ಮುಸ್ಲಿಮರೂ ಸೇರಿ ಭಾರತದಲ್ಲಿ ಹುಟ್ಟಿದವರೆಲ್ಲ ಹಿಂದೂಗಳು: ಭಾಗವತ್
ಮಧ್ಯಪ್ರದೇಶ, ಫೆಬ್ರವರಿ 9: ಭಾರತದಲ್ಲಿರುವ ಮತ್ತು ಇಲ್ಲಿನ ಸಂಪ್ರದಾಯವನ್ನು ಗೌರವಿಸುವ ಎಲ್ಲರೂ ಹಿಂದೂಗಳು ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಹೇಳಿದ್ದಾರೆ. ಮುಸ್ಲಿಮರು ಬೇರೆ ರೀತಿ ಪ್ರಾರ್ಥನೆ ಮಾಡಬಹುದು. ಆದರೆ ಅವರೆಲ್ಲ ರಾಷ್ಟ್ರೀಯತೆಯಿಂದ ಹಿಂದೂಗಳೇ ಎಂದಿದ್ದಾರೆ.
ಮಧ್ಯಪ್ರದೇಶದಲ್ಲಿ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಗತ್ತಿನಾದ್ಯಂತ ಭಾರತೀಯ ಸಮಾಜದವರು ಹಿಂದೂ ಅಂತಲೇ ಪರಿಚಿತ. ಎಲ್ಲ ಭಾರತೀಯರು ಹಿಂದೂಗಳು ಮತ್ತು ನಾವೆಲ್ಲರೂ ಒಂದು ಎಂದಿದ್ದಾರೆ. ಹಿಂದೂಗಳು ಜಾಗೃತರಾಗಿರಬೇಕು. ಜಗತ್ತಿನಾದ್ಯಂತ ಭಾರತವು ವಿಶ್ವ ಗುರು ಆಗುತ್ತದೆ ಎನ್ನುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ನಾವು ದೇಶದ ಉತ್ತರದಾಯಿತ್ವ ವಹಿಸಿಕೊಳ್ಳಬೇಕು ಎಂದರು.[ಹಿಂದೂಗಳು ಹೆಚ್ಚು ಮಕ್ಕಳು ಮಾಡಬೇಕು: ಗಿರಿರಾಜ್ ಸಿಂಗ್]
ಹಿಂದೂಗಳು ಒಗ್ಗಟ್ಟಿನಿಂದ ಇರಬೇಕು. ಭಿನ್ನಾಭಿಪ್ರಾಯ ತೊರೆಯಬೇಕು. "ನಮ್ಮ ಜಾತಿ, ಉಪ ಜಾತಿ, ಆಚರಣೆ ಮತ್ತು ಭಾಷೆಗಳು ಬೇರೆ ಇರಬಹುದು. ಆದರೆ ನಮ್ಮ ಹೃದಯದ ಭಾಷೆ ಒಂದೇ. ಬದುಕಿನಲ್ಲಿ ವಿವಿಧತೆ ಇದ್ದರೆ ಸುಂದರವಾಗಿರುತ್ತದೆ. ಆದರೆ ಒಗ್ಗಟ್ಟು ಕೂಡ ಇರಬೇಕು ಎಂದು ಭಾಗವತ್ ಹೇಳಿದರು.
ಹೊರಗಿನ ಜಗತ್ತು ಒಂದಾಗುತ್ತಿದೆ. ಆದರೆ ದೇಶದಲ್ಲಿ ಅಂಥ ವಾತಾವರಣ ಇಲ್ಲ ಎಂದು ಅವರು ಹೇಳಿದರು.