ಹಿಂದೂ ಧರ್ಮಕ್ಕೆ ಬೆದರಿಕೆ ಇದೆ ಎಂಬುದು ಕೇವಲ ಕಾಲ್ಪನಿಕ: ಕೇಂದ್ರ
ನವದೆಹಲಿ, ಸೆಪ್ಟೆಂಬರ್ 21: ಹಿಂದೂ ಧರ್ಮಕ್ಕೆ ಯಾವುದೇ ಬೆದರಿಕೆ ಇಲ್ಲ, ಇಂತಹ ಮಾತುಗಳೆಲ್ಲ ಕೇವಲ ಕಾಲ್ಪನಿಕವಾದದ್ದು ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಿಳಿಸಿದೆ.
ಇತ್ತೀಚೆಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಕೇಂದ್ರ ಸರ್ಕಾರ ಈ ಪ್ರತಿಕ್ರಿಯೆ ನೀಡಿದ್ದು, ಹಿಂದೂ ಧರ್ಮ ಅಪಾಯದಲ್ಲಿದೆ ಎಂಬ ಹೇಳಿಕೆಯನ್ನು ತಳ್ಳಿಹಾಕಿದೆ. ಹಿಂದೂ ಧರ್ಮಕ್ಕೆ ಬೆದರಿಕೆಯಿದೆ ಎಂದು ಕಳವಳ ವ್ಯಕ್ತಪಡಿಸುವ ಯಾವುದೇ ದಾಖಲೆಗಳಾಗಲಿ, ಸಾಕ್ಷಿಗಳಾಗಲಿ ಸಿಕ್ಕಿಲ್ಲ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ.
ಗೃಹ ಸಚಿವಾಲಯವು ಈ ಕುರಿತು ಸ್ಪಷ್ಟನೆ ನೀಡಿದ್ದು, ಹಿಂದೂ ಧರ್ಮಕ್ಕೆ 'ಬೆದರಿಕೆ' ಎಂದು ಕರೆಯಲ್ಪಡುವ ಯಾವುದೇ ದಾಖಲೆಗಳು ಅಥವಾ ಪುರಾವೆಗಳಿಲ್ಲ.
ಹಿಂದೂ ಧರ್ಮಕ್ಕೆ ಅಪಾಯವಿದೆ ಎಂಬ ಆಪಾದನೆ "ಕಾಲ್ಪನಿಕ" ಎಂದು ಕರೆಯುವ ಗೃಹ ಸಚಿವಾಲಯ, ಆಪಾದನೆಯನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷಿಗಳಿಲ್ಲ ಎಂದು ಹೇಳಿದೆ. ನಾಗ್ಪುರದ ಕಾರ್ಯಕರ್ತ ಮೊಹ್ನೀಶ್ ಜಬಲ್ಪುರೆ ಅವರು ಕಳೆದ ಆಗಸ್ಟ್ 31 ರಂದು ಸಲ್ಲಿಸಿದ ಆರ್ಟಿಐ ಅರ್ಜಿಗೆ ಸಚಿವಾಲಯ ಉತ್ತರಿಸಿದೆ, ಗೃಹ ಸಚಿವಾಲಯ ದೇಶದಲ್ಲಿ ಹಿಂದೂ ಧರ್ಮಕ್ಕೆ ಬೆದರಿಕೆಯಿದೆಯೆಂಬುದಕ್ಕೆ ಪುರಾವೆಗಳನ್ನು ತೋರಿಸಿ ಎಂದು ಕೇಳಿದ್ದರು.
ಗೃಹ ಸಚಿವಾಲಯದ ಪ್ರಮುಖ ಕಾರ್ಯದರ್ಶಿಯೊಬ್ಬರು 'ಹಿಂದೂ ಧರ್ಮದ ಬೆದರಿಕೆಗಳಿಗೆ' ಸಂಬಂಧಿಸಿದ ಯಾವುದೇ ಪ್ರಶ್ನೆಯು ಕಾಲ್ಪನಿಕ ಎಂದು ಹೇಳಿರುವುದು ಇದೇ ಮೊದಲು. ಅಂತಹ ಯಾವುದೇ ಊಹೆಯನ್ನು ಬೆಂಬಲಿಸಲು ಯಾವುದೇ ದಾಖಲೆಗಳಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಜಬಲ್ಪುರೆ ಸರ್ಕಾರದ ಪ್ರತಿಕ್ರಿಯೆ ಪಡೆದ ಬಳಿಕ ಹೇಳಿದ್ದಾರೆ.
ಒಂದು ತಿಂಗಳ ಬಳಿಕ ಗೃಹ ಸಚಿವಾಲಯ ಉತ್ತರ ನೀಡಿದ್ದು, ಇದೀಗ ಹಿಂದೂ ಧರ್ಮಕ್ಕೆ ಬೆದರಿಕೆ ಇದೆಯೆಂಬುದನ್ನು ಅಲ್ಲಗಳೆದಿದೆ.
ಗೃಹ ಸಚಿವಾಲಯ ಆಂತರಿಕ ಭದ್ರತೆ ಅಧಿಕಾರಿ ರಾಣಾ, ಜಬಲ್ಪುರೆಯ "ಕಾಲ್ಪನಿಕ" ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ, ಇದನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಪರಿಗಣಿಸಲಾಗಿದೆ ಎಂದಿದ್ದಾರೆ.
ಬಿಜೆಪಿಯು ಹಲವು ಬಾರಿ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹೇಳುತ್ತಿತ್ತು, ಆರ್ಎಸ್ಎಸ್ ಕೂಡ ತನ್ನ ಸ್ವಯಂ ಸೇವಕರಿಗೆ ಈ ಕುರಿತು ತಿಳಿಸುತ್ತಿತ್ತು. ಇದೀಗ ಅಂತಹ ಒಂದು ಸಾಧ್ಯತೆ ಮತ್ತು ಪದವನ್ನು ಗೃಹ ಸಚಿವಾಲಯವು ಕಾಲ್ಪನಿಕ ಎಂದು ಹೇಳಿರುವುದು ಭಾರಿ ಸಂಚಲನ ಸೃಷ್ಟಿಸಿದೆ.