂಜನ್ ಗೊಗೊಯ್ ಮತ್ತು ನ್ಯಾ. ಮದನ್ ಲೋಕೂರ್ ಅವರು ಸುದ್ದಿಗೋಷ್ಠಿ ಕರೆದು, ದೇಶದ ಪ್ರಜಾಪ್ರಭುತ್ವದ ಬಗ್ಗೆ, ನ್ಯಾಯಾಂಗ ಆಡಳಿತ ನಡೆಸುತ್ತಿರುವ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದು, ದೇಶದ ಜನರಲ್ಲಿ ಭಾರೀ ಕುತೂಹಲ ಹುಟ್ಟಿಕೊಂಡಿದೆ.
ಇತಿಹಾಸದಲ್ಲಿ ಮೊದಲ ಬಾರಿಗೆ ಸುಪ್ರಿಂ ನ್ಯಾಯಮೂರ್ತಿಗಳಿಂದ ಪತ್ರಿಕಾಗೋಷ್ಠಿ
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವಾರು ಹುಳುಕುಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಿಂದೆ ಕರ್ಣನ್ ನ್ಯಾಯಾಂಗ ವ್ಯವಸ್ಥೆಯ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದರಾದರೂ, ಹೀಗೆ ನಾಲ್ವರು ನ್ಯಾಯಮೂರ್ತಿಗಳು ಒಟ್ಟಿಗೆ ಸೇರಿ ಈರೀತಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ನಿದರ್ಶನಗಳು ಸಿಗುವುದು ದುರ್ಲಭ.
ನಾಲ್ವರು ನ್ಯಾಯಮೂರ್ತಿಗಳು ಒಟ್ಟಿಗೆ ಸೇರಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಪತ್ರಿಕಾ ಹೇಳಿಕೆಯಲ್ಲಿ ಏನಿದೆಯೆಂದು ಇನ್ನೂ ತಿಳಿದುಬಂದಿಲ್ಲ. ಸುದ್ದಿಗೋಷ್ಠಿಯ ಮುಖ್ಯಾಂಶಗಳು ಕೆಳಗಿನಂತಿವೆ.
* ನಾಲ್ಕು ತಿಂಗಳ ಹಿಂದೆಯೇ ಈ ನಾಲ್ವರು ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿಗೆ ಒಂದು ಪತ್ರವನ್ನು ನೀಡಿದ್ದರು.
* ಸರ್ವೋಚ್ಚ ನ್ಯಾಯಾಲಯದಲ್ಲಿ ಆಡಳಿತ ವ್ಯವಸ್ಥೆ ಸರಿದಾರಿಯಲ್ಲಿ ಸಾಗುತ್ತಿಲ್ಲ. ಕಳೆದ ಕೆಲವಾರು ತಿಂಗಳುಗಳಲ್ಲಿ ಹಲವಾರು ಅನಿರೀಕ್ಷಿತ, ಅಹಿತಕರ ಘಟನೆಗಳು ನಡೆದಿವೆ ಎಂದು ನ್ಯಾ. ಚಲಮೇಶ್ವರ ಹೇಳಿದರು.
* ನ್ಯಾಯಾಂಗ ವ್ಯವಸ್ಥೆ ಅಪಾರದರ್ಶಕವಾಗಿರದಿದ್ದರೆ ದೇಶದ ಪ್ರಜಾಪ್ರಭುತ್ವಕ್ಕೇ ಮಾರಕವಾಗಲಿದೆ ಎಂದು ನ್ಯಾಯಮೂರ್ತಿ ಚಲಮೇಶ್ವರ ಅವರು ಆತಂಕ ವ್ಯಕ್ತಪಡಿಸಿದರು.
* ಇದು ಅಭೂತಪೂರ್ವ ಸಂಗತಿ. ಇದನ್ನು ನಾವೇನು ಅತ್ಯಂತ ಸಂತೋಷದಿಂದ ಮಾಡುತ್ತಿಲ್ಲ. ದೇಶವನ್ನುದ್ದೇಶಿಸಿ ಮಾತನಾಡದಿದ್ದರೆ ನಮಗೆ ಬೇರೆ ದಾರಿಯೇ ಇರಲಿಲ್ಲ ಎಂದು ನ್ಯಾ. ಚಲಮೇಶ್ವರ ಅವರು ವಿಷಾದಿಸಿದರು.
* ಕೆಲ ಪ್ರಮುಖ ಸಂಗತಿಗಳ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯ ಮನವೊಲಿಸಲು ಪ್ರಯತ್ನಿಸಿದೆವು. ಆದರೆ, ಫಲಕಾರಿಯಾಗಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
* ಜಸ್ಟಿಸ್ ಬಿಎಚ್ ಲೋಯಾ ಅವರ ಆಘಾತಕಾರಿ ಹತ್ಯೆಗೆ ಬಗ್ಗೆ ಪತ್ರ ಬರೆಯಲಾಗಿದೆಯಾ ಎಂಬ ಪ್ರಶ್ನೆಗೆ ನ್ಯಾಯಮೂರ್ತಿಗಳು ಸ್ಪಷ್ಟವಾಗಿ ಉತ್ತರ ನೀಡಲಿಲ್ಲ. ಸೊಹ್ರಾಬುದ್ದಿನ್ ಎನ್ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಲೋಯಾ ಅವರು ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದರು.