ಚೀನಾದ ಸಿಟ್ಟಿಗೆ ಎಷ್ಟೊಂದು ಕಾರಣ, ಪಾಕಿಸ್ತಾನದಂತೆ ಗತಿಗೆಟ್ಟಿಲ್ಲ ಭಾರತ
ಚೀನಾ ದೇಶವು ಬುಡಕ್ಕೇ ಬೆಂಕಿ ಬಿದ್ದಷ್ಟು ಆಕ್ರೋಶದಿಂದ ಭಾರತದ ಜತೆಗೆ ಕದನೋತ್ಸಾಹದಲ್ಲಿ ವರ್ತಿಸುತ್ತಿರುವುದೇಕೆ? ತನ್ನ ದೋಸ್ತ್ ಪಾಕಿಸ್ತಾನವು ದ್ವೇಷಿಸುವುದಕ್ಕಿಂತ ಹೆಚ್ಚಾಗಿ ಹಿಂದೂಸ್ತಾನದ ಮೇಲೆ ಸಿಟ್ಟಾದಂತೆ ಕಾಣುತ್ತಿದೆ. ಇದಕ್ಕೆಲ್ಲ ಕಾರಣವಿದೆ. ಆ ಎಲ್ಲ ಕಾರಣಗಳನ್ನು ಒಂದೊಂದಾಗಿ ಇಲ್ಲಿ ತೆರೆದಿಡಲಾಗಿದೆ.
ಆ ಪೈಕಿ ಮೊದಲನೆಯದು, ಅಮೆರಿಕ ಜತೆಗಿನ ಭಾರತದ ಬಾಂಧವ್ಯ ವೃದ್ಧಿ ಚೀನಾಗೆ ಕಣ್ಣುರಿಯಾಗಿದೆ. ಮಹತ್ವಾಕಾಂಕ್ಷಿ ಚೀನಾಕ್ಕೆ ದಕ್ಷಿಣ ಏಷ್ಯಾದಲ್ಲೇ ತಾನು ದೊಡ್ಡಣ್ಣ ಆಗಬೇಕು. ತನ್ನ ದೇಶದ ವಸ್ತುಗಳನ್ನು ಜಗತ್ತಿನ ಎಲ್ಲೆಡೆ ಮಾರಾಟ ಮಾಡಬೇಕು ಎಂಬುದೇ ಮುಖ್ಯ ಉದ್ದೇಶ.
ಚೀನೀ ಸರಕು ಬಹಿಷ್ಕರಿಸಿದರೆ ಭಾರತಕ್ಕೇ ಹೆಚ್ಚು ಹೊಡೆತ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಚೀನಾ ಬಗ್ಗೆ ಅಂಥ ಒಲವಿಲ್ಲ. ಆ ಕಾರಣಕ್ಕೆ ಭಾರತದೊಂದಿಗಿನ ಸ್ನೇಹವನ್ನು ಗಾಢ ಮಾಡಿಕೊಳ್ಳುವ ಯಾವ ಸಾಧ್ಯತೆಯನ್ನೂ ತಪ್ಪಿಸಿಕೊಳ್ಳುತ್ತಿಲ್ಲ. ಇನ್ನು ಪಾಕ್ ಜತೆಗಿನ ಸಖ್ಯ, ಹಿಂದೂಸ್ತಾನದೊಂದಿಗಿನ ತಿಕ್ಕಾಟ ಎರಡನ್ನೂ ನಿಭಾಯಿಸುತ್ತಿರುವ ಚೀನಾಗೆ ಎಲ್ಲ ವಿಚಾರದಲ್ಲೂ ತನ್ನ ಹಿತಾಸಕ್ತಿಯೇ ಮುಖ್ಯ.
ದಕ್ಷಿಣ ಏಷ್ಯಾದ ಎಲ್ಲ ದೇಶಗಳ ಜತೆಗೂ ಭಾರತ ದೂರವಾಗಿ ಅನಾಥ ಆಗಲಿ ಎಂಬುದು ಚೀನಾದ ಅಜೆಂಡಾ. ಅದಕ್ಕಾಗಿಯೇ ಭೂತಾನ್ ಗೆ ಪತ್ರ ಬರೆದು ಕೆರಳಿಸಲು ಯತ್ನಿಸುತ್ತದೆ. ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಪಾಕಿಸ್ತಾನಕ್ಕೆ ರೈಲು ಸಂಚಾರ ಆರಂಭಿಸಲೂ ಮುಂದಾಗುತ್ತದೆ.
