ರಾಜೀವ್ ಹತ್ಯೆ ಕುರಿತಂತೆ ಬೆಚ್ಚಿಬೀಳಿಸುವ ಸತ್ಯಸಂಗತಿ!
ರಾಜೀವ್ ಗಾಂಧಿ ಅವರ ಹತ್ಯೆಯ ತನಿಖೆ ನಡೆಸುತ್ತಿದ್ದ ಸಿಬಿಐನ ತನಿಖಾಧಿಕಾರಿ ಕೆ ರಘೋತ್ತಮನ್ ಅವರು ಈ ಆಘಾತಕಾರಿ ಸಂಗತಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರ ಸಿಗುವುದೆ?
ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯಾಗಿ ಸರಿಯಾಗಿ 26 ವರ್ಷಗಳ ನಂತರ ಅವರಿಗೆ ನೀಡಲಾಗಿದ್ದ ಸುರಕ್ಷತೆ ಕುರಿತಂತೆ ಹಲವಾರು ಪ್ರಶ್ನೆಗಳು ಧುತ್ತನೆ ಎದುರಾಗಿವೆ. ಕೆಲವೊಂದು ಸಂಗತಿಗಳು, ಅಂದು ನಡೆದ ವಿದ್ಯಮಾನಗಳು ನಿಜಕ್ಕೂ ಬೆಚ್ಚಿಬೀಳಿಸುವಂತಿವೆ.
26 ವರ್ಷಗಳ ಹಿಂದೆ ಮೇ 21ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದಾಗ ತನು ಎಂಬ ಮಾನವ ಬಾಂಬ್ ಸ್ಫೋಟಗೊಂಡಿದ್ದರಿಂದ ರಾಜೀವ್ ಗಾಂಧಿ ಸ್ಥಳದಲ್ಲಿಯೇ ಹತ್ಯೆಗೀಡಾಗಿದ್ದರು.
ಅಂದು ರಾಜೀವ್ ಅವರಿಗೆ ನೀಡಲಾಗಿದ್ದ ವಿಶೇಷ ಭದ್ರತಾ ಪಡೆಯನ್ನು ಏಕೆ ಹಿಂತೆಗೆದುಕೊಳ್ಳಲಾಗಿತ್ತು? ಕೆಲ ತಿಂಗಳ ಹಿಂದೆಯೇ ಅವರ ಜೀವಕ್ಕೆ ಆಪತ್ತು ಇದೆ ಎಂದು ತಿಳಿದಿದ್ದರೂ ಮೇ 20ರಂದು ಅವರಿಗೆ ರಾಷ್ಟ್ರೀಯ ಭದ್ರತಾ ಪಡೆಯಿಂದ ಭದ್ರತೆಯನ್ನು ಏಕೆ ಒದಗಿಸಲಾಗಿತ್ತು?
ರಾಜೀವ್ ಗಾಂಧಿ ಅವರ ಹತ್ಯೆಯ ತನಿಖೆ ನಡೆಸುತ್ತಿದ್ದ ಸಿಬಿಐನ ತನಿಖಾಧಿಕಾರಿ ಕೆ ರಘೋತ್ತಮನ್ ಅವರು ಈ ಆಘಾತಕಾರಿ ಸಂಗತಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಒನ್ಇಂಡಿಯಾ ಜೊತೆ ವಿಶೇಷವಾಗಿ ಮಾತನಾಡಿರುವ ಅವರು, ಅಂದು ರಾಜೀವ್ ಅವರಿಗೆ ನೀಡಿದ್ದ ಭದ್ರತೆಯ ಬಗ್ಗೆ ಹಲವಾರು ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. [ಇಂದಿರಾ, ರಾಜೀವ್, ಸೋನಿಯಾ...ಈಗ ರಾಹುಲ್ ಸರದಿ]
ಎಸ್ಪಿಜಿ ಭದ್ರತೆಯನ್ನು ಹಿಂತೆಗೆದುಕೊಂಡ ತಿಂಗಳೊಳಗೆ ಅವರಿಗೆ ದೆಹಲಿ ಪೊಲೀಸರಿಂದ ಭದ್ರತೆ ಒದಗಿಸಲಾಗಿತ್ತು. ಅಂತಹ ಹೈ ಪ್ರೊಫೈಲ್ ವ್ಯಕ್ತಿಯ ಜೀವಕ್ಕೆ ಆಪತ್ತು ಒದಗಿರುವಾಗ ಆ ರೀತಿಯ ಭದ್ರತೆಯನ್ನು ಯಾರಾದರೂ ಒದಗಿಸುತ್ತಾರಾ ಎಂದು ರಘೋತ್ತಮನ್ ಅವರು ಕೇಳಿರುವ ಪ್ರಮುಖ ಪ್ರಶ್ನೆ.
ರಾಜೀವ್ ಅವರ ಜೀವಕ್ಕೆ ಅಪಾಯವಿದೆಯೆಂದು ಅಂತಾರಾಷ್ಟ್ರೀಯ ಬೇಹುಗಾರಿಕೆ ಸಂಸ್ಥೆಗಳಿಗೂ ಗೊತ್ತಿತ್ತು. ಆದರೂ, ಅವರಿಗೆ ಕೇವಲ ಒಂದು ದಿನದ ಹಿಂದೆ ಎನ್ಎಸ್ಜಿ ಭದ್ರತೆ ನೀಡಿದ್ದು ಅಂದಿನ ಸರಕಾರದ ಕರ್ತವ್ಯಲೋಪವಲ್ಲದೆ ಮತ್ತೇನೂ ಅಲ್ಲ ಎಂದು ಅವರು ಟೀಕಿಸಿದ್ದಾರೆ. [ಆ ಕುಟುಂಬದಲ್ಲಿ ರಾಜೀವ್ ಗಾಂಧಿ ಒಬ್ರೇ ಒಳ್ಳೆ ಮನುಷ್ಯ]
ಪ್ರಮುಖ ಸಾಕ್ಷಿಯಾಗಿದ್ದ ಆ ವಿಡಿಯೋ ಎಲ್ಲಿದೆ?
ರಾಜೀವ್ ಗಾಂಧಿ ಅವರು ಶ್ರೀಪೆರಂಬುದೂರಿಗೆ ಬರುವ ಮುನ್ನಾದಿನ ತೆಗೆದುಕೊಳ್ಳಲಾಗಿದ್ದ ಆ ವಿಡಿಯೋ ಎಲ್ಲಿದೆ? ಅವರು ಅಲ್ಲಿಗೆ ಆಗಮಿಸಿದ ನಂತರವೂ ವಿಡಿಯೋ ತೆಗೆದುಕೊಳ್ಳಲಾಗಿತ್ತು. ಅದೂ ಎಲ್ಲಿದೆ? ಅಂದಿನ ಐಬಿ ನಿರ್ದೇಶಕ ಅದನ್ನು ತೆಗೆದುಕೊಂಡು ಹೋದವರು ಇನ್ನೂ ಅದನ್ನು ಸಲ್ಲಿಸಿಲ್ಲ. ಅದನ್ನು ಬೇಕಂತೆಯೇ ಮುಚ್ಚಿಹಾಕಿದ್ದಾರೆ. ಆ ವಿಡಿಯೋದಲ್ಲಿ ಧನು ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ತನಿಖಾಧಿಕಾರಿಗಳಿಗಿಂತ ಇದನ್ನು ಕಂಡುಹಿಡಿಯಲು ಪತ್ರಕರ್ತರೇ ಹೆಚ್ಚು ಸಹಾಯ ಮಾಡಿದ್ದಾರೆ.
ಹತ್ಯೆ ಮಾಡಿದ್ದು ಎಲ್ಟಿಟಿಇನಾ? ಸಿಐಎನಾ?
ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ಚೀಫ್ ಅವರು, ರಾಜೀವ್ ಅವರನ್ನು ಹತ್ಯೆ ಮಾಡಿದ್ದು ಎಲ್ಟಿಟಿಇ ಅಲ್ಲ ಸಿಐಎ ಎಂದು ಸುಳ್ಳುಸುದ್ದಿ ಹೇಳಿ ತನಿಖೆಯ ದಾರಿಯನ್ನು ಸಂಪೂರ್ಣವಾಗಿ ತಪ್ಪಿಸಿದ್ದರು. ಎಲ್ಟಿಟಿಇಯ ಸಂಚಿನ ಬಗ್ಗೆ ಸುಳಿವು ಸಿಕ್ಕಿದೆ ಎಂದು ಅವರಿಗೆ ಎನ್ಐಎ ತಿಳಿಸಿದಾಗ ಅವರು ಅದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಅವರ ಹತ್ಯೆಯಲ್ಲಿ ಸಿಐಎ ಭಾಗಿಯಾಗಿದೆ ಎಂದು ಗೃಹ ಸಚಿವಾಲಯ ಕೂಡ ಹೇಳಿಕೆ ನೀಡಿತ್ತು. ಐಬಿ ಮತ್ತು ರಾ ಈ ಹತ್ಯೆ ನಡೆಯಲು ಸಾಕಷ್ಟು ಸಹಾಯ ಮಾಡಿದವು.
ಅಡ್ಡಗಾಲು ಹಾಕಿದ್ದು ರಾ ಮತ್ತು ಐಬಿ
ಈ ಹತ್ಯೆಯ ತನಿಖೆ ನಡೆಸುವಾಗ ರಿಸರ್ಚ್ ಮತ್ತು ಅನಾಲಿಸಿಸ್ ವಿಂಗ್ ಮತ್ತು ಐಬಿ ಯಾವ ರೀತಿಯಲ್ಲೂ ಮಾಹಿತಿ ನೀಡಲಿಲ್ಲ. ನಾವು ಇಂಗ್ಲೆಂಡಿನಲ್ಲಿ ಎಲ್ಟಿಟಿಇ ನೋಡಿಕೊಳ್ಳುತ್ತಿದ್ದ ಕಿಟ್ಟೂನನ್ನು ಹುಡುಕುತ್ತಿದ್ದಾಗ ಯುಕೆ ಸರಕಾರ ಅವನನ್ನು ಹಸ್ತಾಂತರಿಸಲಿಲ್ಲ. ಅವನು 1993ರಲ್ಲಿ ಭಾರತಕ್ಕೆ ಬಂದಾಗ ಅವನನ್ನು ಕೊಲ್ಲಬೇಕೆಂದು ರಾ ನಿರ್ಧರಿಸಿತ್ತು. ಪ್ರಭಾಕರನ್ ಗೆ ಇದ್ದ ಅಂತಾರಾಷ್ಟ್ರೀಯ ಸಂಪರ್ಕದ ಬಗ್ಗೆ ತಿಳಿಯಬೇಕಿದ್ದರೆ ಕಿಟ್ಟು ಜೀವಂತ ಬೇಕಾಗಿತ್ತು. ಇದು ರಾ ಅಥವಾ ಐಬಿಗೆ ಬೇಕಾಗಿರಲಿಲ್ಲ.
ದಾಖಲೆಗಳು ಎಲ್ಲಿವೆ ಯಾರಿಗೂ ಗೊತ್ತಿಲ್ಲ?
ರಾಜೀವ್ ಹತ್ಯೆಯ ಬಗ್ಗೆ ಸರಿಯಾದ ತನಿಖೆ ಏಕೆ ನಡೆಯಲಿಲ್ಲ? ಇಂಟೆಲಿಜೆನ್ಸ್ ವಿಫಲವಾಗಿತ್ತೆಂದು ವರ್ಮಾ ಸಮೀತಿ ವರದಿ ನೀಡಿದ ನಂತರ ಎಸ್ಐಟಿ ಖಾಸಗಿ ತನಿಖೆಗೆ ಆದೇಶಿಸಿತು. ಇಲ್ಲಿಯವರೆಗೆ ಆ ತನಿಖೆಯ ದಿಕ್ಕುದೆಸೆ ಯಾರಿಗೂ ಗೊತ್ತಿಲ್ಲ. ವರ್ಮಾ ಸಮಿತಿ ನಡೆಸಿದ ವರದಿಯ ದಾಖಲೆಗಳು ಎಲ್ಲಿವೆ ಯಾರಿಗೂ ಗೊತ್ತಿಲ್ಲ. ಈ ಕೃತ್ಯದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂದು ಹೆಸರನ್ನು ತನಿಖಾ ಸಂಸ್ಥೆಗಳು ಬಹಿರಂಗಪಡಿಸಬೇಕಾಗಿತ್ತು.
ಶಿವಾರಸನ್ ಅಡಗಿದ್ದು ಮೊದಲೇ ಗೊತ್ತಿತ್ತು
ರಾಜೀವ್ ಹತ್ಯೆಯ ಪ್ರಮುಖ ಆರೋಪಿ ಶಿವಾರಸನ್ ಬೆಂಗಳೂರಿನ ಕೋಣನಕುಂಟೆಯಲ್ಲಿ ಅಡಗಿದ್ದಾನೆ ಎಂದು ತನಿಖಾ ಸಂಸ್ಥೆಗಳಿಗೆ ಮೊದಲೇ ತಿಳಿದಿತ್ತು. ಆದರೆ ಮಾಹಿತಿಯನ್ನು ತಡವಾಗಿ ನೀಡಲಾಯಿತು. ಸಂಸ್ಥೆಗೆ ಎಲ್ಟಿಟಿಇಯ ಸೈನೈಡ್ ಸಂಸ್ಕೃತಿಯ ಬಗ್ಗೆಯೂ ಗೊತ್ತಿತ್ತು. ಎನ್ಎಸ್ಜಿ ಕೋಣನಕುಂಟೆಗೆ ಒಂದು ದಿನ ತಡವಾಗಿ ಆಗಮಿಸಿತು. ಅಗತ್ಯವಾಗಿದ್ದ ದಾಖಲೆಗಳನ್ನು ಸುಟ್ಟುಹಾಕಲು ಆತನಿಗೆ ಸಾಕಷ್ಟು ಸಮಯವೂ ಸಿಕ್ಕಿತ್ತು. ಮೊದಲೇ ದಾಳಿ ನಡೆಸಿದ್ದರೆ ಆ ನೆಗೆಟೀವ್ ಗಳನ್ನು ಸುಟ್ಟುಹಾಕಲು ಆತನಿಗೆ ಸಾಧ್ಯವಾಗುತ್ತಿತ್ತೆ?