ರಾಹುಲ್ ಸ್ಥಾನ ತುಂಬಬಲ್ಲ ಸಮರ್ಥ ಸಂಭಾವ್ಯರ ಪಟ್ಟಿ ಬಹಿರಂಗ
ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ತೊರೆಯುವ ನನ್ನ ನಿರ್ಧಾರ ಅಚಲವಾಗಿದೆ, ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುಡುಗುತ್ತಿದ್ದಂತೆ ಹಿರಿಯ ಕಾಂಗ್ರೆಸ್ಸಿಗರು ಅಕ್ಷರಶಃ ಬೆಚ್ಚಿದ್ದಾರೆ. ವಿಧಿಯಿಲ್ಲದೆ, ರಾಹುಲ್ ರಾಜೀನಾಮೆ ಅಂಗೀಕರಿಸಬೇಕಾದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಟ್ವಿಟ್ಟರಲ್ಲಿ ರಾಜೀನಾಮೆ ಪತ್ರ ಬಹಿರಂಗಪಡಿಸಿ, ಎಐಸಿಸಿ ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ಘೋಷಿಸಿದ್ದಾರೆ.
ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬಂದ ಬಳಿಕ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದರಿಂದ ರಾಹುಲ್ ಗಾಂಧಿ ನೊಂದಿದ್ದರು. ಮೇ 25ರಂದು ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ತಮ್ಮ ನಿರ್ಧಾರವನ್ನು ಅವರು ಪ್ರಕಟಿಸಿದ್ದರೂ, ಸಭೆ ಒಪ್ಪಿರಲಿಲ್ಲ.
ಇಡೀ ದೇಶದಾದ್ಯಂತ ಎಲ್ಲ ಹಂತಗಳಲ್ಲಿಯೂ ಬದಲಾವಣೆಗಳನ್ನು ಜಾರಿಗೆ ತರುವಂತೆ ರಾಹುಲ್ ಸೂಚಿಸಿದ್ದಾರೆ. ಸೋನಿಯಾ ಗಾಂಧಿ ಅವರು ಅನಾರೋಗ್ಯದ ಕಾರಣ ಅಧ್ಯಕ್ಷ ಸ್ಥಾನ ಪಡೆಯುವುದಿಲ್ಲ. ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಈ ರೇಸಿನಿಂದ ಹೊರಗಿಡುವಂತೆ ರಾಹುಲ್ ಗಾಂಧಿ ಸೂಚಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರನ್ನು ಮುಂದುವರೆಸಿ, ಕಾರ್ಯಾಧ್ಯಕ್ಷರಾಗಿ ಮತ್ತೊಬ್ಬರಿಗೆ ಹೊಣೆ ನೀಡುವುದು ಹೈಕಮಾಂಡ್ ನ ನಿರ್ಧಾರವಾಗಿತ್ತು. ಆದರೆ, ಇದಕ್ಕೆ ರಾಹುಲ್ ಒಪ್ಪಲಿಲ್ಲ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂತು ಅಚ್ಚರಿಯ ಹೆಸರು!
ಈ ನಡುವೆ ಗಾಂಧಿ-ನೆಹರು ಮನೆತನಯೇತರ ಹಿರಿಯ ಮುಖಂಡರೊಬ್ಬರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವ ಪ್ರಯತ್ನ ನಡೆದಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರಿಂದ ಲೋಕಸಭಾ ನಾಯಕನ ಸ್ಥಾನಕ್ಕೆ ಅಧೀರ್ ರಂಜನ್ ಚೌಧುರಿ ಅವರನ್ನು ಆಯ್ಕೆ ಮಾಡಿ ಅಚ್ಚರಿ ಮೂಡಿಸಲಾಗಿದೆ. ಈಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತುಂಬಬಲ್ಲ ಸಮರ್ಥ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.
ಹೊಸ ಅಧ್ಯಕ್ಷ ಅಥವಾ ಕಾರ್ಯಾಧ್ಯಕ್ಷ ಯಾರು
ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಕುರಿತಂತೆ ಪಕ್ಷದ ಕಾರ್ಯತಂತ್ರ ಕುರಿತು ಹಿರಿಯ ನಾಯಕ ಎಕೆ ಎಂಟನಿ ನೇತೃತ್ವದಲ್ಲಿ ಅನೌಪಚಾರಿಕ ಸಭೆ ನಡೆದ ಬಳಿಕ ರಾಹುಲ್ ಅವರ ಅಧ್ಯಕ್ಷ ಸ್ಥಾನದ ಬಗ್ಗೆ ಹಬ್ಬಿದ ಸುದ್ದಿಗೆ ರಣದೀಪ್ ಅವರು ಪ್ರತಿಕ್ರಿಯಿಸಿ, ರಾಹುಲ್ ಅವರೆ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದಿದ್ದರು. ಆದರೆ, ಈಗ ರಾಹುಲ್ ಸ್ಥಾನಕ್ಕೆ ಅಚ್ಚರಿಯ ಹೆಸರು ಕೇಳಿ ಬಂದಿದೆ. ಹೊಸ ಅಧ್ಯಕ್ಷ ಅಥವಾ ಕಾರ್ಯಾಧ್ಯಕ್ಷ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.