ಟಾರ್ಗೆಟ್ ಚೀನಾː ಕ್ಷಿಪಣಿ ತಯಾರಿಕೆಯಲ್ಲಿ ಭಾರತ
ದಲೈ ಲಾಮಾರ ಉತ್ತರಾಧಿಕಾರಿ ಅರುಣಾಚಲ ಪ್ರದೇಶದವರು ಎಂಬ ಗುಮಾನಿ
ಅರುಣಾಚಲ ಪ್ರದೇಶಕ್ಕೆ ಟಿಬೆಟನ್ ಧರ್ಮಗುರು ದಲೈ ಲಾಮಾ ಭೇಟಿ ಕೊಟ್ಟಿದ್ದಂತೂ ಅರಗಿಸಿಕೊಳ್ಳಲು ಏಕೆ ಚೀನಾಗೆ ಸಾಧ್ಯವಾಗಿಲ್ಲ ಅಂದರೆ, ಲಾಮಾರ ಉತ್ತರಾಧಿಕಾರಿ ಅರುಣಾಚಲ ಮೂಲದವರಾಗಿರುತ್ತಾರೆ ಎಂಬುದು ಚೀನಾದ ಗುಮಾನಿ. ಇನ್ನು ಧರ್ಮಗುರುವಿನ ಬೆಂಬಲಕ್ಕೆ ಭಾರತ ನಿಂತಿದೆ ಎಂಬುದು ಸಿಟ್ಟು ಹೊತ್ತಿ ಉರಿಯಲು ಒಂದು ಕಾರಣ.
ಅಲುಗಾಡುತ್ತಿದೆ ಕಮ್ಯುನಿಸ್ಟ್ ಸಿದ್ಧಾಂತದ ಕೋಟೆ
ಚೀನಾದಲ್ಲಿ ಆಡಳಿತದಲ್ಲಿರುವುದು ಕಮ್ಯುನಿಸ್ಟ್ ಪಕ್ಷ. ಅದರ ನಿಲುವು-ಒಲವಿನ ಬಗ್ಗೆ ಈಗಿನ ತಲೆಮಾರು ಅಷ್ಟೊಂದು ಪ್ರೀತಿ ಹೊಂದಿಲ್ಲ. ಅದಕ್ಕಾಗಿಯೇ ಎಲ್ಲೆಲ್ಲಿ ರಾಜಿ ಸಾಧ್ಯವೋ ಅಲ್ಲೆಲ್ಲ ಆಗಿದೆ. ಅಂದರೆ ಅದೆಲ್ಲ ಪ್ಲಾಸ್ಟಿಕ್ ಸರ್ಜರಿಯಂತೆ ಅಷ್ಟೇ. ಅದರ ಆತ್ಮದಲ್ಲಿ ಇರುವುದು ಕಮ್ಯುನಿಸ್ಟ್ ಸಿದ್ಧಾಂತವೇ.
ಅದನ್ನು ಜೀವಂತವಾಗಿಡಲು ತಾನೇನೋ ಮಾಡುತ್ತಿದ್ದೇನೆ ಎಂಬಂತೆ ಜನರಿಗೆ ತೋರಿಸಿಕೊಳ್ಳುವ ಅನಿವಾರ್ಯ ಅಲ್ಲಿನ ಸರಕಾರಕ್ಕೆ ಇದೆ. ಆ ಕಾರಣಕ್ಕೆ ಈ ಗಡಿ ವಿವಾದ, ಮುನಿಸು ಎಲ್ಲ ತೋರುತ್ತಿದೆ.
ಕಮ್ಯುನಿಸ್ಟ್ ವಾರ್ಷಿಕ ಅಧಿವೇಶನ
ಇನ್ನು ಈ ಅಕ್ಟೋಬರ್ ನಲ್ಲಿ ವಾರ್ಷಿಕ ಅಧಿವೇಶನ ಚೀನಾದಲ್ಲಿದೆ. ಎರಡನೇ ಅವಧಿಗೆ ಕ್ಸಿ ಜಿನ್ ಪಿಂಗ್ ರನ್ನು ಆಯ್ಕೆ ಮಾಡುವ ಇರಾದೆ ಇದೆ. ಚೀನಾಗೆ ಬಾಹ್ಯ ಶಕ್ತಿಗಳಿಂದ ಅಪಾಯ ಇದೆ ಎಂದು ಬಿಂಬಿಸಿ, ಆಯ್ಕೆಯನ್ನು ಸಲೀಸು ಮಾಡಿಕೊಳ್ಳುವ ಹುನ್ನಾರ ಕೂಡ ಇದೆ.
ಒನ್ ಬೆಲ್ಟ್-ಒನ್ ರೋಡ್ ಎಂಬ ಸ್ವಾರ್ಥ ಯೋಜನೆ
ಚೀನಾದ ಒನ್ ಬೆಲ್ಟ್- ಒನ್ ರೋಡ್ ಎಂಬ ಸ್ವಾರ್ಥ ಆಲೋಚನೆಗೆ ಭಾರತ ಸೊಪ್ಪು ಹಾಕಲಿಲ್ಲ. ಕಳೆದ ಮೇನಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಭಾರತ ಭಾಗವಹಿಸಲೇ ಇಲ್ಲ. ಇದನ್ನು ಚೀನಾ ನಿರೀಕ್ಷಿಸಿರಲಿಲ್ಲ.
ಅದರ ಸಮಸ್ಯೆಗಳು ಸಾಕಷ್ಟಿದ್ದರೂ ಕಾಶ್ಮೀರದ ಬಗ್ಗೆ ಮಾತಾಡುವ ಚೀನಾ
ತೈವಾನ್, ಟಿಬೆಟ್, ಕ್ಸಿನ್ ಜಿಯಾಂಗ್ ಹೀಗೆ ವಿವಿಧೆಡೆ ಚೀನಾಗೆ ಸಮಸ್ಯೆಗಳು ಇವೆ. ಆದರೂ ಅದು ಕಾಶ್ಮೀರ ಸಮಸ್ಯೆ ಬಗ್ಗೆ ಮಾತನಾಡುತ್ತದೆ. ಹಾಂಕಾಂಗ್ ನಲ್ಲಿ ಕಮ್ಯುನಿಸ್ಟ್ ಆಡಳಿತ ಹೇರುವ ಯತ್ನ ಮಾಡುವ ಆ ದೇಶ, ಪ್ರಜಾಪ್ರಭುತ್ವದ ಮಾತನಾಡುತ್ತದೆ. ಭಾರತ-ಪಾಕ್ ನ ಮಧ್ಯೆ ಸಂಧಾನಕ್ಕೆ ಯತ್ನಿಸುತ್ತೀನಿ ಎನ್ನುತ್ತದೆ.
ಹಾಂಕಾಂಗ್ ನಲ್ಲಿ ಎರಡ್ಮೂರು ವರ್ಷದ ಹಿಂದೆ ಚೀನಾ ಧೋರಣೆ ವಿರುದ್ಧ ದೊಡ್ಡ ಮಟ್ಟದ ಚಳವಳಿ ಆಯಿತು. ಆಗ ವಿರೋಧ ವ್ಯಕ್ತಪಡಿಸಿದವರನ್ನೆಲ್ಲ ಮುಲಾಜಿಲ್ಲದೆ ಜೈಲಿಗಟ್ಟಿದ್ದು ಇದೇ ಚೀನಾ ಸರಕಾರ.
ದೇಶದ್ರೋಹಿ ಪಟ್ಟ
ಚೀನಾಗೆ ಪಾಕಿಸ್ತಾನ ಥರದ ದೇಶ ಬೇಕು. ಚೀನಾವೇ ಪಾಕ್ ಗೆ ಕಚ್ಚಾವಸ್ತು ಪೂರೈಸಿ, ಕೆಲಸಗಾರರನ್ನು ಕಳಿಸಿ, ವ್ಯಾಪಾರ ಆರಂಭಿಸಲು ಪಾಕಿಸ್ತಾನಕ್ಕೆ ಸಾಲ ಕೊಟ್ಟು, ಅದಕ್ಕೆ ಬಡ್ಡಿಯನ್ನೂ ಪಡೆದು ತಾನು ಉದ್ಧಾರವಾಗುತ್ತಿದೆ. ಈಗ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆ ಮಾಡಿದೆಯಲ್ಲಾ, ಅದಕ್ಕೆ ಪಾಕಿಸ್ತಾನ ಮಿಲಿಟರಿ ಬೆಂಬಲ ಇದೆ. ಅದರ ವಿರುದ್ಧ ಯಾರಾದರೂ ಮಾತನಾಡಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತದೆ.
ಪಾಕಿಸ್ತಾನದಂಥ ದರಿದ್ರ ದೇಶವಲ್ಲ
ಒನ್ ಬೆಲ್ಟ್ ಒನ್ ರೋಡ್, ಎಕನಾಮಿಕ್ ಕಾರಿಡಾರ್ ಮಣ್ಣು-ಮಸಿ ಏನು ಮಾಡಿದರೂ ಅದು ಚೀನಾ ತನ್ನ ದೇಶದ ಆರ್ಥಿಕ ಹಿಂಜರಿತದ ಸನ್ನಿವೇಶಕ್ಕೆ ಹುಡುಕಿಕೊಳ್ಳುತ್ತಿರುವ ಪರಿಹಾರಗಳೇ ವಿನಾ ಲೋಕ ಕಲ್ಯಾಣಕ್ಕೇನಲ್ಲ. ಚೀನಾಗೆ ತನ್ನ ದೇಶದ ಕಾರ್ಖಾನೆಗಳು ಉತ್ಪಾದನೆ ನಿಲ್ಲಿಸುವುದನ್ನು ಸಹಿಸಲು ಆಗಲ್ಲ. ಅದರ ಉದ್ದೇಶ ಬೆಂಬಲಿಸಲು ಭಾರತವು ಏನೆಂದು ಕೇಳುವವರಿಲ್ಲದ ಪಾಕಿಸ್ತಾನದಂಥ ದರಿದ್ರ ದೇಶವಲ್ಲ.