ಸಲಿಂಗಕಾಮ ಸಕ್ರಮ ತೀರ್ಪು ಮತ್ತು ಬಿಜೆಪಿಯ ಮೌನ: ಏನೀ ಸಂಬಂಧ?
ನವದೆಹಲಿ, ಸೆಪ್ಟೆಂಬರ್ 06: ಸಲಿಂಗಕಾಮವನ್ನು ಸಕ್ರಮಗೊಳಿಸಿ ಇಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದೊಮದ ಐತಿಹಾಸಿಕ ತೀರ್ಪು ಎಂದು ಇಡೀಯ ದೇಶವೇ ಸಂಭ್ರಮಿಸುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿಯಂತೂ ತೀರ್ಪಿನ ಬಗ್ಗೆ ಅದ್ಭುತವಾತ ಪ್ರತಿಕ್ರಿಯೆಗಳು ಬರುತ್ತಿವೆ. ಸ್ವತಃ ವಿಶ್ವಸಂಸ್ಥೆ ಸುಪ್ರೀಂನ ಈ ಐತಿಹಾಸಿಕ ತೀರ್ಪಿಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದೆ. ಆದರೆ ದೇಶದ ಆಡಳಿತರೂಢ ಪಕ್ಷ ಬಿಜೆಪಿ ಈ ಬಗ್ಗೆ ಒಂದೇ ಒಂದು ಹೇಳಿಕೆಯನ್ನೂ ನೀಡಿಲ್ಲ.
ಹೌದು, ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಸದಾ ಮುಂದಿರುವ ಬಿಜೆಪಿಯ ಮುಖ್ಯವಾಹಿನಿ ಮುಖಂಡರು ಯಾರೂ ಈ ಐತಿಹಾಸಿಕ ತೀರ್ಪಿನ ಬಗ್ಗೆ ಒಂದೇ ಒಂದು ಟ್ವೀಟ್ ಮಾಡಿಲ್ಲ, ಮಾಧ್ಯಮಗಳಿಗೆ ಹೇಳಿಕೆಗಳನ್ನೂ ನೀಡಿಲ್ಲ.
ಮೋದಿ ಸೇರಿದಂತೆ ಬಿಜೆಪಿಯ ಮುಖ್ಯ ನಾಯಕರು ಯಾರೇ ಆಗಲಿ ಸಣ್ಣ ವಿಷಯಗಳನ್ನೂ ಟ್ವಿಟ್ಟರ್ ಮೂಲಕ ಹಂಚಿಕೊಳ್ಳವುದರಲ್ಲಿ ಶರವೇಗದ ಸರದಾರರು ಆದರೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದರೂ ಸಹ ಯಾವೊಬ್ಬ ನಾಯಕರೂ ಒಂದೇ ಒಂದು ಟ್ವೀಟ್ ಮಾಡಿಲ್ಲ.
ವೋಟ್ ಬ್ಯಾಂಕ್ ಕಳೆದುಕೊಳ್ಳುವ ಭೀತಿ
ಅಭಿವೃದ್ಧಿಪರ ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಬಿಜೆಪಿ ಆಂತರ್ಯದಲ್ಲಿ ಸಂಪ್ರದಾಯವಾದಿಯೇ ಎಂಬುದನ್ನು ಇಂದಿನ ತನ್ನ ನಡವಳಿಕೆಯಿಂದ ಜಗಜ್ಜಾಹೀರು ಮಾಡುತ್ತಿದೆ ಎನಿಸುತ್ತಿದೆ. ಸಲಿಂಗಕಾಮವು ಸಂಪ್ರದಾಯವಾದಿಗಳು ಒಪ್ಪದ ಕಾರ್ಯ. ಮೇಲ್ಜಾತಿಯ ಮುದ್ದಿನ ಪಕ್ಷ ಎನಿಸಿಕೊಂಡಿರುವ ಬಿಜೆಪಿ ಸಲಿಂಗಕಾಮವನ್ನು ಬೆಂಬಲಿಸಿದಲ್ಲಿ ತಮ್ಮ ಬೆನ್ನಿಗೆ ನಿಂತಿರುವ ಸಂಪ್ರಾಯವಾದಿಗಳ, ಮೇಲ್ಜಾತಿಯ ಮತಗಳನ್ನು ಕಳೆದುಕೊಳ್ಳುವ ಭಯ ಪಕ್ಷವನ್ನು ಕಾಡಿರಬಹುದು.
ಸಂಸತ್ನಲ್ಲಿ ವಿರೋಧಿಸಿತ್ತು ಬಿಜೆಪಿ
ಶಶಿತರೂರ್ ಒಮ್ಮೆ ಲೋಕಸಭೆಯಲ್ಲಿ ಈ ವಿಷಯವನ್ನು ಚರ್ಚೆಗೆತ್ತಿಕೊಂಡಿದ್ದಾಗ ಬಿಜೆಪಿ ಭಾರಿ ವಿರೋಧ ಮಾಡಿತ್ತು. ತರೂರ್ ಅವರು ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳದಂತೆ ಪ್ರತಿಭಟನೆ ಮಾಡಿತ್ತು. ಆ ನಂತರ ಅವರು ಸದನಕ್ಕೆ ಬಿಲ್ ಹಾಕಿದರಾದರೂ ಬಿಜೆಪಿ ನೇತೃತ್ವದ ಎನ್ಡಿಎ ಇದರ ವಿರುದ್ಧ ಮತ ಚಲಾಯಿಸಿ ಬಿಲ್ ಪಾಸ್ ಆಗುವುದನ್ನು ತಡೆಯಿತು.
ಯೋಗಿ ಆದಿತ್ಯನಾಥ ಭಾರಿ ವಿರೋಧ
ಈಗಿನ ಬಿಜೆಪಿಯ ಮುಖ್ಯ ಮುಖಗಳಲ್ಲಿ ಒಬ್ಬರಾದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸೆಕ್ಷನ್ 377 ತೆಗೆಯಲು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಇದೊಂದು ಅನೈಸರ್ಗಿಕ ಕ್ರಿಯೆ ಹಾಗೂ ಹಿಂದೂ ಸಂಪ್ರದಾಯ ವಿರೋಧಿ ಎಂದು ಅವರು ಆಕ್ರೊಶ ವ್ಯಕ್ತಪಡಿಸಿದ್ದರು. ಈಗಿನ ಗೃಹ ಮಂತ್ರಿ ರಾಜನಾಥ್ ಸಿಂಗ್ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಬಿಜೆಪಿ ಮಾತೃ ಸಂಸ್ಥೆಯ ವಿರೋಧ
ಬಿಜೆಪಿಯ ಮಾತೃ ಸಂಸ್ಥೆ ಆರ್ಎಸ್ಎಸ್, ಇಂತಹಾ ಸಂಪ್ರದಾಯ ವಿರೋಧಿ ಕೃತ್ಯಗಳಿಗೆ ಸದಾ ವಿರೋಧಿಯೇ. ಹಲವಾರು ಬಾರಿ ಹಿಂದೂ ಸಂಘಟನೆಗಳ ಮುಖಂಡರು ಸಲಿಂಗಕಾಮತ್ವವನ್ನು ವಿರೋಧಿಸಿದ್ದಾರೆ. ಈಗ ಬಿಜೆಪಿ ಏನಾದರೂ ಸಲಿಂಗಕಾಮಿ ಸಕ್ರಮ ತೀರ್ಪನ್ನು ಸ್ವಾಗತಿಸಿದೆ ಆರ್ಎಸ್ಎಸ್ನ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ.