ಪೌರತ್ವ ಮಸೂದೆ ವಿರುದ್ಧ ಅಸ್ಸಾಂನಲ್ಲಿ ಪ್ರತಿಭಟನೆ ಹೆಚ್ಚು, ಕಾರಣವೇನು?
Recommended Video
'ಜನಪ್ರಿಯ ಸರ್ಕಾರ' ಬಿಜೆಪಿ ಪೌರತ್ವ ಮಸೂದೆ ಮಂಡಿಸಿ ದೇಶದೆಲ್ಲೆಡೆ ಚರ್ಚೆ ಹುಟ್ಟುಹಾಕಿದೆ. ಬಿಜೆಪಿಯ ಬಹುತೇಕ ಯೋಜನೆ, ಕಾಯ್ದೆಗಳಂತೆ ಈ ಮಸೂದೆಯ ಕುರಿತಾಗಿಯೂ ಅಭಿಪ್ರಾಯದ ಆಧಾರದಲ್ಲಿ ದೇಶ ಇಬ್ಭಾಗವಾಗಿದೆ. ಕೆಲವರು ಮಸೂದೆಯ ಪರವಾಗಿದ್ದರೆ ಕೆಲವರು ವಿರುದ್ಧವಾಗಿದ್ದಾರೆ. ಚರ್ಚೆ ಕಾವೇರಿದೆ.
ಒಂದು ವರ್ಗ, ಮಸೂದೆ ಅಭಿವೃದ್ಧಿಯ ಕಾರಣಕ್ಕೆ ಅವಶ್ಯಕವೆಂದರೆ ಮತ್ತೊಂದು ವರ್ಗ ಮಸೂದೆಯನ್ನು ಅಸಾಂವಿಧಾನಿಕ, ಅಮಾನವೀಯ, ಭಾರತದ ಮೂಲ ಆದರ್ಶವನ್ನು ಬುಡಮೇಲು ಮಾಡುವ ಮಸೂದೆ ಎಂದು ಹೀಗಳೆಯುತ್ತಿದೆ.
ವಿಪಕ್ಷಗಳು ಮಸೂದೆಯನ್ನು ಕಟು ಶಬ್ದದಲ್ಲಿ ಟೀಕಿಸುತ್ತಿದೆ. ಆದರೆ ಸಂಖ್ಯೆಯಲ್ಲಿ ಕಡಿಮೆ ಇರುವ ಅವರು ಟೀಕಿಸುವುದು ಬಿಟ್ಟರೆ ಮತ್ತೇನನ್ನೂ ಮಾಡಲು ಅಸಾಹಕರು ಎಂಬುದು ದೇಶಕ್ಕೆ ಗೊತ್ತಿದೆ. ರಾಹುಲ್ ಗಾಂಧಿ ಟ್ವೀಟ್ ಮೂಲಕ ಸಿಟ್ಟು ಹೊರಹಾಕಿದ್ದು ಬಿಟ್ಟರೆ ಸಂಸತ್ನಲ್ಲಿ ತುಟಿ ಬಿಚ್ಚಿಲ್ಲ.
ಆದರೆ ದೇಶದ ಬಹುತೇಕ ಪ್ರಮುಖ ನಗರಗಳಲ್ಲಿ ಪೌರತ್ವ ಮಸೂದೆ (ಸಿಎಬಿ) ಕುರಿತು ಪ್ರತಿಭಟನೆಗಳು ನಡೆಯುತ್ತಿವೆ. ಸಪ್ತ ಸಹೋದರಿಯರು ಎಂದೇ ಕರೆಯಲಾಗುವ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಭಾರಿ ಜೋರಾಗಿಯೇ ಇದೆ. ಹಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ವಿಶೇಷವಾಗಿ ಅಸ್ಸಾಂ ನಲ್ಲಿ ಪ್ರತಿಭಟನೆ ತೀವ್ರ ಸ್ವರೂಪದಲ್ಲಿ ನಡೆಯುತ್ತಿದೆ.
ಈಶಾನ್ಯ ರಾಜ್ಯಗಳಲ್ಲಿಯೇ ಸಿಎಬಿ ಬಗ್ಗೆ ಪ್ರತಿಭಟನೆಗಳು ಹೆಚ್ಚಾಗಲು ಕಾರಣವೂ ಇದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಕೆಲವು ರಾಜ್ಯಗಳು ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿವೆ. ಈಶಾನ್ಯ ರಾಜ್ಯಗಳ ಪಟ್ಟಿಯಲ್ಲಿಲ್ಲದ ಪಶ್ಚಿಮ ಬಂಗಾಳವೂ ಬಾಂಗ್ಲಾದೊಂದಿಗೆ ಗಡಿ ಹಂಚಿಕೊಂಡಿದೆ. ಬಾಂಗ್ಲಾದ ವಲಸಿಗರು ಈಶಾನ್ಯ ರಾಜ್ಯಗಳಲ್ಲಿಯೇ ಅತಿ ಹೆಚ್ಚು ನೆಲೆಸಿದ್ದಾರೆ. ಅಸ್ಸಾಂ ನಲ್ಲಿಯಂತೂ ತುಸು ಹೆಚ್ಚೇ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ.
ಬಾಂಗ್ಲಾ ವಲಸಿಗರ ಹೊರಗಟ್ಟುವ ಕಾನೂನು ಮೊದಲೇ ಇತ್ತು
ಅಸ್ಸಾಂ ರಾಜ್ಯದಲ್ಲಿ ಬಂಗ್ಲಾ ವಲಸಿಗರ ಪರ-ವಿರೋಧ ಗಲಾಟೆ ಮೊದಲಿನಿಂದಲೂ ನಡೆಯುತ್ತಿದೆ. 1985 ರಲ್ಲಿ ಅಸ್ಸಾಂ ರಾಜ್ಯ ಉದಯವಾದಾಗಲೇ 1971 ರ ನಂತರ ಅಸ್ಸಾಂ ಗೆ ಬಂದ ಬಾಂಗ್ಲಾ ಅಕ್ರಮವ ಅಕ್ರಮ ವಲಸಿಗರನ್ನು ತಡೆಯುವ ಕುರಿತು ಕಾನೂನು ರೂಪಿಸಲಾಗಿತ್ತು. ಆದರೆ ಕಾನೂನು ಸೂಕ್ತವಾಗಿ ಪಾಲನೆ ಆಗಿರಲಿಲ್ಲ.
ವಲಸಿಗರಿಗೆ ಅವಕಾಶ ನೀಡಲಾಗಿತ್ತು
ನಂತರ ತೀರಾ ಇತ್ತೀಚೆಗೆ 2015 ರಲ್ಲಿ ನಿಯಮಾವಳಿಗೆ ತಿದ್ದುಪಡಿಗಳನ್ನು ಮಾಡಿ, 2014 ರ ಮುಂಚೆ ರಾಜ್ಯಕ್ಕೆ ಬಂದು ನೆಲೆಸಿರುವ ಬಾಂಗ್ಲಾ ಅಕ್ರಮ ವಲಸಿಗರು ಇಲ್ಲಿಯೇ ನೆಲೆಸಬಹುದು ಎನ್ನಲಾಯಿತು. ಆದರೆ ಈಗ ಕೇಂದ್ರ ಮಂಡಿಸಿರುವ ಪೌರತ್ವ ಮಸೂದೆ ಜಾರಿಯಾದಲ್ಲಿ ಅಸ್ಸಾಂನಲ್ಲಿ ನೆಮ್ಮದಿಯ ಜೀವನ ಮಾಡುತ್ತಿರುವ ಬಾಂಗ್ಲಾ ಮುಸ್ಲಿಂ ವಲಸಿಗರು ಗಡಿಯಾಚೆ ತೆರಳಬೇಕಾಗುತ್ತದೆ.
ಹಲವು ವರ್ಷಗಳಿಂದ ಇಲ್ಲಿಯೇ ನೆಲೆಸಿರುವ ಬಾಂಗ್ಲಾ ವಲಸಿಗರು
ದಶಕಗಳಿಂದ ಭಾರತದಲ್ಲಿಯೇ ನೆಲೆಸಿ ಇಲ್ಲಿಯ ಕಾನೂನಿಗೆ ಬದ್ಧವಾಗಿರುವ ಅಸ್ಸಾಂ ಸೇರಿದಂತೆ ಪಶ್ಚಿಮ ಬಂಗಾಳ, ನಾಗಾಲ್ಯಾಂಡ್, ಮಿಜೋರಂ, ಮಣಿಪುರ ಇನ್ನೂ ಕೆಲವು ರಾಜ್ಯಗಳಲ್ಲಿನ ಬಾಂಗ್ಲಾದೇಶದ ಮುಸ್ಲೀಮರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಭವಿಷ್ಯದ ಕುರಿತು ಅವರ ಆತಂಕ ಪ್ರತಿಭಟನೆಗೆ ಇಳಿಯುವಂತೆ ಮಾಡಿದೆ.
ಸಂಸ್ಕೃತಿ ಹೇರಿಕೆಯ ಭಯ ಕಾಡುತ್ತಿದೆ
ಈಶಾನ್ಯ ರಾಜ್ಯಗಳ ಜನರು ಬಹುತೇಕ ಬುಡಕಟ್ಟು, ಕಾಡು ನಂಬಿದ ಜನ. ಈಗ ಮುಸ್ಲಿಂ ಹೊರತುಪಡಿಸಿ ಉಳಿದ ಧರ್ಮದವರಿಗೆ ಭಾರತಕ್ಕೆ ಬರಲು, ಹಾಗೂ ಇಲ್ಲಿನ ಪೌರತ್ವ ಪಡೆಯಲು ಅವಕಾಶ ನೀಡಿರುವುದೂ ಸಹ ಬುಡಕಟ್ಟು ಜನರನ್ನು ಚಿಂತೆಗೀಡು ಮಾಡಿದೆ.
ಬಾಂಗ್ಲಾ ಹಿಂದೂಗಳನ್ನು ತುಂಬುವ ಹುನ್ನಾರ
ಸರ್ವಧರ್ಮದವರೂ ಇರುವ ಅದರಲ್ಲಿಯೂ ಬುಡಕಟ್ಟು ಜನರೇ ಹೆಚ್ಚಿಗಿರುವ ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದೇಶದ ಹಿಂದೂಗಳಿಂದ ತುಂಬುವ ಸಲುವಾಗಿ ಈ ಮಸೂದೆಯನ್ನು ತರಲಾಗುತ್ತಿದೆ ಎಂಬುದು ಸ್ಥಳೀಯರ ಆತಂಕ. ಇದನ್ನು ಸಾಂಸ್ಕೃತಿಕ ಹೇರಿಕೆ, ಧರ್ಮದ ಹೇರಿಕೆಯ ರೂಪವಾಗಿಯೂ ಅವರು ಕಾಣುತ್ತಿದ್ದಾರೆ. ಹಾಗಾಗಿ ಮಸೂದೆ ವಿರುಧ್ಧವಾಗಿ ಮುಸ್ಲಿಂ ಮಾತ್ರವಲ್ಲದೆ ಹಿಂದೂ ಮತ್ತು ಇತರ ಧರ್ಮದವರೂ ಪ್ರತಿಭಟನೆ ಮಾಡುತ್ತಿದ್ದಾರೆ.
ಕೆಲವು ಈಶಾನ್ಯ ರಾಜ್ಯಗಳಲ್ಲಿ ಅನ್ವಯವಾಗುವುದಿಲ್ಲ
'ಪೌರತ್ವ ಮಸೂದೆ' ಈಶಾನ್ಯದ ಎಲ್ಲ ರಾಜ್ಯಗಳಿಗೂ ಅನ್ವಯ ಆಗುವುದಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಕೆಲವಕ್ಕೆ ಕೆಲವು ರೀತಿಯ ವಿಶೇಷ ಸ್ಥಾನಮಾನ ಇರುವ ಕಾರಣ ಈಶಾನ್ಯ ರಾಜ್ಯಗಳ ಕೆಲವು ಭಾಗಗಳು ಮಾತ್ರವೇ ಪೌರತ್ವ ಮಸೂದೆಯ ಮಿತಿಯೊಳಗೆ ಬರುತ್ತವೆ.
ಪಾಕ್, ಬಾಂಗ್ಲಾ, ಅಪ್ಘಾನಿಸ್ತಾನ ಮುಸ್ಲೀಮರಿಗೆ ನಿರ್ಬಂಧ
ಮಸೂದೆ ಅಂಗೀಕಾರವಾದರೆ ಬಾಂಗ್ಲಾದೇಶ, ಅಪ್ಘಾನಿಸ್ತಾನ, ಪಾಕಿಸ್ತಾನದಿಂದ ಬಂದಿರುವ ಮುಸ್ಲಿಂ ವಲಸಿಗರು ಭಾರತ ಬಿಟ್ಟು ಹೊರಹೋಗಬೇಕಾಗುತ್ತದೆ. ಆದರೆ ಈ ನಿಯಮ ಹಿಂದೂ, ಕ್ರೈಸ್ತ, ಜೈನ, ಬೌದ್ಧ, ಪಾರ್ಸಿ, ಸಿಖ್ ಧರ್ಮಗಳ ಅಕ್ರಮ ವಲಸಿಗರಿಗೆ ಅನ್ವಯವಾಗುವುದಿಲ್ಲ. ಈ ಧರ್ಮಕ್ಕೆ ಸೇರಿದ ಹೊಸ ವಲಸಿಗರು ಭಾರತಕ್ಕೆ ಬಂದು ಇಲ್ಲಿನ ನಾಗರೀಕತೆಯನ್ನು ಕೆಲವು ವರ್ಷಗಳ ಒಳಗಾಗಿ ಪಡೆಯಬಹುದಾಗಿದೆ.