ಅಶೋಕ್ ಗೆಹ್ಲೋಟ್
68 ವರ್ಷ ವಯಸ್ಸಿನ ಗೆಹ್ಲೋಟ್ ಅವರು ಅಧ್ಯಕ್ಷ ಸ್ಥಾನದ ರೇಸಿನಲ್ಲಿ 'ಡಾರ್ಕ್ ಹಾರ್ಸ್' ಎಂದು ಪರಿಗಣಿಸಲಾಗಿದೆ. ಸದ್ಯ ರಾಹುಲ್ ಅವರಿಗೆ ಅಶೋಕ್ ಗೆಹ್ಲೋಟ್ ಮೇಲೆ ಸಿಟ್ಟಿದ್ದರೂ, ಸಂಘಟನೆ ವಿಚಾರದಲ್ಲಿ ಗೆಹ್ಲೋಟ್ ಅಗ್ರಗಣ್ಯರಾಗಿದ್ದು, ಅನುಭವವೇ ಅವರಿಗೆ ಶ್ರೀರಕ್ಷೆಯಾಗಿ ಉನ್ನತ ಹುದ್ದೆಯತ್ತ ಕರೆದೊಯ್ಯಬಹುದು ಎಂದು ನಂಬಲಾಗಿದೆ.
ಮಲ್ಲಿಕಾರ್ಜುನ ಖರ್ಗೆ
ಕರ್ನಾಟಕದ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಡಾ. ಉಮೇಶ್ ಜಾಧವ್ ಅವರ ವಿರುದ್ಧ ಸೋಲು ಕಂಡಿದ್ದಾರೆ. ಆದರೆ, ಕಳೆದ ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸುಶೀಲ್ ಕುಮಾರ್ ಶಿಂಧೆ
ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಶಿಂಧೆ ಅವರ ಹೆಸರು ಮುಂಚೂಣಿಯಲ್ಲಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರು ಸಂಭಾವ್ಯ ಪಟ್ಟಿಯಲ್ಲಿದ್ದರೂ ರಾಹುಲ್ ಗಾಂಧಿ ಅವರು ಈ ಬಾರಿ ಗಾಂಧಿ-ನೆಹರೂ ಮನೆತನ ಬಿಟ್ಟು ಬೇರೆಯವರನ್ನು ಕಾಂಗ್ರೆಸ್ ಅಧ್ಯಕ್ಷರಾಗಲಿ ಎಂದಿದ್ದಾರೆ.
ಕೆಸಿ ವೇಣುಗೋಪಾಲ್
ಕರ್ನಾಟಕದ ಉಸ್ತುವಾರಿ, ಮಾಜಿ ಸಂಸದ ಕೆಸಿ ಗೋಪಾಲ್ ಅವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ, ಸಂಘಟನೆ, ಸಂಧಾನ ಚತುರ ಎಂಬ ಹೆಸರು ಪಡೆದಿರುವ ವೇಣುಗೋಪಾಲ್ ಅವರು ರಾಹುಲ್ ಅವರನ್ನು ಕೇರಳಕ್ಕೆ ಕರೆ ತಂದು ಗೆಲ್ಲಿಸಿಕೊಟ್ಟಿದ್ದಾರೆ.
ಸಚಿನ್ ಪೈಲಟ್
ರಾಜಸ್ಥಾನ ಸರ್ಕಾರದ ಉಪ ಮುಖ್ಯಮಂತ್ರಿ, ರಾಹುಲ್ ಗಾಂಧಿ ಆಪ್ತವಲಯದ ಯುವ ನಾಯಕ ಸಚಿನ್ ಪೈಲಟ್ ಅವರನ್ನು ಆಯ್ಕೆ ಮಾಡಿ ಅಚ್ಚರಿ ಮೂಡಿಸಬಹುದು.
ಶಶಿ ತರೂರ್
ತಿರುವನಂತಪುರಂ ಸಂಸದ ಶಶಿ ತರೂರ್ ಅವರನ್ನು ಲೋಕಸಭೆ ವಿಪಕ್ಷ ನಾಯಕ ಸ್ಥಾನಕ್ಕೆ ಪರಿಗಣಿಸಲಾಗಿತ್ತು. ಈಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆಯೂ ಇದೆ.
ಕ್ಯಾ. ಅಮರೀಂದರ್ ಸಿಂಗ್
ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಅವರು ಪಂಜಾಬ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಉನ್ನತ ಹುದ್ದೆ ಪಡೆಯುವ ಸಂಭಾವ್ಯ ಪಟ್ಟಿಯಲ್ಲಿದ್ದಾರೆ.
ಮೋತಿಲಾಲ್ ವೋಹ್ರಾ
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮೋತಿಲಾಲ್ ವೋಹ್ರಾ ಅವರು ಹಂಗಾಮಿ ಅಧ್ಯಕ್ಷರಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಸುದ್ದಿಯನ್ನು ಅಲ್ಲಗೆಳೆಯಲಾಯಿತು. ಈಗ ಅಧ್ಯಕ್ಷ ಸ್ಥಾನಕ್ಕೆ ಹೆಸರು ಕೇಳಿ ಬಂದಿದೆ.
ಎಕೆ ಅಂಟನಿ
ಗಾಂಧಿ ಪರಿವಾರದ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಮಾಜಿ ರಕ್ಷಣಾ ಸಚಿವ ಎಕೆ ಅಂಟನಿ ಅವರು ಈಗಾಗಲೇ ಅನೌಪಚಾರಿಕ ಸಭೆಗಳನ್ನು ನಡೆಸಿ, ಮೆಚ್ಚುಗೆ ಪಡೆದಿದ್ದಾರೆ.