ಕನ್ನಡ ಪತ್ರಿಕೆಯಲ್ಲಿ ಕೇಜ್ರಿವಾಲ್ ಸರ್ಕಾರದ ಜಾಹೀರಾತು ಯಾಕೆ?
ಇತ್ತೀಚೆಗೆ ನೊಯ್ಡಾದಿಂದ ಬಂದವರೊಬ್ಬರು ಹೇಳುತ್ತಿದ್ದರು. ದೆಹಲಿಯಲ್ಲಿ ಎಲ್ಲಿ ನೋಡಿದರಲ್ಲಿ ಅರವಿಂದ್ ಕೇಜ್ರಿವಾಲ್ ಸರಕಾರದ ಸಾಧನೆಯ ಜಾಹೀರಾತು. ವಿಪರೀತ ಎನಿಸುವಷ್ಟು ಜಾಹೀರಾತು/ಭಿತ್ತಿಪತ್ರಗಳು ದೆಹಲಿ ನಗರವನ್ನು ಆವರಿಸಿಕೊಂಡಿವೆ ಎಂದು.
ಅಭೂತಪೂರ್ವ ಜನಾದೇಶದ ಮೂಲಕ ಅಧಿಕಾರಕ್ಕೆ ಬಂದ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರಕಾರ ಸಾರ್ವಜನಿಕರ ತೆರಿಗೆ ಹಣವನ್ನು ಯಾವ ರೀತಿ ವಿನಿಯೋಗಿಸುತ್ತಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆಯೆಂದರೆ, ಕನ್ನಡ ಪತ್ರಿಕೆಗಳಲ್ಲೂ ದೆಹಲಿ ಸರಕಾರದ ಸಾಧನೆಯ ಪುಟಗಳು ರಾರಾಜಿಸುತ್ತಿರುವುದು.
ಇತ್ತೀಚಿನ ದಿನಗಳಲ್ಲಿ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರಕಾರದ ಸಾಧನೆಯನ್ನು ಬಿಂಬಿಸುವ ಪೇಯ್ಡ್ ಜಾಹೀರಾತುಗಳು ಕನ್ನಡ ಪತ್ರಿಕೆಗಳಲ್ಲಿ ಪುಟಗಟ್ಟಲೆ ಪ್ರಕಟವಾಗುತ್ತಿದೆ. ಇಂದಿನ (ಮೇ 6) ಸಂಚಿಕೆಯಲ್ಲೂ ಎರಡು ಪುಟದ ಜಾಹೀರಾತು ಪ್ರಕಟಗೊಂಡಿದೆ.
ಒಂದು ವೇಳೆ ರಾಷ್ಟ್ರ ಮಟ್ಟದಲ್ಲಿ ಸರ್ಕ್ಯುಲೇಶನ್ ಇರುವ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರೆ ಒಪ್ಪಬಹುದಾಗಿದ್ದರೂ, ರಾಜ್ಯಕ್ಕೆ ಸೀಮಿತವಾಗಿರುವ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದರೆ ಅದರಿಂದ ದೆಹಲಿ ಸರಕಾರಕ್ಕಾಗುವ ಲಾಭವೇನು?
ತಮ್ಮ ಸರಕಾರದ ಸಾಧೆನಗಳನ್ನು ಮತದಾರರಿಗೆ ತಲುಪುವಂತಾಗಲು ಜಾಹೀರಾತು ನೀಡುವುದು ಆಡಳಿತಾತ್ಮಕ ಪದ್ದತಿಯಾಗಿದ್ದರೂ, ಅದು ದೆಹಲಿಗೆ ಸೀಮಿತವಾಗದೇ ಇತರ ರಾಜ್ಯಗಳಿಗೆ ಇದರ ಅವಶ್ಯಕತೆ ಏನು ಎನ್ನುವುದೇ ಇಲ್ಲಿ ಪ್ರಶ್ನೆ.
ದೆಹಲಿ ಸರಕಾರದ ಸಾಧನೆಯನ್ನು ಕನ್ನಡ ಪತ್ರಿಕೆಗಳಲ್ಲಿ ಪ್ರಕಟಿಸುವುದರಿಂದ ತೆರಿಗೆದಾರರ ಹಣ ಅನಾವಶ್ಯಕವಾಗಿ ಪೋಲಾಗುವುದಲ್ಲವೇ ಎನ್ನುವುದು ಇಲ್ಲಿ ಕಾಡುವ ಪ್ರಶ್ನೆ.
ಅಥವಾ ಇದರ ಹಿಂದೆ ಇನ್ಯಾವುದೋ ರಾಜಕೀಯ ಗೂಡಾರ್ಥವಿದೆಯೋ, ಕರ್ನಾಟಕದಲ್ಲಿ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವ ದೂರಲೋಚನೆ ಏನಾದರೂ ಇದೆಯೋ ಎನ್ನುವುದು ತಿಳಿಯಬೇಕಾಗಿದೆ.
ದೆಹಲಿ ಸರಕಾರದ ಕೆಲಸ ಕಾರ್ಯಗಳನ್ನು ವಿಶೇಷ ಜಾಹೀರಾತಿನ ಮೂಲಕ ಓದಿ, ಇಲ್ಲಿನ ಜನತೆಗೆ ಏನಾಗಬೇಕಿದೆ. ಕರ್ನಾಟಕದ ಜನತೆಗೆ ಇದರಿಂದಾಗುವ ಲಾಭವೇನು, ಜಾಹೀರಾತಿನಿಂದ ಸ್ಫೂರ್ತಿ ಪಡೆದು, ಮುಂದಿನ ಚುನಾವಣೆಗೆ ಇಲ್ಲಿನ ಜನರಿಗೆ ಕೇಜ್ರಿವಾಲ್ ಪರ ಮತ ಹಾಕಲು ಚುನಾವಣಾ ಆಯೋಗ ಅವಕಾಶ ನೀಡುತ್ತದೋ, ಅದೂ ಇಲ್ಲ!
ಮೋದಿ ಸರಕಾರವನ್ನು ಹೆಜ್ಜೆಹೆಜ್ಜೆಗೂ ಟೀಕಿಸುತ್ತಿರುವ ಕೇಜ್ರಿವಾಲ್ ಎಂಡ್ ಟೀಂಗೆ ಬೇರೆ ರಾಜ್ಯಗಳಿಗೆ ಸಂಬಂಧವಿಲ್ಲದ ಜಾಹೀರಾತುಗಳನ್ನು ಅಲ್ಲಿನ ಸ್ಥಳೀಯ ಭಾಷೆಗಳಲ್ಲಿ ಪ್ರಕಟಿಸುವುದರಿಂದ ದೆಹಲಿ ಸರಕಾರದ ತೆರಿಗೆ ಹಣ ಪೋಲಾಗುವುದು ಎನ್ನುವ ಅರಿವಿಲ್ಲವೇ?
ಇದಕ್ಕೆ ವ್ಯಯಿಸುವ ಹಣವನ್ನು ಯಾವುದಾದರೂ ದೆಹಲಿಯ ಅಭಿವೃದ್ದಿ ಕೆಲಸಕ್ಕೆ ಬಳಸಿಕೊಳ್ಳಬಹುದಿತ್ತಲ್ಲವೇ ಎನ್ನುವುದು ಅರವಿಂದ್ ಕೇಜ್ರಿವಾಲ್ ಸಾಹೇಬ್ರಿಗೆ ಒಂದು ಕಿವಿಮಾತು.
ಇದೇ ರೀತಿ ಪಕ್ಕದ ಆಂಧ್ರ ಮತ್ತು ತಮಿಳುನಾಡು ಸರಕಾರವೂ ಕನ್ನಡ ಪತ್ರಿಕೆಗಳಲ್ಲಿ ಅಲ್ಲಿನ ಸರಕಾರದ ಜಾಹೀರಾತನ್ನೂ ಪ್ರಕಟಿಸುತ್ತಿವೆ.